ADVERTISEMENT

ಒಳಮೀಸಲಾತಿ: ಚುನಾವಣೆಯೊಳಗೆ ಜಾರಿಯಾಗಲಿ

ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 4:59 IST
Last Updated 5 ಡಿಸೆಂಬರ್ 2022, 4:59 IST
ಹಿರಿಯೂರು ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿ ಭಾನುವಾರ ಒಳಮೀಸಲಾತಿ ಜಾರಿ ಪಾದಯಾತ್ರೆಯನ್ನು ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಸ್ವಾಗತಿಸಿದರು
ಹಿರಿಯೂರು ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿ ಭಾನುವಾರ ಒಳಮೀಸಲಾತಿ ಜಾರಿ ಪಾದಯಾತ್ರೆಯನ್ನು ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಸ್ವಾಗತಿಸಿದರು   

ಹಿರಿಯೂರು:ಮುಂಬರುವ ವಿಧಾನಸಭೆ ಚುನಾವಣೆ ಒಳಗೆ ಮಾದಿಗ ಒಳಮೀಸಲಾತಿ ಜಾರಿಯಾಗಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಆದಿಜಾoಬವ ಮಠದ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಎಚ್ಚರಿಸಿದರು.

ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಸ್ಥಾಪಕ, ಹೋರಾಟಗಾರ ಹರಿಹರದ ಪ್ರೊ.ಬಿ. ಕೃಷ್ಣಪ್ಪ ಸ್ಮಾರಕದಿಂದ ಬೆಂಗಳೂರಿಗೆ ಹೊರಟಿರುವ ಮಾದಿಗ ಒಳ ಮೀಸಲಾತಿ ಜಾರಿ ಪಾದಯಾತ್ರೆಯನ್ನು ಭಾನುವಾರ ಸ್ವಾಗತಿಸಿ ಮಾತನಾಡಿದರು.

‘ಒಳಮೀಸಲಾತಿಗಾಗಿ ಮೂರು ದಶಕಗಳಿಂದ ಹೋರಾಟ ನಡೆಯುತ್ತಿ ದ್ದರೂ ಯಾವುದೇ ಸರ್ಕಾರಗಳು ಸಮುದಾಯಕ್ಕೆ ನ್ಯಾಯ ಕೊಡದೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿವೆ. ಕಾಂಗ್ರೆಸ್ ಸರ್ಕಾರ ಸದಾಶಿವ ಆಯೋಗ ರಚನೆ ಮಾಡಿದರೆ, ಬಿಜೆಪಿ ಸರ್ಕಾರ ಆಯೋಗದ ವರದಿ ಸ್ವೀಕರಿಸಿದ್ದು ಬಿಟ್ಟರೆ ಬೇರೆನೂ ಮಾಡಲಿಲ್ಲ. ಜೆಡಿಎಸ್ ಅಧಿಕಾರದಲ್ಲಿದ್ದಾಗ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ’ ಎಂದು ಆರೋಪಿಸಿದರು.

ADVERTISEMENT

ರಾಜ್ಯ ಸರ್ಕಾರ ಒಳಮೀಸಲಾತಿ ಬಗ್ಗೆ ಸ್ಪಷ್ಟ ನಿಲುವು ತಳೆದು ವರದಿಯನ್ನು ಕೇಂದ್ರಕ್ಕೆ ಕಳುಹಿಸಿಕೊಡಬೇಕು ಎಂದು ಆಗ್ರಹಿಸಿದರು.

ಒಳಮೀಸಲಾತಿ ಜಾರಿ ಹೋರಾಟಕ್ಕೆ ಇಳಿದಿರುವವರು ನ್ಯಾಯ ಸಿಗುವವರೆಗೂ ಹಿಂದೆ ಸರಿಯಬಾರದು. ಸಮುದಾಯದ ಸ್ವಾಮೀಜಿಗಳು, ಜನಪ್ರತಿನಿಧಿಗಳು, ಹೋರಾಟಗಾರರು, ವಿವಿಧ ಸಂಘಟನೆಗಳು ಒಗ್ಗಟ್ಟು ಪ್ರದರ್ಶಿಸಬೇಕು. ಇಲ್ಲದಿದ್ದಲ್ಲಿ ನ್ಯಾಯ ಸಿಗುವುದು ಕಷ್ಟ ಎಂದು ಆತಂಕ ವ್ಯಕ್ತಪಡಿಸಿದರು.

ಪಾದಯಾತ್ರಿಗಳೊಂದಿಗೆ ಸ್ವಾಮೀಜಿ ಹೆಜ್ಜೆ ಹಾಕಿದರು. ಅಂಬಣ್ಣಆರೋಲಿಕರ್, ಕರಿಯಪ್ಪ ಗುಡಿಮನಿ, ಡಾ.ಜೆ.ಆರ್. ಸುಜಾತಾ, ರಂಗಸ್ವಾಮಿ, ಶಿವಕುಮಾರ್, ಕಾಂತರಾಜ್, ಗಿರೀಶ್, ದೇವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.