
ಧರ್ಮಪುರ: ಗ್ರಾಮ ಪಂಚಾಯಿತಿ ಹಂತದಲ್ಲಿ ಮಕ್ಕಳಿಗಾಗಿ ವಿಶೇಷ ಗ್ರಾಮಸಭೆ ಹಮ್ಮಿಕೊಂಡಿರುವುದು ಪ್ರಜಾಸತ್ತಾತ್ಮಕ ಸೌಲಭ್ಯಗಳನ್ನು, ಹಕ್ಕುಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ ಎಂದು ವಕೀಲೆ ಎಂ.ಮೀನಾಕ್ಷಿ ತಿಳಿಸಿದರು.
ಸಮೀಪದ ಈಶ್ವರಗೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಕ್ಕಳ ವಿಶೇಷ ಗ್ರಾಮ ಸಭೆ ಉದ್ದೇಶಿಸಿ ಮಾತನಾಡಿದರು.
ಶಿಕ್ಷಕರು ವಿದ್ಯಾರ್ಥಿನಿಯರ ಬಗ್ಗೆ ಕಾಳಜಿ ಹೊಂದಿರಬೇಕು. ಮಕ್ಕಳ ಕಳ್ಳ ಸಾಗಾಣಿಕೆ ಪ್ರಕರಣಗಳು ನಡೆಯುತ್ತಿದ್ದು, ಮನೆಯಲ್ಲಿ ಪಾಲಕರು ತಮ್ಮ ಮಕ್ಕಳ ಮೇಲೆ ನಿಗಾ ವಹಿಸಬೇಕು. ಮಕ್ಕಳಿಗಾಗಿಯೇ ಸರ್ಕಾರದಿಂದ ವಿಶೇಷ ಸೌಲಭ್ಯಗಳಿದ್ದು, ಅವುಗಳನ್ನು ಬಳಸಿಕೊಳ್ಳಬೇಕು ಎಂದರು.
‘ಪ್ರೌಢಶಾಲೆಯಲ್ಲಿ ಹದಿಹರೆಯದ ಮಕ್ಕಳಿದ್ದು, ಶಿಕ್ಷಕರು ಅವರಿಗೆ ಪೋಕ್ಸೊ ಬಗ್ಗೆ ತಿಳಿಸಬೇಕು. ಮೊಬೈಲ್ ಗೀಳಿನಿಂದ ವಿದ್ಯಾರ್ಥಿಗಳ ವ್ಯಾಸಂಗ ಕುಂಠಿತವಾಗುತ್ತಿದೆ. ದೃಶ್ಯ ಮಾಧ್ಯಮಗಳು ದೃಶ್ಯಗಳನ್ನು ವೈಭವೀಕರಿಸದಂತೆ ತಡೆಯಲು ಕಟ್ಟುನಿಟ್ಟಿನ ಕಾನೂನು ಬರಬೇಕಿದೆ’ ಎಂದು ಶಿಕ್ಷಕಿ ಸುನಂದಮ್ಮ ಅಭಿಪ್ರಾಯಪಟ್ಟರು.
‘ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರ ವಹಿಸಬೇಕು’ ಎಂದು ವೈದ್ಯೆ ಡಾ.ಯಶಸ್ವಿನಿ ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಮ್ಮ ಚಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ವಕೀಲ ಪಾಂಡುರಂಗಪ್ಪ, ಪಿಡಿಒ ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯರಾದ ಸುಭದ್ರಮ್ಮ, ಜಗನ್ನಾಥ್, ಮುಖ್ಯ ಶಿಕ್ಷಕ ರಾಜಣ್ಣ, ರಮೇಶ್, ಆರ್.ದೊರೆ, ಭಾಗ್ಯಮ್ಮ, ರಂಗಸ್ವಾಮಿ, ವೀರೇಂದ್ರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.