ADVERTISEMENT

ಹೊಸದುರ್ಗ| ತುಂತುರು ಮಳೆ; ಸಾವೆ ಕೊಯ್ಲಿಗೆ ಅಡ್ಡಿ

ಜಮೀನುಗಳಿಗೆ ತೆರಳದ ಕಟಾವು ಯಂತ್ರಗಳು; ಕಾರ್ಮಿಕರ ಕೊರತೆ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 5:33 IST
Last Updated 2 ಸೆಪ್ಟೆಂಬರ್ 2025, 5:33 IST
ಹೊಸದುರ್ಗದ ಕೆಲ್ಲೋಡು ಗ್ರಾಮದ ಜಮೀನೊಂದರಲ್ಲಿ ಯಂತ್ರದ ಸಹಾಯದಿಂದ ಸಾವೆ ಕಟಾವು ಮಾಡುತ್ತಿರುವುದು
ಹೊಸದುರ್ಗದ ಕೆಲ್ಲೋಡು ಗ್ರಾಮದ ಜಮೀನೊಂದರಲ್ಲಿ ಯಂತ್ರದ ಸಹಾಯದಿಂದ ಸಾವೆ ಕಟಾವು ಮಾಡುತ್ತಿರುವುದು   

ಹೊಸದುರ್ಗ: ತಾಲ್ಲೂಕಿನಾದ್ಯಂತ ಒಂದು ತಿಂಗಳಿನಿಂದ ಆಗಾಗ ಸುರಿಯುತ್ತಿರುವ ತುಂತುರು ಮಳೆಯು ಸಾವೆ ಕೊಯ್ಲಿಗೆ ಅಡ್ಡಿಯಾಗಿದೆ. ಇದರಿಂದ ರೈತರು ಪರಿತಪಿಸುತ್ತಿದ್ದಾರೆ. 

ಮೇ ತಿಂಗಳಲ್ಲಿ ಬಿತ್ತನೆಯಾಗಿರುವ ಸಾವೆ ಸದ್ಯ ಕೊಯ್ಲಿಗೆ ಬಂದಿದೆ. ಮಳೆಯಿಂದಾಗಿ ಕಟಾವು ಸಾಧ್ಯವಾಗುತ್ತಿಲ್ಲ. ಭೂಮಿಯಲ್ಲಿ ತೇವಾಂಶವಿದ್ದು, ಕಟಾವು ಯಂತ್ರಗಳು ಜಮೀನುಗಳಿಗೆ ಬರುತ್ತಿಲ್ಲ. ಕೂಲಿ ಕಾರ್ಮಿಕರು ಮಳೆ, ಚಳಿಯಿಂದಾಗಿ ಜಮೀನುಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಬೆಳೆದು ನಿಂತಿರುವ ಸಾವೆ ಕಾಳುಗಳೆಲ್ಲಾ ಭೂಮಿ ಸೇರುತ್ತಿವೆ. ಇಷ್ಟು ದಿನ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತರ ಸ್ಥಿತಿ ಚಿಂತಾಜನಕವಾಗಿದೆ.

