ಹಿರಿಯೂರು: ಇಲ್ಲಿನ ನೆಹರೂ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಶಕ್ತಿ ಗಣಪತಿಯನ್ನು ಸೆ. 28 ರಂದು ಅದ್ದೂರಿ ಮೆರವಣಿಗೆ ಮೂಲಕ ಕೊಂಡೊಯ್ದು ವಿಸರ್ಜಿಸಲಾಗುವುದು ಎಂದು ಪೂಜಾ ಸಮಿತಿ ಅಧ್ಯಕ್ಷ ಖಾದಿ ರಮೇಶ್ ಹೇಳಿದರು.
ಬೆಳಿಗ್ಗೆ 11.30ಕ್ಕೆ ಮೆರವಣಿಗೆ ಆರಂಭವಾಗಲಿದೆ. ಗಾಂಧಿ ವೃತ್ತದಲ್ಲಿ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ನಗರದ ಹೊರವಲಯದ ಮರಡಿ ರಂಗಜ್ಜನ ತೋಟದ ಬಾವಿಯಲ್ಲಿ ವಿಸರ್ಜಿಲಾಗುವುದು.
ಮೂರು ಡಿ.ಜೆ. ಹಾಗೂ ಉರುಮೆ, ತಮಟೆ ವಾದ್ಯ, ಗೊಂಬೆ ಕುಣಿತ, ವೀರಗಾಸೆ, ಡೊಳ್ಳುಕುಣಿತ ಒಳಗೊಂಡಂತೆ 13 ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಲಿವೆ. 10 ಸಾವಿರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಗಿರೀಶ ಶಿಕ್ಷಣ ಸಂಸ್ಥೆ ಆವರಣದಲ್ಲಿ ಲಘು ಉಪಹಾರ, ವಿಸರ್ಜನಾ ಸ್ಥಳದಲ್ಲೂ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದರು.
54ನೇ ವರ್ಷದ ಶಕ್ತಿ ಗಣಪತಿ ಉತ್ಸವದಲ್ಲಿ ಶಾಸ್ತ್ರೀಯ ಸಂಗೀತ, ಭಕ್ತಿಗೀತೆ, ಜಾನಪದ ಗೀತೆ, ಹರಿಕಥೆ, ಶಾಸ್ತ್ರೀಯ ನೃತ್ಯ, ಆಧುನಿಕ ನೃತ್ಯ, ಆರ್ಕೆಸ್ಟ್ರಾ, ಬಯಲಾಟ ಸೇರಿ ಹಲವು ಕಿರಿಯ–ಹಿರಿಯ ಕಲಾವಿದರ ಕಲಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿತ್ತು. ಹಿಂದೂಗಳ ಜತೆ ಮುಸ್ಲಿಂ, ಕ್ರೈಸ್ತರು ಒಳಗೊಂಡ ಸರ್ವಧರ್ಮೀಯರು ಪೂಜೆಯಲ್ಲಿ ಪಾಲ್ಗೊಂಡಿದ್ದು ಈ ಬಾರಿಯ ವಿಶೇಷವಾಗಿತ್ತು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಆರ್. ಬಾಲಕೃಷ್ಣ, ಉಪಾಧ್ಯಕ್ಷೆ ಮಂಜುಳಾ, ಪೂಜಾ ಸಮಿತಿ ಗೌರವಾಧ್ಯಕ್ಷ ಈ. ಮಂಜುನಾಥ್, ಪದಾಧಿಕಾರಿಗಳಾದ ಎಚ್.ಪಿ. ಮಹಂತೇಶ್, ಜಗದೀಶ್, ಕಬ್ಬಡಿ ರವಿ, ವಿಠ್ಠಲ್, ಶಿವಕುಮಾರ್, ಶಿವಣ್ಣ, ಸುರೇಶ್, ರಮೇಶ್ ಬಾಬು, ಜ್ಣಾನೇಶ್, ಅಣ್ಣಪ್ಪ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.