ಭರಮಸಾಗರ: ಸಮೀಪದ ದೇವರಗೊಲ್ಲರಹಟ್ಟಿಯಲ್ಲಿ ಮಂಗಳವಾರ ಸಂಭ್ರಮದಿಂದ ಶಿವರಾತ್ರಿ ಕಾಳಹಬ್ಬ ಜಾತ್ರೆ ನಡೆಯಿತು. ಹಟ್ಟಿಯ ಸುಮಾರು 45 ಕುಟುಂಬದ ಅಣ್ಣತಮ್ಮಂದಿರು ಸೇರಿ ಆಚರಿಸುವ ವಿಶೇಷ ಸಂಪ್ರದಾಯ ಇದಾಗಿದ್ದು ಇದರಲ್ಲಿ ಗ್ರಾಮಸ್ಥರೆಲ್ಲಾ ಪಾಲ್ಗೊಳ್ಳುತ್ತಾರೆ.
ಮಾರ್ಚ್ 6ರಿಂದ ಜಾತ್ರೆ ಆರಂಭಗೊಂಡಿದೆ. ಭಾನುವಾರ ಗ್ರಾಮದ ಪ್ರಮುಖ ದೇವರುಗಳನ್ನು ಕೊಳಹಾಳ್ ಗ್ರಾಮದ ಹಳ್ಳದ ಬಳಿ ಕರೆದೊಯ್ದು ಗಂಗಾಪೂಜೆ, ಗದ್ದುಗೆ ಪೂಜೆ ನೆರವೇರಿಸಿದರು. ಬಳಿಕ ಗ್ರಾಮಕ್ಕೆ ಹಿಂದಿರುಗುವಾಗ ಹೆಗಡೇಹಾಳ್ ಗ್ರಾಮದ ಬಳಿಯ ಹೂವಿನಗುಡ್ಡೆ ಬಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸೋಮವಾರ ಬೆಳಿಗ್ಗೆ ಕಾಳುಗದ್ದುಗೆ ಸಂಪ್ರದಾಯ ನೆರವೇರಿಸಿ ರಾತ್ರಿ ಪ್ರತಿಮನೆಯಿಂದ ದೇವಸ್ಥಾನಕ್ಕೆ ಕಾಳು, ಅಕ್ಕಿ ಮೀಸಲು ಅರ್ಪಿಸಲಾಯಿತು.
ಮಂಗಳವಾರ ದೇವಾಸ್ಥಾನದ ಆವರಣದಲ್ಲಿ ಅನ್ನಸಂತರ್ಪಣೆ ನೆರವೇರಿಸಿದ ನಂತರ ವಿಶೇಷವಾಗಿ ಶ್ರೀ ವೀರಗಟ್ಟೇಶ್ವರ, ಶ್ರೀ ವೀರನಾಗಣ್ಣ, ಗಿಡ್ಡಪ್ಪ, ರಂಗನಾಥಸ್ವಾಮಿ, ಚಿತ್ರಲಿಂಗೇಶ್ವರ, ಮೈಲಾರಲಿಂಗೇಶ್ವರ, ಕುಕ್ಕವಾಡೇಶ್ವರಿ, ಮಾರಿಕಾಂಬಾ, ಕರಿಯಮ್ಮ, ದುರ್ಗಾಪರಮೇಶ್ವರಿ ದೇವರ ಉತ್ಸವಮೂರ್ತಿಯನ್ನು ಹೂವಿನಿಂದ ಅಲಂಕರಿಸಿ ಮಡಿಯುಟ್ಟ ಜನರು ತಲೆಮೇಲೆ ಹೊತ್ತು ಬರಿಗಾಲಿನಲ್ಲಿ ನಡೆದು ಕೋಡಿರಂಗವ್ವನಹಳ್ಳಿ ಗ್ರಾಮದ ವೀರಭದ್ರೇಶ್ವರ ಹಾಗೂ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಕರೆದುಕೊಂಡು ಹೋಗಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಮರಳಿ ಗ್ರಾಮಕ್ಕೆ ಕರೆತಂದರು.
ಬುಧವಾರ ಬೆಳಿಗ್ಗೆ ಜಾತ್ರೆ ಜವಾಬ್ದಾರಿ ನಿಭಾಯಿಸುವ 45 ಕುಟುಂಬಗಳ ಅಣ್ಣತಮ್ಮಂದಿರು ದೇವಸ್ಥಾನ ಬಳಿ ಗದ್ದುಗೆ ಹಾಸಿ ಅದರ ಮೇಲೆ ಜಾತ್ರೆಯ ಖರ್ಚು, ವೆಚ್ಚದ ಹಣ ಇರಿಸಿ ಪೂಜಿಸಿ ಮಹಾಮಂಗಳಾರತಿ ನಡೆಸಿದ ನಂತರ ಜಾತ್ರೆ ಮುಕ್ತಾಯವಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.