ಚಳ್ಳಕೆರೆ: ಇತಿಹಾಸ– ಸ್ಮಾರಕಗಳನ್ನು ಸಂರಕ್ಷಿಸಲು ಜಿಲ್ಲಾಧಿಕಾರಿ ವೆಂಕಟೇಶ್ ಅವರು ಸೂಚನೆ ನೀಡಿದ್ದರಿಂದ ತಾಲ್ಲೂಕಿನ ದೊಡ್ಡಉಳ್ಳಾರ್ತಿ ಗ್ರಾಮದ ಕೆರೆ ಬಳಿ ಸರ್ಕಾರಿ ಭೂಮಿಯಲ್ಲಿ ಅವಜ್ಞೆಗೆ ಒಳಗಾಗಿದ್ದ ವೀರಗಲ್ಲು– ಮಾಸ್ತಿಕಲ್ಲುಗಳ ಸಂರಕ್ಷಣೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ರೇಹಾನ್ಪಾಷ ತಿಳಿಸಿದರು.
ವೀರಗಲ್ಲು ಮತ್ತು ಸ್ಮಾರಕ ಇರುವ ಸರ್ಕಾರಿ ಜಾಗದಲ್ಲಿ ಅಕ್ರಮ ಸಾಗುವಳಿ ಮಾಡಲಾಗಿತ್ತು. ಹೀಗಾಗಿ ಪುನಃ ಸರ್ವೇ ಮಾಡಿಸುವ ಮೂಲಕ ಒತ್ತುವರಿ ತೆರವುಗೊಳಿಸಲಾಗಿದೆ. ಮಾಸ್ತಿಕಲ್ಲು ಹಾಗೂ ವೀರಗಲ್ಲುಗಳ ಸುತ್ತ ಬೆಳೆದಿದ್ದ ಮುಳ್ಳುಜಾಲಿ ಗಿಡಗಳನ್ನು ಕಡಿಸಿ ಹಾಕಿಸಿ ಜಾಗವನ್ನು ಸಮತಟ್ಟು ಮಾಡಲಾಗಿದೆ ಎಂದು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಗ್ರಾಮದ ಐತಿಹಾಸಿಕ ಸ್ಮಾರಕಗಳು ಹಾಳಾಗದಂತೆ ಗ್ರಾಮ ಪಂಚಾಯಿತಿ ಆಡಳಿತದಿಂದ ಅವುಗಳ ಸುತ್ತ ಸುಸಜ್ಜಿತ ಕಲ್ಲು ಕಟ್ಟಡ, ತಂತಿ ಬೇಲಿ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ನಾಡಿನ ಪುರಾತತ್ವ ಇತಿಹಾಸ ನಿರೂಪಿಸುವ ಶಾಸನ, ವೀರಗಲ್ಲು, ಮಾಸ್ತಿಗಲ್ಲು ಹಾಗೂ ಸ್ಮಾರಕಗಳ ಸಂರಕ್ಷಣೆ ಬಗ್ಗೆ ನಿರ್ಲಕ್ಷ್ಯ ವಹಿಸದಿರುವಂತೆ ಗ್ರಾಮದ ಜನರಿಗೆ ತಿಳಿವಳಿಕೆ ನೀಡಲಾಗಿದೆ ಎಂದು ಕಂದಾಯ ಅಧಿಕಾರಿ ಲಿಂಗೇಗೌಡ ಹೇಳಿದರು.
ಗ್ರಾಮ ಲೆಕ್ಕಾಧಿಕಾರಿ ಕೇಶವಮೂರ್ತಿ, ಗ್ರಾಮ ಸಹಾಯಕ ಮಂಜುನಾಥ್, ತಿಪ್ಪೇಸ್ವಾಮಿ, ನಾಗರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.