ADVERTISEMENT

ಉಪ ಮಾರುಕಟ್ಟೆಯಲ್ಲಿ ನೀರಿಲ್ಲ, ಶೌಚಾಲಯವಿಲ್ಲ

ಅನೈತಿಕ ಚಟುವಟಿಕೆಯ ತಾಣವಾದ ಪ್ರಾಂಗಣ; ಸಮಸ್ಯೆ ಬಗೆಹರಿಸಲು ರೈತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 4:58 IST
Last Updated 18 ಸೆಪ್ಟೆಂಬರ್ 2025, 4:58 IST
ಚಿಕ್ಕಜಾಜೂರಿನ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ಹಮಾಲಿಗಳಿಗಾಗಿ ನಿರ್ಮಿಸಿರುವ ವಸತಿಗೃಹದ ಸುತ್ತ ಗಿಡಗಳು ಬೆಳೆದು ನಿಂತಿರುವುದು
ಚಿಕ್ಕಜಾಜೂರಿನ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ಹಮಾಲಿಗಳಿಗಾಗಿ ನಿರ್ಮಿಸಿರುವ ವಸತಿಗೃಹದ ಸುತ್ತ ಗಿಡಗಳು ಬೆಳೆದು ನಿಂತಿರುವುದು   

ಚಿಕ್ಕಜಾಜೂರು: ಇಲ್ಲಿಯ ಕೃಷಿ ಉತ್ಪನ್ನ ಉಪಮಾರುಕಟ್ಟೆಗೆ ಹಲವು ವರ್ಷಗಳಿಂದ ಗ್ರಹಣ ಬಡಿದಂತಾಗಿದ್ದು ಬರುವ ರೈತರು, ಸಿಬ್ಬಂದಿ, ಹಮಾಲರಿಗೆ ಮೂಲ ಸೌಲಭ್ಯಗಳಿಲ್ಲವಾಗಿದೆ.

ಹೊಳಲ್ಕೆರೆ ತಾಲ್ಲೂಕಿನಲ್ಲಿ ಚಿಕ್ಕಜಾಜೂರು ಸಣ್ಣ ಪಟ್ಟಣವಾಗಿದ್ದು, ಕೃಷಿ ಉಪ ಮಾರುಕಟ್ಟೆ ಇದೆ. ಒಟ್ಟು 7 ಗೋದಾಮುಗಳಿವೆ. ಅದರಲ್ಲಿ ಎರಡನ್ನು ವ್ಯಾಪಾರಿಗಳಿಗೆ ಬಾಡಿಗೆ ನೀಡಲಾಗಿದೆ. ರೈತರಿಂದ ಸರ್ಕಾರದ ಬೆಂಬಲ ಬೆಲೆಯಲ್ಲಿ ಖರೀದಿಸುವ ರಾಗಿ ಸಂಗ್ರಹಿಸಿಡಲು ಒಂದು ಗೋದಾಮು ಹಾಗೂ ಎರಡು ಪಡಿತರ ಸಾಮಗ್ರಿಗಳ ದಾಸ್ತಾನು ಸಂಗ್ರಹಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಬಿ. ದುರ್ಗ ಹಾಗೂ ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಹೋಬಳಿಗಳ ಪಡಿತರ ಅಂಗಡಿಗಳಿಗೆ (ಸೊಸೈಟಿ), ತಾಲ್ಲೂಕಿನ ಎಲ್ಲಾ ಶಾಲಾ-ಕಾಲೇಜುಗಳಿಗೆ (ಇಂದಿರಾ ಗಾಂಧಿ ವಸತಿ ಶಾಲೆ, ಮುರಾರ್ಜಿ ವಸತಿ ಶಾಲೆ, ಕಿತ್ತೂರು ಚೆನ್ನಮ್ಮ ವಸತಿ ಶಾಲೆ) ನೀಡುವ ಬಿಸಿಯೂಟದ ದಾಸ್ತಾನನ್ನು ಇಲ್ಲಿನ ಗೋದಾಮುಗಳಿಂದಲೇ ತುಂಬಿಸಿ ಕಳುಹಿಸಲಾಗುತ್ತಿದೆ. ಪ್ರತಿ ವರ್ಷ ಡಿಸೆಂಬರ್‌ನಿಂದ ಮೇ ತಿಂಗಳವರೆಗೆ ಉಪ ಮಾರುಕಟ್ಟೆಯಲ್ಲಿ ರಾಗಿ ಖರೀದಿ ಕೇಂದ್ರ ಸ್ಥಾಪಿಸಲಾಗುತ್ತಿದೆ.