‘2 ಎಕರೆ ಭೂಮಿಯಲ್ಲಿ ಸಾವೆ ಬಿತ್ತನೆ ಮಾಡಲಾಗಿತ್ತು. ಬಿತ್ತನೆ ಹಂತದಲ್ಲಿ ಉತ್ತಮ ಮಳೆಯಾಗಿತ್ತು. ಕಾಳು ಕಟ್ಟುವ ಹಂತದಲ್ಲಿ ಒಂದೂವರೆ ತಿಂಗಳು ಮಳೆಯಾಗಲಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬರಲಿಲ್ಲ. ಕಾಳು ಕಟ್ಟುವುದು ವಿಳಂಬವಾಯಿತು. ಇರುವಷ್ಟಾದರೂ ಸಿಗಲಿ ಅಂದುಕೊಂಡರೆ ಕಟಾವಿನ ಹಂತದಲ್ಲಿ ಮಳೆಯಾಗುತ್ತಿದ್ದು, ಕೊಯ್ಲಿಗೆ ಸಮಸ್ಯೆಯಾಗಿದೆ. ಕಳೆದ ಬಾರಿ ಎಕರೆಗೆ 6ರಿಂದ 7 ಕ್ವಿಂಟಲ್ ಸಾವೆ ದೊರೆತಿತ್ತು. ಈ ಬಾರಿ 2ರಿಂದ 3 ಕ್ವಿಂಟಲ್ ಇಳುವರಿ ಬಂದರೆ ಹೆಚ್ಚು’ ಎಂದು ತಾಲ್ಲೂಕಿನ ಶ್ರೀರಾಂಪುರ ಹೋಬಳಿಯ ಸೋಮೇನಹಳ್ಳಿ ರೈತ ಪಾಂಡುರಂಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಮೂರು ಎಕರೆ ಭೂಮಿಯಲ್ಲಿ ಸಾವೆ ಬಿತ್ತನೆಗೆ ₹ 40,000 ವ್ಯಯಿಸಿದ್ದೇನೆ. ಮಳೆ ಅಧಿಕವಾಗಿ ಇಳುವರಿ ಕಡಿಮೆಯಾಗುತ್ತಿದೆ. ಫಸಲು ಕೈಗೆಟುಕುತ್ತಿಲ್ಲ. ಈಗಾಗಲೇ ಕಟಾವು ಆಗಿರುವ ಸಾವೆಯನ್ನು ಒಣಗಿಸಲು ಬಿಸಿಲು ಇಲ್ಲ. ಜಮೀನುಗಳಲ್ಲಿರುವ ಸಾವೆಯ ಹುಲ್ಲು ಮಳೆಗೆ ನೆನೆಯುತ್ತಿದೆ. ಜಾನುವಾರುಗಳಿಗೂ ಮೇವು ಇಲ್ಲದಂತಾಗಿದೆ. ಕಾಳುಗಳು ಸ್ವಲ್ಪ ಹಸಿ ಇದ್ದರೂ ಮಾರುಕಟ್ಟೆಯಲ್ಲಿ ದರ ಕುಸಿತ ಎದುರಿಸಬೇಕಾಗುತ್ತದೆ’ ಎಂದು ಕಿಟದಾಳ್ ಗ್ರಾಮದ ರೈತ ರಂಗನಾಥ್ ಬೇಸರ ವ್ಯಕ್ತಪಡಿಸಿದರು. 

‘ಸಿರಿಧಾನ್ಯಗಳಿಗೆ ಬೆಂಬಲಬೆಲೆ ಘೋಷಣೆಯಾಗಿದ್ದು, ರೈತರು ಯಾವುದೇ ಕಾರಣಕ್ಕೂ ಹೊರಗಿನ ಮಾರುಕಟ್ಟೆಗಳಿಗೆ ತೆರಳುವುದು ಬೇಡ. ಸದ್ಯದಲ್ಲೇ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಸಾವೆ ಎಂದು ನೋಂದಾಯಿ‌ಸಿಕೊಂಡಿರುವ ರೈತರಿಗೆ ಮಾತ್ರ ಅವಕಾಶವಿದೆ. ಕೊಯ್ಲು ಮುಗಿದ ಕೂಡಲೇ ಮಾರುಕಟ್ಟೆಗೆ ತರುವುದು ಬೇಡ, ಚೆನ್ನಾಗಿ ಒಣಗಿಸಿ ತರಬೇಕು. ಮೇ ಕೊನೆಯ ವಾರದಲ್ಲಿ ಬಿತ್ತನೆಯಾಗಿರುವ ಸಾವೆಯ ಇಳುವರಿ ಕುಂಠಿತವಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಎಸ್. ಈಶ.

ಹೊಸದುರ್ಗದ ಶ್ರೀರಾಂಪುರ ಹೋಬಳಿಯ ಸೋಮಸಂದ್ರ ಗ್ರಾಮದಲ್ಲಿ ರೈತರೊಬ್ಬರು ಮನೆ ಒಳಗೆ ಸಾವೆ ಒಣಗಿಸುತ್ತಿರುವುದು

‘ಖರೀದಿ ಕೇಂದ್ರದಲ್ಲೇ ಮಾರಿ’:

ಸಿರಿಧಾನ್ಯ ಬೆಳೆಗೆ ಬೆಂಬಲಬೆಲೆ ಘೋಷಣೆಯಾಗಿದೆ. ಸೆಪ್ಟೆಂಬರ್ ಕೊನೆಯ ವಾರ ಅಥವಾ ಅಕ್ಟೋಬರ್ ಮೊದಲನೇ ವಾರದಲ್ಲಿ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಈ ಕಾರ್ಯ ನಡೆಸಲಾಗುವುದು. ರೈತರು ಖರೀದಿ ಕೇಂದ್ರದಲ್ಲೇ ಸಾವೆಯನ್ನು ಮಾರಬೇಕು. ಸೊಸೈಟಿಯಲ್ಲಿ ಖರೀದಿ ಕೇಂದ್ರ ಆರಂಭಿಸುವ ಬಗ್ಗೆ ಚರ್ಚೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.