ಸಂತೋಷ್ ಲಾಡ್
ಚಿತ್ರದುರ್ಗ: ‘ಸುಡುಗಾಡಿಗೆ ಹೋಗಿ ತೆಂಗಿನ ಕಾಯಿ ಒಡೆದರೂ ಜಿಎಸ್ಟಿ ಕಟ್ಟಬೇಕಾಗಿದೆ. ದೇಶದ ಶೇ 70ರಷ್ಟು ಜನರು ಜಿಎಸ್ಟಿ ಪಾವತಿಸುತ್ತಿದ್ದು, ಇದರಿಂದ ಶ್ರೀಮಂತರಿಗೆ ಮಾತ್ರ ಅನುಕೂಲವಾಗುತ್ತಿದೆ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
‘ಹಾಲು, ಮೊಸರು ಅರಿಶಿಣ–ಕುಂಕುಮಕ್ಕೂ ಜಿಎಸ್ಟಿ ತೆರಬೇಕಾಗಿದೆ. ಅಗತ್ಯ ವಸ್ತುಗಳಿಗೂ ತೆರಿಗೆ ಕಟ್ಟಬೇಕಾಗಿದೆ. ಜನರಿಗೆ ಸುಳ್ಳು ಹೇಳಿಕೊಂಡು, ಪಿಕ್ಚರ್ ನಡೆಸಿಕೊಂಡು ಹೋಗುತ್ತಿದ್ದಾರೆ. ಸಾರ್ವಜನಿಕರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
‘ಶ್ರೀಮಂತರ ಅಂದಾಜು ₹ 16.50 ಲಕ್ಷ ಕೋಟಿ ಸಾಲ ಮನ್ನಾ ಆಗಿದೆ. ರೈತರಿಗೆ, ಬಡವರಿಗೆ, ಮಧ್ಯಮ ವರ್ಗದ ಕುಟುಂಬಗಳಿಗೆ ಕೇಂದ್ರ ಸರ್ಕಾರ ಯಾವುದೇ ಅನುಕೂಲ ಮಾಡುತ್ತಿಲ್ಲ. ನಗದು ರಹಿತ ವಹಿವಾಟು ಎಂಬುದೇ ಮೋಸದ ವ್ಯವಹಾರ. ಎಲ್ಲೆಡೆ ನಕಲಿ ನೋಟುಗಳ ವಹಿವಾಟು ಪತ್ತೆಯಾಗಿದೆ. ₹ 26,000 ಕೋಟಿಯಷ್ಟು ₹ 2,000 ಮುಖಬೆಲೆಯ ನಕಲಿ ನೋಟು, ₹1.14 ಲಕ್ಷ ಕೋಟಿಯಷ್ಟು ₹ 500 ಮುಖಬೆಲೆಯ ನಕಲಿ ನೋಟುಗಳನ್ನು ಆರ್ಬಿಐ ಪತ್ತೆ ಮಾಡಿದೆ’ ಎಂದರು.
ಪ್ರಲ್ಹಾದ ಜೋಶಿ ವಿರುದ್ಧ ಆಕ್ರೋಶ: ‘ರಾಜ್ಯ ಸರ್ಕಾರಕ್ಕೆ ಅಕ್ಕಿ ಹಂಚುವ ಯೋಗ್ಯತೆ ಇಲ್ಲ’ ಎಂದು ಹೇಳಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ಧ ಸಂತೋಷ್ ಲಾಡ್ ಕಿಡಿಕಾರಿದರು. ‘ಕೇಂದ್ರ ಸಚಿವರಾಗಿ ಈ ರೀತಿ ಮಾತನಾಡುವುದು ಸರಿಯೇ? ಕೇಂದ್ರ ಸರ್ಕಾರ ರಾಜ್ಯಗಳಿಗೆ ನರೇಗಾ ಹಣ ಕೊಡುತ್ತಿಲ್ಲ. ನಾವು ಕೂಡ ಹಾಗೆಯೇ ಮಾತನಾಡಬಹುದಾ’ ಎಂದು ಪ್ರಶ್ನಿಸಿದರು.
‘ದೇಶದಲ್ಲಿ ಬಡತನ ಹೆಚ್ಚಳವಾಗುತ್ತಿರುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳುತ್ತಾರೆ. ಆದರೆ, ಪ್ರಧಾನಿ ಮೋದಿ ಅವರು ಬಡತನ ನಿರ್ಮೂಲನೆಯಾಗಿದೆ ಎಂದು ಹೇಳುತ್ತಿದ್ದಾರೆ. ಇಬ್ಬರಲ್ಲಿ ಯಾರ ಹೇಳಿಕೆ ಸರಿ’ ಎಂದು ಕೇಳಿದರು.
ಮುಖ್ಯಮಂತ್ರಿ ಬದಲಾವಣೆ ಕುರಿತಾದ ಪ್ರಶ್ನೆಗೆ ‘ಆ ಬಗ್ಗೆ ನಾನು ಏನೂ ಹೇಳುವುದಿಲ್ಲ. ಬಹಿರಂಗವಾಗಿ ಯಾವುದೇ ಹೇಳಿಕೆ ಕೊಡದಂತೆ ನಮ್ಮ ಶಾಸಕರಿಗೂ ಮನವಿ ಮಾಡಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.