ADVERTISEMENT

ಸಂಚಾರಿ ಗ್ರಂಥಾಲಯ ಶೀಘ್ರ-ನಗರಸಭೆ ಅಧ್ಯಕ್ಷೆ ತಿಪ್ಪಮ್ಮ

ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ಆಶ್ವಾಸನೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 13:56 IST
Last Updated 9 ಏಪ್ರಿಲ್ 2021, 13:56 IST
ತಿಪ್ಪಮ್ಮ ವೆಂಕಟೇಶ್
ತಿಪ್ಪಮ್ಮ ವೆಂಕಟೇಶ್   

ಚಿತ್ರದುರ್ಗ: ಓದುಗರಿಗಾಗಿ ಶೀಘ್ರದಲ್ಲಿಯೇ ನಗರ ಸಂಚಾರಿ ಗ್ರಂಥಾಲಯ ಪ್ರಾರಂಭವಾಗಲಿದೆ ಎಂದು ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್ ತಿಳಿಸಿದರು.

ನಗರ ಕೇಂದ್ರ ಗ್ರಂಥಾಲಯದ ಆವರಣದಲ್ಲಿರುವ ಮಕ್ಕಳ ಸಮುದಾಯ ಗ್ರಂಥಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಂಥಾಲಯ ಪ್ರಾಧಿಕಾರದ 24ನೇ ಸಭೆ ಹಾಗೂ 2021-22ನೇ ಸಾಲಿನ ಅಂದಾಜು ಆಯ-ವ್ಯಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಅಗತ್ಯ ವಾಹನ ಒದಗಿಸುವಂತೆ ಕೆಎಸ್‌ಆರ್‌ಟಿಸಿ ನಿಗಮಕ್ಕೆ ಪತ್ರ ಬರೆಯಲಾಗಿದೆ. ಸಂಚಾರಿ ಗ್ರಂಥಾಲಯದಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಪುಸ್ತಕಗಳ ವ್ಯವಸ್ಥೆ ಮಾಡಲಾಗುತ್ತದೆ. ಸಾರ್ವಜನಿಕ ಓದುಗರು ಇದರ ಸದುಪಯೋಗ ಪಡೆದುಕೊಳ್ಳಬೇಕು. ನಗರಸಭೆ ವತಿಯಿಂದ ಕೇಂದ್ರ ಗ್ರಂಥಾಲಯಕ್ಕೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಡಲಾಗುವುದು’ ಎಂದರು.

ADVERTISEMENT

ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್.ತಿಪ್ಪೇಸ್ವಾಮಿ ಮಾತನಾಡಿ, ‘ಡಿಜಿಟಲ್ ಗ್ರಂಥಾಲಯಕ್ಕೆ ಜಿಲ್ಲೆಯಲ್ಲಿ 43,726 ಓದುಗರು ಸದಸ್ಯತ್ವ ಪಡೆದಿದ್ದಾರೆ. ಡಿಜಿಟಲ್ ಗ್ರಂಥಾಲಯದಲ್ಲಿ 10 ಲಕ್ಷಕ್ಕೂ ಹೆಚ್ಚು ಪುಸ್ತಕಗಳು ಲಭ್ಯ ಇವೆ. ಡಿಜಿಟಲ್ ಗ್ರಂಥಾಲಯದಲ್ಲಿ ನೋಂದಣಿ ಮಾಡಿಸಿಕೊಳ್ಳುವ ವಿದ್ಯಾರ್ಥಿಗಳು ನೇರವಾಗಿ ನಗರ ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡಿ’ ಎಂದರು.

‘2021-22ನೇ ಸಾಲಿನ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದಲ್ಲಿ ₹ 80 ಲಕ್ಷ ಅಂದಾಜು ಆದಾಯ ನಿರೀಕ್ಷಿಸಲಾಗಿದೆ. ಇದರಲ್ಲಿ ₹ 77 ಲಕ್ಷ ವ್ಯಯ ಆಗುವ ನೀರಿಕ್ಷೆ ಇದೆ’ ಎಂದು ಸಭೆಗೆ ತಿಳಿಸಿದರು.

ವಕೀಲ ಕೃಷ್ಣಮೂರ್ತಿ, ಸರ್ಕಾರಿ ಕಲಾ ಕಾಲೇಜು ಗ್ರಂಥಪಾಲಕ ತಿಪ್ಪೇಸ್ವಾಮಿ, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ಗ್ರಂಥಪಾಲಕ ಟಿ.ಎನ್.ಪ್ರಸನ್ನ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.