ಚಿತ್ರದುರ್ಗ: ಮುಖ್ಯಮಂತ್ರಿ ಹುದ್ದೆ ಅತ್ಯಂತ ಗೌರವಯುತವಾದ ಸ್ಥಾನ. ಈ ಹುದ್ದೆಯಲ್ಲಿರುವ ವ್ಯಕ್ತಿ ಕಣ್ಣೀರು ಹಾಕುವಂತೆ ಮಾಡಿದ್ದು ದುರಂತ. ಅವರನ್ನು ಗೌರವಯುತವಾಗಿ ಬೀಳ್ಕೊಡುವ ವ್ಯವಸ್ಥೆಯನ್ನು ಬಿಜೆಪಿ ಮಾಡಬೇಕಿತ್ತು ಎಂದು ಮಾಜಿ ಸಚಿವ ಎಚ್.ಆಂಜನೇಯ ಅಭಿಪ್ರಾಯಪಟ್ಟಿದ್ದಾರೆ.
‘ನಾಯಕತ್ವ ಬದಲಾವಣೆ ಪಕ್ಷದ ಆಂತರಿಕ ವಿಷಯ. ಅಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸಿ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ. ಆದರೆ, ಯಡಿಯೂರಪ್ಪ ವಿಷಯದಲ್ಲಿ ಮಾತ್ರ ಎಲ್ಲವೂ ಉಲ್ಟಾ ಆಗಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬರುವವರೆಗೂ ಯಡಿಯೂರಪ್ಪ, ಬಳಿಕ ಬೇರೆಯವರು ಎಂಬುದು ಬಿಜೆಪಿ ವರಿಷ್ಠರ ಸಿದ್ಧಾಂತವಾಗಿದೆ’ ಎಂದು ಆರೋಪಿಸಿದ್ದಾರೆ.
‘ಯಡಿಯೂರಪ್ಪ ನಾಯಕತ್ವದ ಕಾರಣಕ್ಕೆ ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಬಂದಿವೆ. ಕಾಂಗ್ರೆಸ್-ಜೆಡಿಎಸ್ನ 17 ಶಾಸಕರು ಯಡಿಯೂರಪ್ಪ ನಾಯಕತ್ವ ನಂಬಿಯೇ ವಾಮಮಾರ್ಗದ ಸರ್ಕಾರ ರಚನೆಗೆ ಕಾರಣರಾದರು.
ಸರ್ಕಾರ ರಚನೆ ಆಗಲು ಯಡಿಯೂರಪ್ಪ ಅವರನ್ನು ಬಳಸಿಕೊಂಡು, ವಯಸ್ಸಿನ ನೆಪವೊಡ್ಡಿ ಅವರನ್ನು ಅಮಾನವೀಯವಾಗಿ ಕೆಳಗಿಳಿಸಿದ್ದು ಸರಿಯಲ್ಲ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಹಿರಿಯರನ್ನು ಅಗೌರವಿಸುವುದು ಬಿಜೆಪಿಯ ಹುಟ್ಟು ಗುಣ. ಪಕ್ಷವನ್ನು ಕಟ್ಟುವ ವ್ಯಕ್ತಿಯೇ ಬೇರೆ, ಅಧಿಕಾರವೆಂಬ ಹುತ್ತದಲ್ಲಿ ಹಾವಿನಂತೆ ಬಂದು ಸೇರುವ ವ್ಯಕ್ತಿಗಳೇ ಬೇರೆ ಎಂಬುದು ಬಿಜೆಪಿ ಸಿದ್ಧಾಂತ. ದೇಶದಾದ್ಯಂತ ಸಂಚರಿಸಿ ಪಕ್ಷ ಅಧಿಕಾರಕ್ಕೆ ಬರಲು ಕಾರಣಕರ್ತರಾದ ಎಲ್.ಕೆ.ಅಡ್ವಾಣಿ ಕೊನೆಗಳಿಗೆಯಲ್ಲಿ ಸದಾ ಕಣ್ಣೀರು ಸುರಿಸುವಂತೆ ಮಾಡಲಾಗಿದೆ’ ಎಂದು ಟೀಕಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.