ಹೊಳಲ್ಕೆರೆ ತಾಲ್ಲೂಕಿನ ತಾಳ್ಯದಲ್ಲಿ ಶಾಸಕ ಎಂ.ಚಂದ್ರಪ್ಪ ₹1.1 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು
ಹೊಳಲ್ಕೆರೆ: ನಾನು ಜಾತಿ, ಧರ್ಮ ನೋಡಿ ಕೆಲಸ ಮಾಡುವವನಲ್ಲ. ನನಗೆ ಜಾತಿಗಿಂತ ನೀತಿ ಮುಖ್ಯ ಎಂದು ಶಾಸಕ ಎಂ.ಚoದ್ರಪ್ಪ ಹೇಳಿದರು.
ತಾಲ್ಲೂಕಿನ ತಾಳ್ಯ ಗ್ರಾಮದಲ್ಲಿ ಮಂಗಳವಾರ ₹1.1 ಕೋಟಿ ವಚ್ಚದ ಚೆಕ್ಡ್ಯಾಂ ನಿರ್ಮಾಣ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.
‘ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾರಣ ಮಾಡುತ್ತೇನೆ. ನಂತರ ಅಭಿವೃದ್ಧಿಯನ್ನು ಮೂಲ ಮಂತ್ರವಾಗಿಟ್ಟುಕೊಂಡು ಕೆಲಸ ಮಾಡುತ್ತೇನೆ. ಮತ ಹಾಕಿದವರು, ಹಾಕಿಲ್ಲದವರಿಗೆ ವ್ಯತ್ಯಾಸ ತೋರುವುದಿಲ್ಲ. ನಿತ್ಯವೂ ಜನರ ಪರವಾಗಿ ಕೆಲಸ ಮಾಡುತ್ತೇನೆ. ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿಗೆ ಹಣ ಇಲ್ಲದಿದ್ದರೂ, ಚಾಕಚಕ್ಯತೆಯಿಂದ ಅನುದಾನ ತಂದು ಕೋಟ್ಯಂತರ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದೇನೆ’ ಎಂದರು.
ತಾಳ್ಯ ಕೆರೆ ಅಭಿವೃದ್ಧಿಗೆ ಅನುದಾನ ನೀಡಿದ್ದು, ಕೋಡಿ ದುರಸ್ತಿ ಮಾಡಿದ್ದರಿಂದ ಹೆಚ್ಚು ನೀರು ಸಂಗ್ರಹವಾಗುತ್ತಿದೆ. ತಾಳ್ಯ ಹೋಬಳಿ ಭೌಗೋಳಿಕವಾಗಿ ಎತ್ತರದ ಪ್ರದೇಶದಲ್ಲಿ ಇದ್ದು, ಕೆರೆಗಳಿಗೆ ಭದ್ರಾ ನೀರು ತುಂಬಿಸುವ ಯೋಜನೆಯಿಂದ ಹೊರಗುಳಿಯಿತು. ಈ ಭಾಗದ ರೈತರ ಸಂಕಷ್ಟ ಅರಿತು ತಾಳ್ಯ ಕೆರೆ ಸೇರಿದಂತೆ ಹೋಬಳಿಯ 7 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮಂಜೂರು ಮಾಡಿಸಿದ್ದೇನೆ. ಈಗಾಗಲೇ ಪೈಪ್ಲೈನ್ ಅಳವಡಿಸುವ ಕಾರ್ಯ ಮುಗಿದಿದ್ದು, ಪಟ್ಟಣದ ಶಿವನ ಕೆರೆಯಲ್ಲಿ ಜಾಕ್ ವೆಲ್ ನಿರ್ಮಿಸಲಾಗಿದೆ. ಅಲ್ಲಿಂದ ಏತ ನೀರಾವರಿಯಿಂದ ಎಡ ಹಾಗೂ ಬಲದಂಡೆ ಕಾಲುವೆಗಳ ಮೂಲಕ ತಾಳ್ಯ ಹೋಬಳಿಯ ಎಲ್ಲಾ ಕೆರೆಗಳಿಗೆ ನೀರು ಹರಿಸಲಾಗುವುದು ಎಂದರು.
ಮಾಜಿ ಶಾಸಕ ಮಂಜುನಾಥ್, ನಾರಪ್ಪ, ತಿಪ್ಪೇಸ್ವಾಮಿ, ಬಸವರಾಜ್, ದಾಸಯ್ಯನಹಟ್ಟಿ ರಮೇಶ್, ಸುನಿಲ್, ರಂಗನಾಥ್, ನಿತಿನ್ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ರಾಜಕಾರಣಿಗಳಿಗೆ ಬದ್ಧತೆ ಜವಾಬ್ದಾರಿ ಸಾಮಾನ್ಯ ಜ್ಞಾನ ಬಹು ಮುಖ್ಯವಾಗಿದೆ. ಜನರ ನಿರೀಕ್ಷೆಗಳನ್ನು ಹುಸಿಗೊಳಿಸದೆ ಕೆಲಸ ಮಾಡುವ ಮನಸ್ಸು ಇರಬೇಕುಎಂ.ಚಂದ್ರಪ್ಪ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.