ADVERTISEMENT

ಚಿತ್ರದುರ್ಗ: ಸಾಲ ನಿರಾಕರಣೆ; ಬ್ಯಾಂಕ್ ಅಧಿಕಾರಿಗಳಿಗೆ ನೋಟಿಸ್

ಲೀಡ್‌ ಬ್ಯಾಂಕ್‌ನಿಂದ ಜಿಲ್ಲಾ ಸಲಹಾ ಸಮಿತಿ ಸಭೆ; ಜಿ.ಪಂ ಸಿಇಒ ಎಸ್‌.ಆಕಾಶ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 6:12 IST
Last Updated 21 ನವೆಂಬರ್ 2025, 6:12 IST
ಜಿ.ಪಂ ಸಭಾಂಗಣದಲ್ಲಿ ಗುರುವಾರ ಲೀಡ್ ಬ್ಯಾಂಕ್ ವತಿಯಿಂದ ಜರುಗಿದ ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ಹಂತದ ಪುನರ್ ಪರಿಶೀಲನಾ ಸಮಿತಿ ಸಭೆಯಲ್ಲಿ ಜಿ.ಪಂ ಸಿಇಒ ಎಸ್‌.ಆಕಾಶ್‌ ಮಾತನಾಡಿದರು
ಜಿ.ಪಂ ಸಭಾಂಗಣದಲ್ಲಿ ಗುರುವಾರ ಲೀಡ್ ಬ್ಯಾಂಕ್ ವತಿಯಿಂದ ಜರುಗಿದ ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ಹಂತದ ಪುನರ್ ಪರಿಶೀಲನಾ ಸಮಿತಿ ಸಭೆಯಲ್ಲಿ ಜಿ.ಪಂ ಸಿಇಒ ಎಸ್‌.ಆಕಾಶ್‌ ಮಾತನಾಡಿದರು   

ಚಿತ್ರದುರ್ಗ: ‘ಪಡೆದ ಸಾಲ ಹಿಂದಿರುಗಿಸುವಲ್ಲಿ ಜಿಲ್ಲೆಯ ಸ್ವ ಸಹಾಯ ಗುಂಪುಗಳು ಮಾದರಿಯಾಗಿವೆ. ಆದರೂ ಇಲ್ಲಸಲ್ಲದ ಕಾರಣ ಹೇಳಿ ಸ್ವ– ಸಹಾಯ ಗುಂಪುಗಳಿಗೆ ಸಾಲ ನಿರಾಕರಣೆ ಮಾಡುವ ಬ್ಯಾಂಕ್‌ ವ್ಯವಸ್ಥಾಪಕರಿಗೆ ಕಾರಣ ಕೇಳಿ ನೋಟಿಸ್ ನೀಡಬೇಕು’ ಎಂದು ಜಿ.ಪಂ ಸಿಇಒ ಆಕಾಶ್ ಅವರು ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಎಂ. ರಾಘವೇಂದ್ರ ಅವರಿಗೆ ಸೂಚಿಸಿದರು.

ನಗರದ ಜಿ.ಪಂ ಸಭಾಂಗಣದಲ್ಲಿ ಗುರುವಾರ ಲೀಡ್ ಬ್ಯಾಂಕ್ ವತಿಯಿಂದ ಜರುಗಿದ ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ಹಂತದ ಪುನರ್ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ನಾಗರಿಕರಿಂದ ಸಂಗ್ರಹಿಸಿದ ಠೇವಣಿಗೆ ಸಂವಾದಿಯಾಗಿ ಬ್ಯಾಂಕ್‌ಗಳು ಸಾಲ ನೀಡುವ ಅನುಪಾತ ಜಿಲ್ಲಾ ಮಟ್ಟದಲ್ಲಿ ಉತ್ತಮವಾಗಿದೆ. ಆದರೆ, ಕೆಲ ಬ್ಯಾಂಕ್‌ಗಳು ಶೇ 60ರಷ್ಟು ಸಾಲ ನೀಡುವ ಅನುಪಾತವನ್ನು ನಿರ್ವಹಣೆ ಮಾಡುತ್ತಿಲ್ಲ. ಕೃಷಿ, ಶಿಕ್ಷಣ, ವಸತಿ, ಸಣ್ಣ ಹಾಗೂ ಅತಿಸಣ್ಣ ಉದ್ದಿಮೆ ಸೇರಿದಂತೆ ಆದ್ಯತಾ ವಲಯಗಳಿಗೆ ನೀಡುವ ಸಾಲದ ಗುರಿಯ ಪ್ರಮಾಣವನ್ನು ಬ್ಯಾಂಕ್‌ಗಳು ಪೂರ್ಣಗೊಳಿಸಬೇಕು. ಕೇವಲ ಶೇ 50ರಷ್ಟು ಸಾಧನೆ ಆದರೆ ಸಾಕು ಎನ್ನುವ ಧೋರಣೆಯನ್ನು ಕೈಬಿಡಬೇಕು. ಪಿ.ಎಂ ಸ್ವನಿಧಿ ಯೋಜನೆಯಡಿ 2ನೇ ಹಾಗೂ 3ನೇ ಹಂತದ ಸಾಲ ನೀಡುವ ಪ್ರಮಾಣ ಹೆಚ್ಚಾಗಬೇಕು’ ಎಂದು ತಿಳಿಸಿದರು.

