ADVERTISEMENT

ಹಿರಿಯೂರು: ತೇರುಮಲ್ಲೇಶ್ವರಸ್ವಾಮಿಗೆ ಕರ್ಪೂರದ ಆರತಿ

ಮಹಿಳೆಯರು, ಮಕ್ಕಳ ಮೇರೆಮೀರಿದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2023, 5:01 IST
Last Updated 10 ಫೆಬ್ರುವರಿ 2023, 5:01 IST
ಹಿರಿಯೂರಿನ ತೇರುಮಲ್ಲೇಶ್ವರಸ್ವಾಮಿ ದೇಗುಲದ ಆವರಣದಲ್ಲಿ ಗುರುವಾರ ರಾತ್ರಿ ತೇರುಮಲ್ಲೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಕರ್ಪೂರದ ಆರತಿ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು ಮತ್ತು ಮಕ್ಕಳು ಕರ್ಪೂರ ಹಚ್ಚಿ ಸಂಭ್ರಮಿಸಿದರು.
ಹಿರಿಯೂರಿನ ತೇರುಮಲ್ಲೇಶ್ವರಸ್ವಾಮಿ ದೇಗುಲದ ಆವರಣದಲ್ಲಿ ಗುರುವಾರ ರಾತ್ರಿ ತೇರುಮಲ್ಲೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಕರ್ಪೂರದ ಆರತಿ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು ಮತ್ತು ಮಕ್ಕಳು ಕರ್ಪೂರ ಹಚ್ಚಿ ಸಂಭ್ರಮಿಸಿದರು.   

ಹಿರಿಯೂರು: ‘ದಕ್ಷಿಣ ಕಾಶಿ’ ಎಂದೇ ಪ್ರಸಿದ್ಧವಾಗಿರುವ ಇಲ್ಲಿನ ತೇರು ಮಲ್ಲೇಶ್ವರಸ್ವಾಮಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ಕರ್ಪೂರದ ಆರತಿ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು ಮತ್ತು ಮಕ್ಕಳು ಕರ್ಪೂರ ಹಚ್ಚುವ ಮೂಲಕ ಸಂಭ್ರಮಿಸಿದರು.

ರಾತ್ರಿ 9ರ ವೇಳೆಗೆ ತೇರುಮಲ್ಲೇಶ್ವರ, ಚಂದ್ರಮೌಳೇಶ್ವರ ಹಾಗೂ ಉಮಾಮಹೇಶ್ವರಸ್ವಾಮಿ ರಥಾವರೋಹಣ ಉತ್ಸವದ ನಂತರ, ದೇವಸ್ಥಾನದ ಒಳ ಆವರಣದಲ್ಲಿರುವ ಸುಮಾರು 56 ಅಡಿ ಎತ್ತರದ ಕಲ್ಲು ಕಂಬದ ಮೇಲೆ ಪರಿಣತರೊಬ್ಬರು ಹತ್ತಿ, ಕಂಬದ ಸುತ್ತ ಇರುವ ಎಂಟು ಕಬ್ಬಿಣದ ಸೌಟುಗಳಿಗೆ ಬತ್ತಿ, ಎಣ್ಣೆ ಹಾಕಿ, ಕರ್ಪೂರ ಬಳಸಿ ದೀಪ ಹಚ್ಚಿದ ತಕ್ಷಣ ದೀಪ ಸ್ತಂಭದ ಸುತ್ತ ನೆರೆದಿದ್ದ ಸಾವಿರಾರು ಭಕ್ತರು ಕರ್ಪೂರವನ್ನು ರಾಶಿಹಾಕಿ ಹಚ್ಚಿ ಆನಂದಿಸಿದರು.

₹ 80,000ಕ್ಕೆ ಮೊದಲ ಆರತಿ: ಮೊದಲ ಕರ್ಪೂರದ ಆರತಿಯನ್ನು ನಗರದ ಶಂಕರ್ ಗಜ ₹ 80,000ಗೆ ಹರಾಜಿನಲ್ಲಿ ಪಡೆದರೆ, ಎರಡನೇ ಆರತಿಯನ್ನು ಕೌಶಿಕ್ ₹ 33,000 ಹಾಗೂ ಮೂರನೇ ಆರತಿಯನ್ನು ನೇತ್ರಾವತಿ ಅರುಣ್‌ಕುಮಾರ್‌ ₹ 25,000ಕ್ಕೆ ಪಡೆದರು.

ADVERTISEMENT

ಪೂಜೆಯಲ್ಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಂಗನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್. ನಾಗೇಂದ್ರನಾಯ್ಕ ಪಾಲ್ಗೊಂಡಿದ್ದರು.

ಕಾರ್ತಿಕ ಮಾಸ ಹಾಗೂ ಜಾತ್ರೆಯ ಸಂದರ್ಭದಲ್ಲಿ ಈ ಸೌಟುಗಳಲ್ಲಿ ದೀಪ ಹಚ್ಚುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.