ADVERTISEMENT

ಚಿತ್ರದುರ್ಗ: ಗಾಂಜಾ ಬೆಳೆದು ಸಿಕ್ಕಿಬಿದ್ದ ವೃದ್ಧ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 14:01 IST
Last Updated 15 ಸೆಪ್ಟೆಂಬರ್ 2021, 14:01 IST
ನಾಗಶಯನ
ನಾಗಶಯನ   

ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿಯ ಜಾನಪ್ಪ (76) ಎಂಬಾತ ಮನೆಯ ಹಿತ್ತಲಲ್ಲಿ ಗಾಂಜಾ ಬೆಳೆದು ಸಿಕ್ಕಿಬಿದ್ದಿದ್ದಾನೆ. ಅಬಕಾರಿ ಇಲಾಖೆಯ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ನಾಲ್ಕು ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

‘ರಾಮಗಿರಿ ಗ್ರಾಮದ ಬಹುತೇಕ ಮನೆಗಳು ಬೆಟ್ಟಕ್ಕೆ ಹೊಂದಿಕೊಂಡಿವೆ. ಹಿತ್ತಲ ಭಾಗ ಸಾರ್ವಜನಿಕರಿಗೆ ಕಾಣುವುದಿಲ್ಲ. ಇದನ್ನು ಅರಿತ ಆರೋಪಿ 36 ಗಾಂಜಾ ಗಿಡಗಳನ್ನು ಬೆಳೆದಿದ್ದನು. ಎರಡು ದಿನಗಳ ಹಿಂದೆಷ್ಟೇ ಇವನ್ನು ಕಟಾವು ಮಾಡಿ ಒಣಗಿಸಿ ಸಾಗಣೆ ಮಾಡಲು ಮುಂದಾಗಿದ್ದ’ ಎಂದು ಅಬಕಾರಿ ಉಪ ಆಯುಕ್ತ ನಾಗಶಯನ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಇದೇ ಗ್ರಾಮದ ಬಸವರಾಜಪ್ಪ (46) ಎಂಬಾತ ಕೂಡ ಮನೆಯ ಹಿಂಭಾಗದಲ್ಲಿ ಗಾಂಜಾ ಬೆಳೆದು ಸಂಗ್ರಹಿಸಿಟ್ಟಿದ್ದ. ಖಚಿತ ಮಾಹಿತಿಯ ಮೇರೆಗೆ ಮಂಗಳವಾರ ರಾತ್ರಿ ದಾಳಿ ನಡೆಸಲಾಯಿತು. ಆರೋಪಿ ತಲೆಮರೆಸಿಕೊಂಡಿದ್ದು, ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆರೋಪಿ ಮನೆಯಿಂದಲೂ ನಾಲ್ಕು ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮುಂಗಾರು ಹಂಗಾಮಿನಲ್ಲಿ ಗಾಂಜಾ ಬೆಳೆಯಲಾಗುತ್ತದೆ. ಜೂನ್‌ ಮತ್ತು ಜುಲೈ ತಿಂಗಳಲ್ಲಿ ಬಿತ್ತನೆ ಮಾಡಿದ್ದು, ಮೂರು ತಿಂಗಳಿಗೆ ಕಟಾವಿಗೆ ಬರುತ್ತದೆ. ಹೀಗೆ ಬೆಳೆದ ಗಾಂಜಾವನ್ನು ಕಿತ್ತು ಒಣಗಿಸಿ ಸಾಗಣೆ ಮಾಡಲಾಗುತ್ತಿದೆ. ಗಾಂಜಾ ಬೆಳೆಯುವ ಅನುಮಾನ ಇರುವ ಹಳ್ಳಿಗಳ ಮೇಲೆ ನಿಗಾ ಇಡಲಾಗಿದೆ. ವರ್ಷದಲ್ಲಿ ಆರು ಕೆ.ಜಿ. ಒಣ ಗಾಂಜಾ ಹಾಗೂ 134 ಕೆ.ಜಿ. ಹಸಿ ಗಾಂಜಾವನ್ನು ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.