ಚಿತ್ರದುರ್ಗ: ಮರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಗಣರಾಜ್ಯೋತ್ಸವದ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹಾಗೂ ಸಂಸದ ಗೋವಿಂದ ಕಾರಜೋಳ ಅವರು ಮಾತಿನ ಮೂಲಕ ಪರಸ್ಪರ ಕಾಲೆಳೆದರು.
ಭದ್ರಾ ಮೇಲ್ದಂಡೆ ಯೋಜನೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರಗಳು ಅನುದಾನ ಬಿಡುಗಡೆ ಮಾಡಿರುವ ಸಂಬಂಧ ಇಬ್ಬರೂ ತಮಾಷೆಯೊಂದಿಗೆ ವಾಗ್ವಾದ ನಡೆಸಿದರು. ಕಡೆಗೆ ಅನ್ಯ ಕಾರ್ಯಕ್ರಮ ನಿಮಿತ್ತ ಗೋವಿಂದ ಕಾರಜೋಳ ಅವರು ತೆರಳಿದ ನಂತರ ಮಾತುಕತೆಗೆ ಬ್ರೇಕ್ ಬಿತ್ತು. ಇಬ್ಬರ ನಡುವಿನ ಸಂಭಾಷಣೆ ಇಲ್ಲಿದೆ.
ಕಾರಜೋಳ: ನಾನು ನೀರಾವರಿ ಮಂತ್ರಿಯಾಗಿದ್ದಾಗ ಭ್ರದ್ರಾ ಮೇಲ್ದಂಡೆ ಯೋಜನೆಗೆ ₹ 5,700 ಕೋಟಿ ಕೊಟ್ಟಿದ್ದೇನೆ. ಮೊದಲ ವರ್ಷ ₹ 3,300 ಕೋಟಿ, 2ನೇ ವರ್ಷ ₹ 2,400 ಕೋಟಿ. ಸಿದ್ದರಾಮಯ್ಯ ಭದ್ರಾ ಯೋಜನೆಗೆ ಬಿಡಿಗಾಸನ್ನೂ ಕೊಟ್ಟಿಲ್ಲ.
ಸುಧಾಕರ್: ನೀವು ಮೊದಲು ಕೇಂದ್ರ ಸರ್ಕಾರದಿಂದ ₹ 5,300 ಕೋಟಿ ಕೊಡಿಸಿ. ಬಜೆಟ್ನಲ್ಲಿ ಘೋಷಣೆ ಮಾಡಿದಂತೆ ನಡೆಯಬೇಕಲ್ಲವೇ?
ಕಾರಜೋಳ: 2007–08ರಲ್ಲಿ ಯೋಜನೆ ಶುರುವಾಗಿದೆ, ನಾವೇ ಆರಂಭಿಸಿದ್ದು.
ಸುಧಾಕರ್: ನಾನೂ ಇದ್ದೆನಲ್ಲವೇ?
ಕಾರಜೋಳ: ನೀನೂ ನಮ್ಮ ಜೊತೆಯಲ್ಲೇ ಇದ್ದೆ, ಅದಕ್ಕೇ ಹೇಳುತ್ತಿದ್ದೇನೆ ಕೇಳು. ನೀನು ₹ 5,000 ಕೋಟಿ ತೆಗೆದುಕೊಂಡು ಬಾ.
ಸುಧಾಕರ್: ನೀವು ₹ 5,300 ಕೋಟಿ ತರುವವರೆಗೂ ನಿಮ್ಮ ಮಾತು ಅಪ್ರಸ್ತುತ.
ಕಾರಜೋಳ: ಏ, ನಿನ್ನ ಮರ್ಯಾದೆ ತೆಗೆಯುತ್ತೇನೆ, ಗೊತ್ತಿರಲಿ.
ಈ ಮಾತುಗಳನ್ನಾಡುವಾಗ ಅಧಿಕಾರಿಗಳು, ಪ್ರೇಕ್ಷಕರು ಕುತೂಹಲದಿಂದ ನೋಡುತ್ತಿದ್ದರು. ಗೋವಿಂದ ಕಾರಜೋಳ ಅವರು ನಗುತ್ತಾ ನಿರ್ಗಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.