ಹಿರಿಯೂರು: ಸಚಿವ ಸ್ಥಾನದಿಂದ ಕೆ.ಎನ್. ರಾಜಣ್ಣ ಅವರನ್ನು ವಜಾ ಮಾಡಿರುವ ಕಾಂಗ್ರೆಸ್ ಪಕ್ಷದ ಕ್ರಮ ಇಡೀ ನಾಯಕ ಜನಾಂಗದವರಿಗೆ ಅಸಮಾಧಾನ ಉಂಟು ಮಾಡಿದೆ ಎಂದು ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ರಾಜಣ್ಣ ಅವರಿಗಿಂತ ಹೆಚ್ಚಿನದಾಗಿ ಪಕ್ಷದ ವಿರುದ್ಧ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸರ್ಕಾರದ ಕಾರ್ಯವೈಖರಿ ವಿರುದ್ಧ ಟೀಕಿಸಿದವರು ಇದ್ದಾರೆ. ಯಾವುದೇ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕದೆ ನೇರನಡೆ–ನುಡಿಗೆ ಹೆಸರಾಗಿದ್ದ, ಸರ್ವಜನಾಂಗದ ವಿಶ್ವಾಸ ಗಳಿಸಿದ್ದ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡುವ ಮೂಲಕ ತುಂಬ ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಎಂದು ಮುಖಂಡರು ಆರೋಪಿಸಿದರು.
ಆಗಸ್ಟ್ 25 ರಂದು ಧರಣಿ: ರಾಜಣ್ಣ ಅವರನ್ನು ಮರಳಿ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿ, ರಾಜಣ್ಣ ಅವರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿ ಆಗಸ್ಟ್ 25 ರಂದು ಬೆಳಿಗ್ಗೆ 11 ಗಂಟೆಗೆ ಯುವಕರು ಬೈಕ್ ರ್ಯಾಲಿ ನಡೆಸುತ್ತೇವೆ. ಜನಾಂಗದವರು ತಾಲ್ಲೂಕು ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ಏಕಲವ್ಯ ಬುಡಕಟ್ಟು ಜನರ ಸಹಕಾರ ಸಂಘದ ಅಧ್ಯಕ್ಷ ಬಸವರಾಜನಾಯಕ ಹೇಳಿದರು.
ಜೆ.ಬಿ. ರಾಜು, ಬಿ.ಆರ್. ಮಂಜುನಾಥ್, ಕೆ.ಶಿವಣ್ಣ, ಎಸ್. ಲೋಕೇಶ್, ಇದ್ದಲನಾಗೇನಹಳ್ಳಿ ರಮೇಶ್, ಆರ್. ಕೃಷ್ಣಪ್ಪ, ಟೈಲರ್ ರಾಮಾಂಜನೇಯ, ಓಬೇನಹಳ್ಳಿ ಶ್ರೀನಿವಾಸ್, ಪ್ರಜ್ವಲ್, ಶ್ರೀಧರ್, ಚಿದಾನಂದಸ್ವಾಮಿ, ಹಿಂಡಸಕಟ್ಟೆ ಕರಿಯಪ್ಪ, ಹಾಲಿನ ತಿಪ್ಪೇಸ್ವಾಮಿ, ವಿಶ್ವನಾಥ್ ಮರಡಿ, ರಾಘವೇಂದ್ರ, ಈಶ್ವರಪ್ಪ, ಹರತಿರಾಜ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.