ADVERTISEMENT

 ‘ಡಿಸೆಂಬರ್ ಅಂತ್ಯದವರೆಗೆ ಎಲ್ಲಾ ಬ್ಯಾಂಕ್‌ಗಳಲ್ಲಿನ ಖಾತೆಗಳಲ್ಲಿ ಇತ್ಯರ್ಥವಾಗದೆ ಉಳಿದ ಹಣದ ವಿಲೇವಾರಿಗೆ ಅಭಿಯಾನ ನಡೆಸಲಾಗುತ್ತಿದೆ. ನಿಷ್ಕ್ರಿಯ ಖಾತೆಯಲ್ಲಿ ಅತ್ಯಂತ ಹೆಚ್ಚು ಹಣ ಹೊಂದಿರುವವರು, ಹಕ್ಕು ಪಡೆಯದ ಠೇವಣಿಗಳು, 60 ವರ್ಷ ಮೇಲ್ಪಟ್ಟವರು, ನಿಷ್ಕ್ರಿಯಗೊಂಡ ಖಾತೆಯಲ್ಲಿರುವ ಸರ್ಕಾರಿ ಠೇವಣಿಗಳನ್ನು ಗುರುತಿಸಿ ಇತ್ಯರ್ಥ ಪಡಿಸಲು ಬ್ಯಾಂಕ್ ಅಧಿಕಾರಿಗಳು ಆದ್ಯತೆ ನೀಡಬೇಕು’ ಎಂದು ಆರ್‌ಬಿಐ ಬೆಂಗಳೂರು ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ ಬುಬಲ್ ತಿಳಿಸಿದರು.

‘ಜಿಲ್ಲೆಯಲ್ಲಿ ಒಟ್ಟು 258 ಬ್ಯಾಂಕ್ ಶಾಖೆಗಳು ಇದ್ದು ಒಟ್ಟು ₹ 11,191 ಕೋಟಿ ಠೇವಣಿ ಸಂಗ್ರಹಿಸಲಾಗಿದೆ. ಒಟ್ಟು ₹ 13,261 ಕೋಟಿ ಸಾಲ ನೀಡಲಾಗಿದೆ. ಜಿಲ್ಲೆಯ ಒಟ್ಟಾರೆ ಠೇವಣಿ ಹಾಗೂ ಸಾಲ ಅನುಪಾತ ಶೇ 118.5ರಷ್ಟಿದೆ. ಪ್ರಸಕ್ತ ವರ್ಷದಲ್ಲಿ ಕೃಷಿ, ಶಿಕ್ಷಣ, ವಸತಿ, ಸಣ್ಣ ಹಾಗೂ ಅತಿಸಣ್ಣ ಉದ್ದಿಮೆ ಸೇರಿದಂತೆ ಆದ್ಯತಾ ವಲಯಗಳಿಗೆ ₹ 9783.59 ಕೋಟಿ ಸಾಲ ನೀಡುವ ಗುರಿ ಇದ್ದು ಈ ಪೈಕಿ ₹ 5599.37 ಕೋಟಿ ಸಾಲ ನೀಡಲಾಗಿದೆ’ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ.ರಾಘವೇಂದ್ರ  ಹೇಳಿದರು.

ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಮಾತನಾಡಿ ‘ಪಿಎಂಎಫ್‌ಎಂಇ (ಪ್ರಧಾನ ಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣ ಉದ್ದಿಮೆಗಳ ಔಪಚಾರಿಕರಣ) ಅಡಿ ಜಿಲ್ಲೆಯಲ್ಲಿ 100 ಘಟಕಗಳಿಗೆ ಸಾಲ ಸೌಲಭ್ಯ ನೀಡಲು ಗುರಿ ನಿಗದಿ ಮಾಡಲಾಗಿದೆ. 65 ಅರ್ಜಿಗಳು ಸ್ವೀಕೃತವಾಗಿವೆ. ಇದೂವರೆಗೆ 28 ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದೆ. 28 ಅರ್ಜಿಗಳು ಬಾಕಿಯಿವೆ. 9 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಬ್ಯಾಂಕ್‍ಗಳು ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಬಾಕಿ ಇರುವ 28 ಅರ್ಜಿಗಳ ಪೈಕಿ ಕೆನರಾ ಬ್ಯಾಂಕ್ ಹಾಗೂ ಎಸ್‌ಬಿಐನಲ್ಲಿ ತಲಾ 9 ಅರ್ಜಿಗಳು ಬಾಕಿಯಿವೆ’ ಎಂದರು.

