ADVERTISEMENT

ವಾಣಿವಿಲಾಸ ಜಲಾಶಯ ಉಳಿಸಲು ಆಗ್ರಹಿಸಿ ಹಿರಿಯೂರು ಬಂದ್‌

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 6:48 IST
Last Updated 1 ಜುಲೈ 2019, 6:48 IST
ಬಂದ್‌ನಿಂದಾಗಿ ಸ್ತಬ್ಧವಾಗಿರುವ ಹಿರಿಯೂರು
ಬಂದ್‌ನಿಂದಾಗಿ ಸ್ತಬ್ಧವಾಗಿರುವ ಹಿರಿಯೂರು   

ಚಿತ್ರದುರ್ಗ: ಡೆಡ್‌ ಸ್ಟೋರೇಜ್‌ ತಲುಪಿದ ನೀರನ್ನು ಉಳಿಸಿ, ವಾಣಿವಿಲಾಸ ಜಲಾಶಯ ರಕ್ಷಿಸುವಂತೆ ಒತ್ತಾಯಿಸಿ ಸೋಮವಾರ ಕರೆ ನೀಡಿದ ಬಂದ್‌ಗೆ ಹಿರಿಯೂರು ನಗರದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

ವಾಣಿವಿಲಾಸ ಹೋರಾಟ ಸಮಿತಿ ಕೆಲವು ದಿನಗಳಿಂದ ನಡೆಸುತ್ತಿದ್ದ ಹೋರಾಟ ಬಂದ್‌ ನಡೆಸುವ ಮೂಲಕ ತೀವ್ರ ಸ್ವರೂಪ ಪಡೆದುಕೊಂಡಿದೆ. ಪಕ್ಷಭೇದ ಮರೆತು ಎಲ್ಲ ರಾಜಕೀಯ ಮುಖಂಡರು ಬಂದ್‌ ಬೆಂಬಲಿಸಿದ್ದಾರೆ.

ವಾಣಿವಿಲಾಸ

ನಗರದ ಬಹುತೇಕ ಎಲ್ಲ ಅಂಗಡಿಗಳು ಬಾಗಿಲು ಮುಚ್ಚಿವೆ. ಎಂದಿನಂತೆ ತೆರೆದಿದ್ದ ಸರ್ಕಾರಿ ಕಚೇರಿಗಳಿಗೆ ತೆರಳಿದ ಹೋರಾಟ ಸಮಿತಿ ಮುಖಂಡರು ನೌಕರರ ಮನವೊಲಿಸಿ ಬಾಗಿಲು ಮುಚ್ಚಿಸಿದರು. ಶಾಲೆ–ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆಟೊ, ಬಸ್‌ ಸೇರಿದಂತೆ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ADVERTISEMENT

ವೇದಾವತಿ ಬಡಾವಣೆಯ ವೃತ್ತದಲ್ಲಿ ಜಮಾಯಿಸಿದ ರೈತ ಮುಖಂಡರು ಬಹಿರಂಗ ಸಭೆ ನಡೆಸಿದರು. ಚಳ್ಳಕೆರೆ, ಡಿಆರ್‌ಡಿಒ ಹಾಗೂ ಹಿರಿಯೂರು ಪಟ್ಟಣಕ್ಕೆ ನೀರು ಸರಬರಾಜು ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು. ಡೆಡ್‌ ಸ್ಟೋರೇಜ್‌ ನೀರು ಹೊರತೆಗೆದರೆ ಅಣೆಕಟ್ಟೆಗೆ ಧಕ್ಕೆಯಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.