ADVERTISEMENT

ಮೈತ್ರಿಯಿಂದಾಗಿ ಗೋವಿಂದ ಕಾರಜೋಳ ಗೆಲುವು: ಎಂ.ಜಯಣ್ಣ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 5:53 IST
Last Updated 24 ಫೆಬ್ರುವರಿ 2026, 5:53 IST
ಜೆಡಿಎಸ್  ಕಚೇರಿಯಲ್ಲಿ ಸೋಮವಾರ ನಡೆದ ನೂತನ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ತಾಲ್ಲೂಕು ಘಟಕಗಳ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು
ಜೆಡಿಎಸ್  ಕಚೇರಿಯಲ್ಲಿ ಸೋಮವಾರ ನಡೆದ ನೂತನ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ತಾಲ್ಲೂಕು ಘಟಕಗಳ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು    

ಚಿತ್ರದುರ್ಗ: ‘ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡ ಕಾರಣ ಗೋವಿಂದ ಕಾರಜೋಳ ಅವರ ಗೆಲುವು ಸಾಧ್ಯವಾಯಿತು. ಜಿಲ್ಲೆಯಲ್ಲಿ ಜೆಡಿಎಸ್‌ ಶಾಸಕರು ಇಲ್ಲದಿದ್ದರೂ ಕಾರ್ಯಕರ್ತರು ಬಹಳ ವಿಶ್ವಾಸದಿಂದ ಇದ್ದಾರೆ. ಮುಂದೆಯೂ ಎಲ್ಲರ ವಿಶ್ವಾಸ ಪಡೆದು ಪಕ್ಷ ಸಂಘಟನೆ ಮಾಡಬೇಕು’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಂ.ಜಯಣ್ಣ ಹೇಳಿದರು.

ಜೆಡಿಎಸ್‌ ಕಚೇರಿಯಲ್ಲಿ ಸೋಮವಾರ ನಡೆದ ನೂತನ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ತಾಲ್ಲೂಕು ಘಟಕಗಳ ಅಧ್ಯಕ್ಷರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಎರಡರಿಂದ ಮೂರು ಸ್ಥಾನಗಳನ್ನಾದರೂ ಗೆಲ್ಲಬೇಕು. ಪಕ್ಷದಲ್ಲಿ ಅನುಭವಿಗಳಿದ್ದಾರೆ. ಎಲ್ಲರ ಮಾರ್ಗದರ್ಶನದಂತೆ ಪಕ್ಷವನ್ನು ಮುನ್ನಡೆಸಿಕೊಂಡು ಹೋಗಬೇಕಾಗಿದೆ. ಕಾರ್ಯಕರ್ತರು ಪಕ್ಷವನ್ನು ನಂಬಿಕೊಂಡಿದ್ದಾರೆ. ಅವರನ್ನು ಪಕ್ಷ ಸಂಘಟನೆಯಲ್ಲಿ ತೊಡಗಿಸಬೇಕು’ ಎಂದರು.

ADVERTISEMENT

‘ಒಂದು ಕಾಲದಲ್ಲಿ ಜಿಲ್ಲೆಯು ಜೆಡಿಎಸ್‌ಗೆ ಭದ್ರಕೋಟೆಯಾಗಿತ್ತು. ಹಿರಿಯೂರಿನಿಂದ ಗೆದ್ದಿದ್ದ ಡಿ. ಮಂಜುನಾಥ್‍ರವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ರಾಷ್ಟ್ರೀಯ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ತಂತ್ರಗಾರಿಕೆ ಹೆಣೆಯಬೇಕಿದೆ’ ಎಂದು ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಿ. ಕಾಂತರಾಜ್ ಹೇಳಿದರು.

‘ಬುಡಕಟ್ಟು ಜನಾಂಗ ಪ್ರಬಲವಾಗಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವ ನಾಯಕತ್ವ ಬೇಕು. ನೂತನ ಅಧ್ಯಕ್ಷ ಮಂಜುನಾಥ್‌ ಅವರಿಗೆ ಜಿಲ್ಲೆಯಲ್ಲಿ ಹೂವಿನ ಹಾಸಿಗೆಯಿಲ್ಲ. ಅನೇಕ ಸವಾಲುಗಳಿವೆ’ ಎಂದು ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಡಿ. ಯಶೋಧರ ಮಾತನಾಡಿದರು.

ರವೀಂದ್ರಪ್ಪ, ಕಾರ್ಯಾಧ್ಯಕ್ಷ ಜೆ.ಬಿ. ಶೇಖರ್, ಪ್ರಧಾನ ಕಾರ್ಯದರ್ಶಿ ಡಿ. ಗೋಪಾಲಸ್ವಾಮಿ ನಾಯಕ, ನಗರಸಭೆ ಮಾಜಿ ಸದಸ್ಯ ನಸ್ರುಲ್ಲಾ, ಯುವ ವಕೀಲ ಒ. ಪ್ರತಾಪ್‍ಜೋಗಿ, ಮಠದಹಟ್ಟಿ ವೀರಣ್ಣ, ಎಂ.ಡಿ. ರಮೇಶ್‍ಕುಮಾರ್, ಶಿವಪ್ರಸಾದ್‍ಗೌಡ, ಶಂಕರಮೂರ್ತಿ, ಶಿವಶಂಕರ್, ವೀರಭದ್ರ, ಕರಿಬಸಪ್ಪ, ಆನಂದ, ತಿಪ್ಪೀರಣ್ಣ, ಹನುಮಂತರಾಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.