ADVERTISEMENT

ಚಿತ್ರದುರ್ಗ: ವಿರೂಪಾಕ್ಷಪ್ಪ, ಶಿವಣ್ಣಗೆ ಜಾನಪದ ಅಕಾಡೆಮಿ ಗರಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 7:46 IST
Last Updated 24 ಡಿಸೆಂಬರ್ 2025, 7:46 IST
ಜಿ.ಎನ್‌.ವಿರೂಪಾಕ್ಷಪ್ಪ
ಜಿ.ಎನ್‌.ವಿರೂಪಾಕ್ಷಪ್ಪ   

ಚಿತ್ರದುರ್ಗ: ತಾಲ್ಲೂಕಿನ ಆಯಿತೋಳು ಗ್ರಾಮದ ಜಾನಪದ ಕಲಾವಿದ ಜಿ.ಎನ್‌.ವಿರೂಪಾಕ್ಷಪ್ಪ ಹಾಗೂ ಚಳ್ಳಕೆರೆ ತಾಲ್ಲೂಕಿನ ಮೀರಾಸಾಬಿಹಳ್ಳಿ ಗ್ರಾಮದ ಸಾಹಿತಿ ಮೀರಾಸಾಬಿಹಳ್ಳಿ ಶಿವಣ್ಣ ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ದೊರೆತಿದೆ. 

ಜಾನಪದ ರಂಗಭೂಮಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಜಿ.ಎನ್‌.ವಿರೂಪಾಕ್ಷಪ್ಪ ಅವರಿಗೆ 2025ನೇ ಸಾಲಿನ ಗೌರವ ಪ್ರಶಸ್ತಿ ಅರಸಿ ಬಂದಿದೆ. ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೃಷಿ ಮಾಡಿರುವ ಮೀರಾಸಾಬಿಹಳ್ಳಿ ಶಿವಣ್ಣ ಅವರಿಗೆ 2024ನೇ ಸಾಲಿನ ಪುಸ್ತಕ ಬಹುಮಾನ ಸಂದಿದೆ. ಅವರ ‘ಕಾಡುಗೊಲ್ಲರ ಸಂಸ್ಕೃತಿ ಮತ್ತು ಕಾವ್ಯಗಳು’ ಕೃತಿಗೆ ಪ್ರಶಸ್ತಿ ಒಲಿದಿದೆ.

ಜಾನಪದ ರಂಗಭೂಮಿ ಕ್ಷೇತ್ರದಲ್ಲಿ ನೂರಾರು ಸಾಮಾಜಿಕ ನಾಟಕ, ಬೀದಿ ನಾಟಕಗಳು, ಪೌರಾಣಿಕ ನಾಟಕಗಳು ಹಾಗೂ ಯಕ್ಷಗಾನ ನಾಟಕಗಳು, ಐತಿಹಾಸಿಕ ನಾಟಕ ಕ್ಷೇತ್ರದಲ್ಲಿ ವಿರೂಪಾಕ್ಷಪ್ಪ ಅವರು ಹಲವು ದಶಕಗಳಿಂದ ತೊಡಗಿಸಿಕೊಂಡು ಜನಮನ್ನಣೆ ಗಳಿಸಿದ್ದಾರೆ. ನಾಟಕ ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನವನ್ನೂ ನೀಡಿದ್ದಾರೆ. ಕುರುಕ್ಷೇತ್ರ, ಅಕ್ಷಯಂಬರ ರಕ್ತರಾತ್ರಿ, ರಾಮಾಯಣ ಮುಂತಾದ ಅನೇಕ ನಾಟಕಗಳು ಅವರಿಗೆ ಹೆಸರು ತಂದುಕೊಟ್ಟಿವೆ. 

ADVERTISEMENT

ಐತಿಹಾಸಿಕ ನಾಟಕದಲ್ಲಿ ‘ರಾಜವೀರ ಮದಕರಿ ನಾಯಕ’ ಅವರಿಗೆ ಅಪಾರ ಪ್ರಸಿದ್ಧಿ ತಂದುಕೊಟ್ಟಿದೆ. ಬಡವ ಬದುಕಲೇಬೇಕು, ರತ್ನ ಮಾಂಗಲ್ಯ, ಕುಡುಕ ಕಟ್ಟಿದ ತಾಳಿ, ಮಗ ತಂದ ಮಾಂಗಲ್ಯ, ದೀಪ ರತ್ನ, ಮಾಂಗಲ್ಯ ಸರ್ಪ ಮುಂತಾದ ಸಾಮಾಜಿಕ ನಾಟಕಗಳಲ್ಲಿ ಅವರು ತಮ್ಮ ಪ್ರತಿಭೆ ಬೆಳೆಸಿದ್ದಾರೆ. 

ಕಳೆದ ನಾಲ್ಕು ದಶಕಗಳಿಂದ ಚಳ್ಳಕೆರೆಯನ್ನೇ ಒಂದು ಸಾಂಸ್ಕೃತಿಕ ಕೇಂದ್ರವನ್ನಾಗಿಸಿಕೊಂಡ, ಚಿತ್ರದುರ್ಗ ಜಿಲ್ಲೆಯನ್ನು ತಮ್ಮ ಅಧ್ಯಯನ ಕೇಂದ್ರ ಮಾಡಿಕೊಂಡ ಮೀರಾಸಾಬಿಹಳ್ಳಿ ಶಿವಣ್ಣ ಅವರು ಅಪಾರ ಜಾನಪದ ಕೃಷಿ ಮಾಡಿದ್ದಾರೆ. ಇಲ್ಲಿಯ ಪಶುಪಾಲಕ ಬುಡಕಟ್ಟುಗಳಾದ ಕಾಡುಗೊಲ್ಲರು ಮತ್ತು ಮ್ಯಾಸಬೇಡರನ್ನು ಕುರಿತು ನಡೆಸಿದ ಕ್ಷೇತ್ರಕಾರ್ಯ, ಪ್ರಕಟಿಸಿದ 40ಕ್ಕೂ ಹೆಚ್ಚು ಕೃತಿಗಳು ಸಾಹಿತ್ಯ ಕ್ಷೇತ್ರದ ಆಸ್ತಿಯಾಗಿವೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಅಜ್ಞಾತವಾಗಿದ್ದ ಜನಪದ ಆಚರಣೆಗಳನ್ನು, ಜನಪದ ಕಲೆಗಳನ್ನು ಹಾಗೂ ಎಲೆಮರೆಯ ಕಾಯಿಯಂತಿದ್ದ ಜನಪದ ಕಲಾವಿದರನ್ನು ಗುರುತಿಸಿ-ಗೌರವಿಸಿ, ನಾಡಿಗೆ ಪರಿಚಯಿಸಿ ಜಿಲ್ಲೆಯ ಸಾಂಸ್ಕೃತಿಕ ಶ್ರೀಮಂತಿಕೆಯ ಅನಾವರಣ ಮಾಡಿದ್ದಾರೆ. ಪ್ರತಿಭಾವಂತ ಕಿರಿಯ ಲೇಖಕರನ್ನು ಗುರುತಿಸಿ ತಮ್ಮ ಪರಿಚಿತ ವಲಯದ ಪ್ರಕಾಶಕರ ಮೂಲಕ ಅವರ ಕೃತಿಗಳನ್ನು ಪ್ರಕಟಿಸುವ ಉದಾರತೆ ಮೆರೆದಿದ್ದಾರೆ.

ಮೀರಾಸಾಬಿಹಳ್ಳಿ ಶಿವಣ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.