ಹೊಸದುರ್ಗ: ಪಟ್ಟಣದಲ್ಲಿ ವಾಸವಿರುವ ಹಕ್ಕಿಪಿಕ್ಕಿ ಜನಾಂಗದ 32 ವಸತಿ ರಹಿತ ಕುಟುಂಬಗಳಿಗೆ ವಂತಿಕೆ ಹಣ ₹30 ಲಕ್ಷವನ್ನು ಶಾಸಕ ಬಿ.ಜಿ. ಗೋವಿಂದಪ್ಪ ಫಲಾನುಭವಿಗಳಿಗೆ ಚೆಕ್ ಮೂಲಕ ವಿತರಿಸಿದರು.
ತಾಲ್ಲೂಕಿನ ಬಾಗೂರಿನ ಓರಗಲ್ಲಮ್ಮ ಸಮುದಾಯ ಭವನದಲ್ಲಿ ಭಾನುವಾರ ಚೆಕ್ ವಿತರಿಸಿ ಮಾತನಾಡಿದ ಅವರು ‘ಕರ್ನಾಟಕ ಕೊಳಚೆ ನಿರ್ಮೂಲನೆ ಮಂಡಳಿಯಿಂದ ಪಟ್ಟಣದ ಶಿವನೇಕಟ್ಟೆ ಸರ್ವೆ ನಂಬರ್ 36 ರಲ್ಲಿ ಹಕ್ಕಿಪಿಕ್ಕಿ ಜನಾಂಗದವರಿಗೆ ಒಟ್ಟು 52 ಮನೆಗಳು ಮಂಜೂರಾಗಿದ್ದವು. ಈಗಾಗಲೇ 20 ಕುಟುಂಬಗಳು ವೈಯಕ್ತಿಕ ವಂತಿಕೆ ಹಣ ನೀಡಿ, ಸರ್ಕಾರದಿಂದ ಅನುದಾನ ಪಡೆದು ಒಂದರ ಪಕ್ಕ ಒಂದು ಮನೆ ಕಟ್ಟಿದ್ದಾರೆ’ ಎಂದರು.
‘ಉಳಿದ 32 ಕುಟುಂಬಗಳು ವಂತಿಕೆ ಹಣ ₹1 ಲಕ್ಷ ಕಟ್ಟುವುದು ಕಷ್ಟಸಾಧ್ಯವೆಂದು ಪುರಸಭೆ ಹಾಗೂ ಶಾಸಕರಿಗೆ ಮನವಿ ಮಾಡಿದ್ದರು. ಅಂದಿನ ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು ಅವರು ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ ಪರಿಣಾಮ ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಯೋಜನೆಯಡಿ 32 ಕುಟುಂಬಗಳಿಗೆ ₹ 32 ಲಕ್ಷ ಹಣವನ್ನು ಫಲಾನುಭವಿಗಳ ಖಾತೆಗೆ ನೀಡಿರುವ ಚೆಕ್ ವಿತರಿಸಲಾಗಿದೆ. ಮನೆ ನಿರ್ಮಿಸಲು ₹6 ಲಕ್ಷ ಸಹಾಯಧನ ಸರ್ಕಾರ ಒದಗಿಸಲಿದೆ’ ಎಂದು ಶಾಸಕ ಬಿ.ಜಿ ಗೋವಿಂದಪ್ಪ ಹೇಳಿದರು.
ಆಗ್ರೋ ಶಿವಣ್ಣ, ಕುರುಬ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಓರುಗಲ್ಲಪ್ಪ, ದಳವಾಯಿ ವೆಂಕಟೇಶ್ ಸಂತೋಷ್, ರೋಹಿತ್, ಶಾಂತಮೂರ್ತಿ, ಹರೀಶ್ ಸೇರಿದಂತೆ ಹಲವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.