ADVERTISEMENT

ಗುಡುಗು ಸಹಿತ ಆಲಿಕಲ್ಲು ಮಳೆ

ಹೊಸದುರ್ಗ: ಭರ್ತಿಯಾದ ಚೆಕ್‌ಡ್ಯಾಂಗಳು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 5:02 IST
Last Updated 23 ಏಪ್ರಿಲ್ 2021, 5:02 IST
ಹೊಸದುರ್ಗ ತಾಲ್ಲೂಕಿನ ನಾಗನಾಯಕನಕಟ್ಟೆಯಲ್ಲಿ ಗುರುವಾರ ಸುರಿದ ಮಳೆಗೆ ಸಮೀಪದ ಚೆಕ್‌ಡ್ಯಾಂ ಭರ್ತಿಯಾಗಿದೆ
ಹೊಸದುರ್ಗ ತಾಲ್ಲೂಕಿನ ನಾಗನಾಯಕನಕಟ್ಟೆಯಲ್ಲಿ ಗುರುವಾರ ಸುರಿದ ಮಳೆಗೆ ಸಮೀಪದ ಚೆಕ್‌ಡ್ಯಾಂ ಭರ್ತಿಯಾಗಿದೆ   

ಹೊಸದುರ್ಗ: ತಾಲ್ಲೂಕಿನ ಕಸಬಾ ಹಾಗೂ ಮತ್ತೋಡು ಹೋಬಳಿಯ ಹಲವೆಡೆ ಗುರುವಾರ ಸಂಜೆ ಗುಡುಗು, ಸಿಡಿಲು, ಬಿರುಗಾಳಿ, ಆಲಿಕಲ್ಲು ಸಹಿತ ಬಿರುಸಿನ ಮಳೆ ಸುರಿಯಿತು.

ಕಡುಬೇಸಿಗೆ ಬಿಸಿಲಿನ ಝಳಕ್ಕೆ ಕಾದಿದ್ದ ಇಳೆಗೆ ಕೆಲವೆಡೆ ಒಂದು ತಾಸು ಸುರಿದ ಅಶ್ವಿನಿ ಮಳೆಯು ತಂಪೆರೆದಿರುವುದು ಜನರಲ್ಲಿ ಸಂತಸವನ್ನುಂಟು ಮಾಡಿದೆ.

ಕಂಚೀಪುರ, ಬಾಲೇನಹಳ್ಳಿ, ಕರ್ಪೂರದಕಟ್ಟೆ, ಬ್ಯಾಡರಹಳ್ಳಿ, ಕಗ್ಗಲಕಟ್ಟೆ, ಕಿಟ್ಟದಾಳು, ನಾಗನಾಯಕನಕಟ್ಟೆ ಸುತ್ತಮುತ್ತ ಒಂದು ತಾಸು ಸುರಿದ ಬಿರುಸಿನ ಮಳೆಗೆ ಈ ಭಾಗದ ಕೆಲವು ಚೆಕ್‌ಡ್ಯಾಂಗಳು ಭರ್ತಿಯಾಗಿವೆ. ತೆಂಗು, ಅಡಿಕೆ, ಬಾಳೆ ತೋಟಗಳಿಗೆ ನೆರವಾಗಿದೆ. ಹೆಬ್ಬಳ್ಳಿ, ಹೇರೂರು, ಕುಂಬಾರಗಟ್ಟೆ, ಕೃಷ್ಣಾಪುರ, ನಾಗರಕಟ್ಟೆ, ಲಂಬಾಣಿಹಟ್ಟಿ, ಕೊಂಡಾಪುರ, ಮಲ್ಲಪ್ಪನಹಳ್ಳಿ, ಬಾಗೂರು, ಸಾಣೇಹಳ್ಳಿ ಸುತ್ತಮುತ್ತ ಹಲವು ಗ್ರಾಮಗಳಲ್ಲಿ ಅರ್ಧತಾಸಿಗೂ ಹೆಚ್ಚು ಹೊತ್ತು ಧಾರಾಕಾರ ಮಳೆ ಸುರಿಯಿತು.

ADVERTISEMENT

ಬಿರುಗಾಳಿಗೆ ಕೆಲವೆಡೆ ತೆಂಗು, ಅಡಿಕೆ ಮರಗಳು ಧರೆಗುರುಳಿವೆ. ಬಾಳೆ ತೋಟ ಹಾಗೂ ಕೋಳಿಫಾರಂಗಳಿಗೂ ಹಾನಿಯಾಗಿದೆ. ಕಟಾವು ಹಂತದಲ್ಲಿದ್ದ ಮಾವಿನಕಾಯಿಗೆ ಕೆಲವೆಡೆ ಆಲಿಕಲ್ಲು ಬಿದ್ದಿರುವುದು ಬೆಳೆಗಾರರಲ್ಲಿ ಆತಂಕವನ್ನುಂಟು ಮಾಡಿದೆ. ಪೂರ್ವ ಮುಂಗಾರು ಬಿರುಸಿನ ಮಳೆಗೆ ಕೆಲವೆಡೆ ತೋಟಗಾರಿಕೆ ಬೆಳೆಗಳಿಗೆ ನೆರವಾಗಿದೆ. ಜಮೀನು ಹದವಾಗಿದ್ದು, ಮಾಗಿ ಉಳುಮೆಗೆ ಸಹಕಾರಿ ಆಗಿರುವುದರಿಂದ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನೊಂದು ಹದ ಮಳೆ ಸುರಿದಲ್ಲಿ ಎಳ್ಳು, ಹೆಸರುಕಾಳು ಬಿತ್ತನೆ ಮಾಡಲಿದ್ದಾರೆ.

ಲಕ್ಕಿಹಳ್ಳಿ, ದೇವಿಗೆರೆ, ಮಾವಿನಕಟ್ಟೆ, ನಾಗೇನಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.