ಜಿ.ಪಂ ಯೋಜನಾ ನಿರ್ದೇಶಕಿ ಜಯಲಕ್ಷ್ಮಿ, ಕೆನರಾ ಬ್ಯಾಂಕ್ ವಲಯ ಪ್ರಬಂಧಕಿ ಅನಿತಾ, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ವಿನಂತ್.ಕೆ ಇದ್ದರು.

ಸಭೆಗೆ ಗೈರು; ಎಚ್ಚರಿಕೆ

ಸಭೆಗೆ ಪ್ರಮುಖ ಬ್ಯಾಂಕ್ ಅಧಿಕಾರಿಗಳು ಗೈರು ಹಾಜರಿಯಾಗಿದ್ದನ್ನು ಗಂಭೀರವಾಗಿ ಪರಿಗಣಿಸಿದ ಜಿ.ಒಂ ಸಿಇಒ ಡಾ.ಆಕಾಶ್ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ನಿರ್ದೇಶನ ನೀಡಿದರು. ಗೈರು ಹಾಜರಾದ ಬ್ಯಾಂಕ್ ಅಧಿಕಾರಿಗಳು ಸ್ವತಃ ಸಿಇಒ ಮುಂದೆ ಹಾಜರಾಗಿ ಸ್ಪಷ್ಟೀಕರಣ ನೀಡವಂತೆ ಸಭೆ ನಡಾವಳಿಯಲ್ಲಿ ದಾಖಲಿಸಲಾಯಿತು. ‘ಜಿಲ್ಲಾ ಮಟ್ಟದಲ್ಲಿ ನಡೆಯುವ ಪ್ರಮುಖ ಸಭೆಗಳಿಗೆ ಬ್ಯಾಂಕ್‌ ಅಧಿಕಾರಿಗಳು ಗೈರು ಹಾಜರಾದರೆ ಅದನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಎಚ್ಚರಿಸಿದರು.

ಸ್ಪಂದಿಸದ ಕೆಜಿಬಿ ವ್ಯವಸ್ಥಾಪಕರು

‘ಸ್ಪ-ಸಹಾಯ ಗುಂಪುಗಳ ಸಾಲ ಅರ್ಜಿ ಪ್ರಕ್ರಿಯನ್ನು ಕೈಗೆತ್ತಿಕೊಳ್ಳಲು ಹಿಂದೇಟು ಹಾಕುವ ಹಾಗೂ ಸರಿಯಾದ ರೀತಿಯಲ್ಲಿ ಸ್ಪಂದಿಸದ ಹಿರಿಯೂರು ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಅರೆಹಳ್ಳಿ ಹಾಗೂ ತಾಳಿಕಟ್ಟೆ ಶಾಖಾ ವ್ಯವಸ್ಥಾಪಕರಿಗೆ ನೋಟಿಸ್ ಜಾರಿ ಮಾಡಬೇಕು’ ಎಂದು ಸಿಇಒ ಆಕಾಶ್‌ ಸೂಚಿಸಿದರು.

2025-26ನೇ ಸಾಲಿಗೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ ಅಡಿ 6766 ಸ್ವ-ಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ ನೀಡಲು ಗುರಿ ನಿಗದಿಪಡಿಸಲಾಗದೆ. ಒಟ್ಟು 2405 ಅರ್ಜಿಗಳು ಸ್ವೀಕೃತವಾಗಿವೆ. ಈ ಪೈಕಿ 2177 ಎಸ್.ಎಚ್.ಜಿ ಗಳಿಗೆ ಈಗಾಗಲೇ ಸಾಲ ಸೌಲಭ್ಯ ನೀಡಲಾಗಿದೆ. 141 ಅರ್ಜಿಗಳು ಬಾಕಿದ್ದು 87 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಬ್ಯಾಂಕ್‍ಗಳು ಬಾಕಿ ಇರುವ ಹಾಗೂ ಆಫ್‍ಲೈನ್ ಮೂಲಕ ಸಲ್ಲಿಕೆಯಾದ ಅರ್ಜಿಗಳ ಪ್ರಕ್ರಿಯೆ ಪೂರ್ಣಗೊಳಿಸಲು ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.