
ಹಿರಿಯೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟದ ಕೆಲ ಸಚಿವರು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೇಂದ್ರದ ಕಡೆ ಬೆರಳು ತೋರಿಸುವ ಚಾಳಿಯನ್ನು ಇನ್ನಾದರೂ ಬಿಡುವಂತೆ ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದರು.
ನಗರದ ಮಲ್ಲೇಶ್ವರ ಬಡಾವಣೆಯಲ್ಲಿ ಗುರುವಾರ ತಾಲ್ಲೂಕು ಬಿಜೆಪಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಬಿಜೆಪಿ ನೂತನ ಕಚೇರಿ ಉದ್ಘಾಟನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಬೇಕಾಬಿಟ್ಟಿ ಯೋಜನೆಗಳನ್ನು ಘೋಷಿಸಿ ರಾಜ್ಯ ಸರ್ಕಾರ ದಿವಾಳಿ ಆಗುತ್ತಿರುವುದನ್ನು ಹೇಳಿಕೊಳ್ಳಲಾರದೆ ಮೋದಿಯವರ ವಿರುದ್ಧ ಟೀಕೆ ಮಾಡುವುದನ್ನು ನಿಲ್ಲಿಸಲಿ. ಹಾಲು, ಮೊಸರು, ವಿದ್ಯುತ್, ಅಬಕಾರಿ, ಡೀಸೆಲ್, ಪೆಟ್ರೋಲ್, ನೋಂದಣಿ ಶುಲ್ಕ ದಿನ ಬಳಕೆಯ ವಸ್ತುಗಳ ಬೆಲೆ ಏರಿಸಿರುವ ಸಿಎಂ, ಜನರನ್ನು ತಪ್ಪುದಾರಿಗೆ ಎಳೆಯುವುದನ್ನು ನಿಲ್ಲಿಸಲಿ. ಈ ಬಾರಿಯಾದರೂ ರಾಜ್ಯದ ಜನರಿಗೆ ಬೆಲೆ ಏರಿಕೆಯ ಶಾಪ ತಟ್ಟದ ರೀತಿ ಬಜೆಟ್ ಮಂಡಿಸಲಿ ಎಂದರು.
ಮಂಡಲ ಅಧ್ಯಕ್ಷ ಕೆ. ಅಭಿನಂದನ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಎನ್.ಆರ್. ಲಕ್ಷ್ಮೀಕಾಂತ್, ಮುರಳಿ, ಮಾಧುರಿ ಗಿರೀಶ್, ವಿ. ವಿಶ್ವನಾಥ್, ದ್ಯಾಮೇಗೌಡ, ಎಂ.ಎಸ್. ರಾಘವೇಂದ್ರ, ಸೋಮಣ್ಣ, ಜೆ. ಬಿ. ರಾಜು, ಜೆಡಿಎಸ್ ಮುಖಂಡರಾದ ರವೀಂದ್ರಪ್ಪ, ಜವನಗೊಂಡನಹಳ್ಳಿ ಕೆ. ಮಂಜುನಾಥ್, ಹನುಮಂತರಾಯಪ್ಪ ಪಾಲ್ಗೊಂಡಿದ್ದರು.
ಸತ್ತುಹೋಗಿರುವ ಆಡಳಿತ
‘ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಒಂದೂವರೆ ವರ್ಷದಿಂದ ನಡೆಯುತ್ತಿರುವ ಬಹಿರಂಗ ಹಗ್ಗ–ಜಗ್ಗಾಟ ನೋಡಿ ರಾಜ್ಯದ ಜನ ಬೇಸತ್ತು ಹೋಗಿದ್ದಾರೆ. ಅಪರಾಧ ಕೃತ್ಯಗಳು ಮಿತಿಮೀರಿ ಹೆಚ್ಚಿವೆ. ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಯುವಕರು ಸ್ವಯಂ ಉದ್ಯೋಗ ನಡೆಸಲು ಕೌಶಲ ಅಭಿವೃದ್ಧಿಗೆ ರಾಜ್ಯ ಸರ್ಕಾರ ಒತ್ತು ನೀಡಬೇಕು. ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಹಪಾಹಪಿಯಲ್ಲಿ ಸಾಧುವಲ್ಲದ ಯೋಜನೆಗಳಿಗೆ ಖಜಾನೆಯಲ್ಲಿನ ಹಣವನ್ನು ಬಳಸಬಾರದು. ಸುಪ್ರೀಂ ಕೋರ್ಟ್ ಈಚೆಗೆ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಸದಾ ಗಮನದಲ್ಲಿಟ್ಟುಕೊಳ್ಳಬೇಕು’ ಎಂದು ಕಾರಜೋಳ ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.