ADVERTISEMENT

ಮಾರುಕಟ್ಟೆಗೆ ಬರುವ ಶಾಲಾ ಕಾಲೇಜುಗಳ ಹಾಗೂ ಸೊಸೈಟಿಗಳ ಸಿಬ್ಬಂದಿ, ರೈತರಿಗೆ ಮಾರುಕಟ್ಟೆ ಆವರಣದಲ್ಲಿ ಕುಡಿಯುವ ನೀರಿಲ್ಲ, ಶೌಚಾಲಯವಿಲ್ಲ. ಮಾರುಕಟ್ಟೆಯಲ್ಲಿ ಕೊಳವೆ ಬಾವಿ ಇದೆ. ಆದರೆ, ನೀರನ್ನು ಸಂಗ್ರಹಿಸಿಡಲು ಟ್ಯಾಂಕ್‌ ವ್ಯವಸ್ಥೆಯೇ ಇಲ್ಲ. ಮಾರುಕಟ್ಟೆ ವಿಶಾಲವಾಗಿದ್ದರೂ, ಸಿಬ್ಬಂದಿ, ರೈತರಿಗೆ ಹಾಗೂ ದಾಸ್ತಾನು ತೆಗೆದುಕೊಂಡು ಹೋಗಲು ಬರುವ ವರ್ತಕರಿಗೆ ಶೌಚಾಲಯವಿಲ್ಲ. ಬಯಲಿನಲ್ಲೇ ಮಲ, ಮೂತ್ರ ವಿಸರ್ಜನೆ ಮಾಡುವ ದುಃಸ್ಥಿತಿ ಇದೆ.

ಬೀದಿ ದೀಪದ ವ್ಯವಸ್ಥೆ ಇಲ್ಲದಿರುವ ಕಾರಣ ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ, ಮಾರುಕಟ್ಟೆಯ ರಜಾ ದಿನಗಳಲ್ಲಿ ಕುಡುಕರು ಬಂದು ಮದ್ಯಪಾನ ಮಾಡಿ, ಬಾಟಲಿಗಳನ್ನು ಒಡೆದು ಹಾಕುತ್ತಾರೆ. ಇಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತವೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಮಾರುಕಟ್ಟೆಗೆ ಬಂದು ಹೋಗಲು ಇರುವ ಎರಡು ಪ್ರವೇಶ ದ್ವಾರಗಳ ಮುಂದೆ ಅಳವಾದ ಗುಂಡಿಗಳಿದ್ದು, ವಾಹನಗಳ ಚಾಲಕರು ಜೀವ ಭಯದಲ್ಲಿ ವಾಹನಗಳನ್ನು ನಡೆಸುವಂತಾಗಿದೆ.

‘12 ಮಂದಿ ಹಮಾಲರು ಕೂಲಿ ಕೆಲಸ ಮಾಡುತ್ತಿದ್ದೇವೆ. ಮಾರುಕಟ್ಟೆ ತುಂಬಾ ಗಿಡ ಗಂಟಿಗಳು ಬೆಳೆದು ಹಾವು ಮತ್ತಿತರ ವಿಷ ಜಂತುಗಳ ವಾಸಸ್ಥಾನವಾಗಿದೆ. ಗೋದಾಮುಗಳ ಒಳಗೆ ಇಲಿ, ಹೆಗ್ಗಣಗಳು, ಹಾವುಗಳು ಕಾಣಿಸಿಕೊಳ್ಳುತ್ತವೆ. ಹಮಾಲಿಗಳಿಗೆ ಇರುವ ವಸತಿಗೃಹದ ಸುತ್ತ ಗಿಡಗಂಟಿ ಬೆಳೆದಿರುವುದರಿಂದ ವಿಶ್ರಾಂತಿ ತೆಗೆದುಕೊಳ್ಳಲು ಭಯವಾಗುತ್ತದೆ’ ಎನ್ನುತ್ತಾರೆ ಮುಖ್ಯ ಹಮಾಲಿ ಯೂಸುಫ್‌ ಖಾನ್‌.

ಚಿಕ್ಕಜಾಜೂರಿನ ಎಪಿಎಂಸಿ ಉಪ ಮಾರುಕಟ್ಟೆಯ ಪ್ರವೇಶ ದ್ವಾರದಲ್ಲಿರುವ ಮಣ್ಣಿನ ರಸ್ತೆ ಗುಂಡಿಗಳಿಂದ ಹಾಳಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.