ನಾಯಕನಹಟ್ಟಿ: ಮಧ್ಯಕರ್ನಾಟಕದ ಪ್ರಸಿದ್ಧ ಗುರುತಿಪ್ಪೇರುದ್ರಸ್ವಾಮಿ ಜಾತ್ರೆಯು ಮಾರ್ಚ್ 29ರಂದು ಮಧ್ಯಾಹ್ನ 3ಕ್ಕೆ ನಿಗದಿಯಾಗಿದೆ. ಜಾತ್ರೆಯ ಇತಿಹಾಸದಲ್ಲಿ ಮೊದಲಬಾರಿಗೆ ಹೊರಗಿನ ಭಕ್ತರನ್ನು ನಿರ್ಬಂಧಿಸಿ ಜಾತ್ರೆ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.
ಕೊರೊನಾ ಕಾರಣ ಜಿಲ್ಲಾಡಳಿತ ಜಾತ್ರೆಯನ್ನು ರದ್ದುಗೊಳಿಸಿ ಸರಳವಾಗಿ ಮತ್ತು ಸಂಪ್ರದಾಯಬದ್ಧವಾಗಿ ಚಿಕ್ಕ ರಥೋತ್ಸವಕ್ಕೆ ಅವಕಾಶ ನೀಡಿದೆ. ಅದಕ್ಕಾಗಿ ದೇವಾಲಯದ ಒಳಮಠ ಮತ್ತು ಹೊರಮಠದ ಆವರಣವನ್ನು ಸ್ವಚ್ಛಗೊಳಿಸಿ ವಿದ್ಯುತ್ ದೀಪಲಾಂಕಾರ ಮಾಡಲಾಗಿದೆ. ಎರಡೂ ದೇವಾಲಯಗಳ ಬಳಿ ಬೃಹತ್ ಚಪ್ಪರಗಳನ್ನು ಹಾಕಲಾಗಿದೆ.
ಭಕ್ತರ ಪ್ರವೇಶ ತಡೆಯಲು ಪೋಲಿಸ್ ಸರ್ಪಗಾವಲು: ‘ರಥಕ್ಕೆ ಮತ್ತು ಜಾತ್ರೆಗೆ ಡಿವೈಎಸ್ಪಿ ಮಟ್ಟದ ಭದ್ರತೆಯನ್ನು ಒದಗಿಸಲಾಗುವುದು. ಪಟ್ಟಣದ 7 ಸ್ಥಳಗಳಲ್ಲಿ ಚೆಕ್ಪೋಸ್ಟ್ಗಳನ್ನು ತೆರೆಯಲಾಗುವುದು. ಜಾತ್ರೆಯನ್ನು 18 ಸೆಕ್ಟರ್ಗಳಾಗಿ ವಿಂಗಡಿಸಿ ಪ್ರತಿ ಸೆಕ್ಟರ್ಗೂ ಡಿವೈಎಸ್ಪಿ, ಇನ್ಸ್ಪೆಕ್ಟರ್ ಸೇರಿ ಸಿಬ್ಬಂದಿ ನೇಮಿಸಲಾಗುವುದು. 10 ಸಂಚಾರ ಪೊಲೀಸ್ ದಳ, 20 ಸಹಾಯವಾಣಿಗಳು, 10 ಸ್ಕೈ ಸೆಂಟರ್ಗಳು, 3 ಕೆಎಸ್ಆರ್ಪಿ ತುಕಡಿಗಳು, 10 ಡಿಎಆರ್ ತುಕಡಿ,2 ಅಗ್ನಿಶಾಮಕ ದಳ, 2 ಆಂಬುಲೆನ್ಸ್, 1500ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸುವ ಯೋಜನೆ ರೂಪಿಸಿದ್ದೇವೆ. ಬಹುತೇಕ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು’ ಎಂದು ಡಿವೈಎಸ್ಪಿ ಕೆ.ವಿ. ಶ್ರೀಧರ್ ತಿಳಿಸಿದರು.
ಎರಡೂ ರಥದ ಸಿದ್ಧತೆ ಪೂರ್ಣ: ಜಾತ್ರೆಯ ಕೇಂದ್ರ ಬಿಂದುವೇ ದೊಡ್ಡರಥ. 75 ಟನ್ ತೂಕವಿರುವ ಹಾಗೂ 80 ಅಡಿ ಎತ್ತರವಿರುವ ರಥವು 5 ಚಕ್ರಗಳನ್ನು ಹೊಂದಿದೆ. ದೊಡ್ಡರಥ ಮತ್ತು ಚಿಕ್ಕರಥಕ್ಕೆ ಎರಡು ದಿನಗಳಿಂದ ಬಣ್ಣ ಬಣ್ಣದ ಬಾವುಟಗಳನ್ನು ಅಳವಡಿಸುವ ಕಾರ್ಯ ನಡೆದಿದೆ.
ಪಟ್ಟಣದ 10 ವಾರ್ಡ್ಗಳಲ್ಲೂ ರಸ್ತೆ, ಚರಂಡಿ ಸ್ವಚ್ಛಗೊಳಿಸಲಾಗಿದೆ. ಬೀದಿದೀಪ, 4 ಮೊಬೈಲ್ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.