ಹೊಳಲ್ಕೆರೆ: ಗೊಲ್ಲ ಸಮುದಾಯದ ಜನರು ಮೂಢನಂಬಿಕೆಗಳಿಂದ ಹೊರಬರಬೇಕು ಎಂದು ಕೃಷ್ಣ ಯಾದವಾನಂದ ಸ್ವಾಮೀಜಿ ಕರೆ ನೀಡಿದರು.
ತಾಲ್ಲೂಕಿನ ಅವಳಿ ಹಟ್ಟಿಯಲ್ಲಿ ಮಂಗಳವಾರ ಗೊಲ್ಲ ಸಮುದಾಯದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಗೊಲ್ಲ ಸಮುದಾಯಗಳಲ್ಲಿ ಮುಟ್ಟಾದ ಹಾಗೂ ಬಾಣಂತಿ ಮಹಿಳೆ
ಯರನ್ನು ಗ್ರಾಮದಿಂದ ಹೊರಗಿಡುವ ಕೆಟ್ಟ ಸಂಪ್ರದಾಯ ಇದೆ. ಈಚೆಗೆ ಸಮುದಾಯದ ಜನ ಜಾಗೃತರಾಗಿದ್ದು, ಈ ಮೂಢನಂಬಿಕೆಯಿಂದ ಹೊರಬ
ರುತ್ತಿದ್ದಾರೆ. ಆದರೆ ಇನ್ನೂ ಕೆಲವು ಸಂಪ್ರದಾಯಸ್ಥ, ಅನಕ್ಷರಸ್ಥ ಕುಟುಂಬ
ಗಳಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ಮುಟ್ಟು ಎನ್ನುವುದು ದೇಹಕ್ಕೆ ಸಂಬಂಧಿಸಿದ ಕ್ರಿಯೆ. ಅದಕ್ಕೂ ದೇವರಿಗೂ ಸಂಬಂಧ ಇಲ್ಲ. ಮುಟ್ಟಾದ ಮಹಿಳೆಯರನ್ನು ಮನೆಯಲ್ಲಿಟ್ಟುಕೊಂಡರೆ ದೇವರು ಶಿಕ್ಷೆ ಕೊಡುವುದಿಲ್ಲ. ಅವನು ಕರುಣಾಮಯಿ. ನಾವೀಗ ನಾಗರಿಕ ಸಮಾಜದಲ್ಲಿ ಬದುಕುತ್ತಿದ್ದು, ಕೆಟ್ಟ ಆಚರಣೆಗಳಿಂದ ಹೊರಬರಬೇಕು. ವೈಜ್ಞಾನಿಕ ಅಂಶ
ಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.
ಮಾಜಿ ಶಾಸಕ ಎ.ವಿ. ಉಮಾಪತಿ, ‘ಮೂಢನಂಬಿಕೆ ಆಚರಣೆಗೆ ಅನಕ್ಷರತೆಯೂ ಕಾರಣ. ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಶಿಕ್ಷಣ ಪಡೆದರೆ ಇಂತಹ ಜಾಗೃತಿ ಕಾರ್ಯಕ್ರಮ ನಡೆಸುವ ಅಗತ್ಯ ಇರುವುದಿಲ್ಲ’ ಎಂದರು.
ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದ ಕೆಂಚಮ್ಮ ಅವರನ್ನು ಸನ್ಮಾನಿಸಲಾಯಿತು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕೆ.ಸಿ. ರಮೇಶ್, ನಿವೃತ್ತ ಬಿಇಒ ಡಿ.ಎ. ತಿಮ್ಮಣ್ಣ, ಸಿಡಿಪಿಒ ತಿಪ್ಪಯ್ಯ, ಬಿಸಿಎಂ ಕಲ್ಯಾಣಾಧಿಕಾರಿ ಎಂ. ಪ್ರದೀಪ್ ಕುಮಾರ್, ನಿವೃತ್ತ ಎಂಜಿನಿಯರ್ ಷಣ್ಮುಖಪ್ಪ, ಶಿಕ್ಷಕಿ ಮಂಜುಳಾ, ಮುಖಂಡ ಗೌಡಪ್ಪ, ಸಿ. ರಂಗಸ್ವಾಮಿ, ಎಚ್. ಪದ್ಮಾವತಿ, ಮುರುಗೇಶ್, ಸಚಿನ್,
ಪೃಥ್ವಿ, ಗಿರೀಶ್, ಕೆ.ಜಿ. ಕುಸುಮಾ, ಪಿಡಿಒ ಕೃಷ್ಣಮೂರ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.