ADVERTISEMENT

ಡಿ.ಕೆ.ಶಿವಕುಮಾರ್‌ ಅವರದು ದಬ್ಬಾಳಿಕೆ ಸಂಸ್ಕೃತಿ: ಶಾಸಕ ಬಿ.ಶ್ರೀರಾಮುಲು

ಚಿತ್ರದುರ್ಗದಲ್ಲಿ ಮೊಳಕಾಲ್ಮುರು ಶಾಸಕ ಬಿ.ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 13:39 IST
Last Updated 6 ಜುಲೈ 2019, 13:39 IST
ಬಿ.ಶ್ರೀರಾಮುಲು
ಬಿ.ಶ್ರೀರಾಮುಲು   

ಚಿತ್ರದುರ್ಗ: ‘ಸಚಿವ ಡಿ.ಕೆ.ಶಿವಕುಮಾರ್ ಅವರು ಮೊದಲಿನಿಂದಲೂ ದಬ್ಬಾಳಿಕೆ, ದೌರ್ಜನ್ಯ ಸಂಸ್ಕೃತಿಯಿಂದ ಬಂದಿದ್ದಾರೆ. ಅದನ್ನು ಈಗಲೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ’ ಎಂದು ಮೊಳಕಾಲ್ಮುರು ಶಾಸಕ ಬಿ. ಶ್ರೀರಾಮುಲು ದೂರಿದರು.

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದಂಥ ಸಂದರ್ಭದಲ್ಲೂ ಕೆಲ ಕಾಗದ ಪತ್ರಗಳನ್ನು ಹರಿದು ಹಾಕಿದ್ದಾರೆ. ಈಗ ರಾಜೀನಾಮೆ ಕೊಡಲು ಮುಂದಾಗಿರುವ ಅತೃಪ್ತ ಶಾಸಕರ ರಾಜೀನಾಮೆ ಪತ್ರಗಳನ್ನು ಹರಿದು ಹಾಕಿದ್ದು, ರಾಜಕೀಯದಲ್ಲೂ ದಬ್ಬಾಳಿಕೆ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಶಾಸಕರು ರಾಜೀನಾಮೆ ನೀಡಲು ಹೋದರೆ ಸ್ಪೀಕರ್ ಅಲ್ಲಿಲ್ಲ. ಇಲ್ಲಿಲ್ಲ ಎಂಬುದಾಗಿ ಹೇಳುವುದು ಸರಿಯಲ್ಲ. ಸ್ಪೀಕರ್ ಸದನದ ಮುಖ್ಯಸ್ಥರಾಗಿದ್ದು, ಎಲ್ಲ ಪಕ್ಷದವರನ್ನೂ ಸಮಾನವಾಗಿ ಕಾಣಬೇಕು. ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದು, ಜುಲೈ 9ರ ಮಂಗಳವಾರದವರೆಗೂ ಕಾಲಾವಕಾಶ ತೆಗೆದುಕೊಳ್ಳುವುದರಲ್ಲಿ ಅರ್ಥವಿಲ್ಲ. ಅತೃಪ್ತರ ರಾಜೀನಾಮೆ ಅಂಗೀಕರಿಸಬೇಕು. ಮುಖ್ಯಮಂತ್ರಿ ಸಮಯ ಮುಗಿದು ಹೋಗಿದ್ದು, ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು’ ಎಂದು ಅವರು ಒತ್ತಾಯಿಸಿದರು.

ADVERTISEMENT

‘ಈಗಲೂ ಫ್ರೀ ಪ್ಲಾನ್ ಮಾಡಿ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಕಾಂಗ್ರೆಸ್‌ನ ಕೆಲವರು ನಿರತರಾಗಿದ್ದಾರೆ. ಈ ಬಾರಿ ಯಾವ ಕಾರಣಕ್ಕೂ ಫಲಪ್ರದ ಆಗುವುದಿಲ್ಲ. ಸ್ವಯಂಪ್ರೇರಣೆಯಿಂದ ರಾಜೀನಾಮೆ ಕೊಡುವವರ ಸಂಖ್ಯೆ ಹೆಚ್ಚಾಗಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.