ಹೊಸದುರ್ಗ: ‘ಈಚೆಗೆ ಸೈಬರ್ ಪ್ರಕರಣಗಳು ಹೆಚ್ಚುತ್ತಿವೆ. ಎಲ್ಲ ಜನರಿಗೂ ಈ ಬಗ್ಗೆ ಅರಿವಿನ ಕೊರತೆಯಿದೆ. ಸೈಬರ್ ಕ್ರೈಂ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಕಟ್ಟಕಡೆಯ ವ್ಯಕ್ತಿಗೂ ಇದರ ಅರಿವಾಗಬೇಕು’ ಎಂದು ಪೋಲಿಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರು ತಿಳಿಸಿದರು.
ಪೋಲಿಸ್ ಇಲಾಖೆಯಿಂದ ಪಟ್ಟಣದ ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಬೀಟ್ ಸದಸ್ಯರು ಹಾಗೂ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
ಅಪಾಯದಲ್ಲಿದ್ದಾಗ ತುರ್ತು ಸಹಾಯವಾಣಿ 112ಕ್ಕೆ ದಿನದ 24 ಗಂಟೆಗಳಲ್ಲಿ ಯಾವಾಗಲಾದರೂ ಕರೆ ಮಾಡಿ. 15 ನಿಮಿಷಗಳಲ್ಲಿ ಪೋಲಿಸರು ಬಂದು ಸಹಾಯ ಮಾಡುತ್ತಾರೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತು ವ್ಯಸನಕ್ಕೆ ತುತ್ತಾಗಿದ್ದರೆ ಪೋಲಿಸ್ ಠಾಣೆಗೆ ಕೂಡಲೇ ತಿಳಿಸಿ. ಅಥವಾ ಡ್ರಗ್ ಫ್ರೀ ಕರ್ನಾಟಕ ಆ್ಯಪ್ ಡೌನ್ಲೋಡ್ ಮಾಡಿಕೊಂಡು ದೂರುಗಳನ್ನು ಸಲ್ಲಿಸಬಹುದು ಎಂದು ಹೇಳಿದರು.
‘ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಈ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲಾಗಿದೆ. ಗಡಿ ಅಂಚಿನಲ್ಲಿರುವ ಗ್ರಾಮಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಮನೆಗಳಿಗೆ ಸಿ.ಸಿ.ಟಿ.ವಿ ಕ್ಯಾಮೆರಾ ಹಾಕಿಸಿಕೊಳ್ಳಿ. ಮಹಿಳೆಯರು ಆಭರಣಗಳನ್ನು ಧರಿಸಿ, ಒಬ್ಬಂಟಿಯಾಗಿ ಓಡಾಡಬೇಡಿ’ ಎಂದು ಕಿವಿಮಾತು ಹೇಳಿದರು.
ಈ ವೇಳೆ ಡಿವೈಎಪಿಶಿವಕುಮಾರ್, ಪೊಲೀಸ್ ಇನ್ಕೆಸ್ಪೆಕ್ಟರ್ ಗಳಾದ ಕೆ.ಟಿ.ರಮೇಶ್, ಮಧು, ಸೈಬರ್ ಇನ್ಸ್ಪೆಕ್ಟರ್ ವೆಂಕಟೇಶ್, ಸಬ್ ಇನ್ಸ್ಪೆಕ್ಟರ್ ಗಳಾದ ಮಹೇಶ್ ಕುಮಾರ್, ಶ್ರೀಶೈಲ, ಭೀಮನಗೌಡ ಪಾಟೀಲ್, ಮಂಜುನಾಥ್, ಸೇರಿದಂತೆ ಪೋಲಿಸ್ ಇಲಾಖೆ ಸಿಬ್ಬಂದಿಗಳು, ಬೀಟ್ ಸದಸ್ಯರು ಹಾಗೂ ಸಾರ್ವಜನಿಕರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.