ಚಿತ್ರದುರ್ಗ: ‘ಪ್ರತಿ ವರ್ಷದಂತೆ ಈ ಬಾರಿಯೂ ಸಹ ಶರಣ ಸಂಸ್ಕೃತಿ ಉತ್ಸವದಲ್ಲಿ ಕೃಷಿ, ಕೈಗಾರಿಕಾ ಮೇಳ ಮತ್ತು ಪ್ರದರ್ಶನವನ್ನು ಯಶಸ್ವಿಗೊಳಿಸಬೇಕು. ರೈತರಿಗೆ, ಕೃಷಿ ಆಸಕ್ತರಿಗೆ ಮಾಹಿತಿ ನೀಡುವ ಕಾರ್ಯ ಅಚ್ಚುಕಟ್ಟಾಗಿ ಆಗಬೇಕು’ ಎಂದು ಎಸ್ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ತಿಳಿಸಿದರು.
ನಗರದ ಮುರುಘಾ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಶರಣ ಸಂಸ್ಕೃತಿ ಉತ್ಸವದ ಕೃಷಿ ಮೇಳದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಮಠದ ವಿಶಾಲ ಆವರಣದಲ್ಲಿ ಮೇಳ ಆಯೋಜಿಸಲಾಗುತ್ತದೆ. ಪ್ರಗತಿಪರ ಕೃಷಿಕರು, ಯುವ ಕೃಷಿಕರನ್ನು ಆಹ್ವಾನಿಸಲಾಗುತ್ತದೆ’ ಎಂದರು.
‘ಈ ಮೇಳದಲ್ಲಿ ಕೃಷಿಕರು, ತೋಟಗಾರಿಕೆ, ಸಾಕುಪ್ರಾಣಿಗಳ ನಿರ್ವಹಣೆ, ಗೃಹ ಕೈಗಾರಿಕೆ, ಸಣ್ಣ ಮತ್ತು ಬೃಹತ್ ಕೈಗಾರಿಕೆ ಸೇರಿದಂತೆ ರೈತರಿಗೆ ವರದಾನವಾಗುವಂತಹ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಇದಕ್ಕೆ ಬೇಕಾದ ಸೌಕರ್ಯ, ಸಂಪನ್ಮೂಲ, ಒದಗಿಸಲಾಗುತ್ತದೆ’ ಎಂದು ತಿಳಿಸಿದರು.
‘ಮೇಳದಲ್ಲಿ ಪ್ರದರ್ಶನ, ಮತ್ತು ಮಾರಾಟವನ್ನು ಅತ್ಯಂತ ಅಚ್ಚುಕಟ್ಟಾಗಿ ಎಲ್ಲಿಯೂ ಲೋಪವಾಗದಂತೆ ನಿರ್ವಹಿಸಿ ಯಶಸ್ವಿಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಆಕಾಶ್ ಸೂಚಿಸಿದರು.
ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎಸ್.ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಗಾಯತ್ರಿ , ಕೃಷಿ ಮೇಳದ ಸಂಘಟಕ ಪಿ.ವೀರೇಂದ್ರ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.