ಮೊಳಕಾಲ್ಮುರು: ಫೆ.8 ಹಾಗೂ 9 ರಂದು ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ನಡೆಯಲಿರುವ ವಾಲ್ಮೀಕಿ ಜಾತ್ರೆ ಯಶಸ್ಸಿಗೆ ನಾಯಕ ಜನಾಂಗದ ಎಲ್ಲರೂ ಸಹಕಾರ ನೀಡಬೇಕು ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಮನವಿ ಮಾಡಿದರು.
ಪಟ್ಟಣದ ವಾಲ್ಮೀಕಿ ಭವನ ಆವರಣದಲ್ಲಿ ಶುಕ್ರವಾರ ವಾಲ್ಮೀಕಿ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ನೇತೃತ್ವ ವಹಿಸಿ ಅವರು ಮಾತನಾಡಿದರು.
ಸರ್ಕಾರದಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸೌಲಭ್ಯಗಳನ್ನು ಪಡೆಯಲು ಪ್ರಸಕ್ತ ದಿನಗಳಲ್ಲಿ ಜನಾಂಗ ಒಗ್ಗಟ್ಟು ಪ್ರದರ್ಶಿಸಬೇಕು. ಈ ನಿಟ್ಟಿನಲ್ಲಿ ಜನಾಂಗದ ಶಕ್ತಿ ಹಾಗೂ ಒಗ್ಗಟ್ಟು ಪ್ರದರ್ಶಿಸಲು ಜಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ 60 ಲಕ್ಷ ವಾಲ್ಮೀಕಿ ಜನಾಂಗದವರಿದ್ದಾರೆ. ಜಾತ್ರೆಯಲ್ಲಿ ಅಂದಾಜು 4 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ ಹಲವೆಡೆ ಪೂರ್ವಭಾವಿ ಸಭೆಗಳನ್ನು ಮಾಡಲಾಗಿದೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಪಾಲಯ್ಯ ಮಾತನಾಡಿದರು. ವಾಲ್ಮೀಕಿ ಜನಾಂಗದ ತಾಲ್ಲೂಕು ಅಧ್ಯಕ್ಷ ಕೆ. ಜಗಳೂರಯ್ಯ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ವೈ.ಡಿ. ಬಸವರಾಜ್, ಕೆಳಗಳಹಟ್ಟಿ ತಿಪ್ಪೇಸ್ವಾಮಿ, ಗುರುರಾಜ್, ನಾಗಸಮುದ್ರ ಗೋವಿಂದಪ್ಪ, ಬೊಮ್ಮದೇವರಹಳ್ಳಿ, ಗೋವಿಂದಪ್ಪ, ಸಂಜೀವಪ್ಪ, ಹಾನಗಲ್ ಸೂರಯ್ಯ, ಬಿ. ವಿಜಯ್, ಮುರಳಿಧರ ನಾಯಕ, ಪಾಪೇಶ್, ಪರಮೇಶ್ವರಪ್ಪ, ಶಿವಣ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.