ADVERTISEMENT

ಮೊಳಕಾಲ್ಮುರು | ನೀರಾವರಿ ಹೋರಾಟಕ್ಕೆ ಚುರುಕು ಅನಿವಾರ್ಯ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 7:09 IST
Last Updated 11 ಜನವರಿ 2026, 7:09 IST
ಮೊಳಕಾಲ್ಮುರಿನಲ್ಲಿ ಶನಿವಾರ ನಡೆದ ನೀರಾವರಿ ಹೋರಾಟ ಸಮಿತಿ ಸಭೆಯಲ್ಲಿ ರೈತಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿದರು 
ಮೊಳಕಾಲ್ಮುರಿನಲ್ಲಿ ಶನಿವಾರ ನಡೆದ ನೀರಾವರಿ ಹೋರಾಟ ಸಮಿತಿ ಸಭೆಯಲ್ಲಿ ರೈತಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿದರು    

ಮೊಳಕಾಲ್ಮುರು: ‘ನೀರಾವರಿ ಸೌಲಭ್ಯ ವಿಷಯದಲ್ಲಿ ತಾಲ್ಲೂಕು ತೀವ್ರ ನಿರ್ಲಕ್ಷ್ಯಕ್ಕೆ ತುತ್ತಾಗಿದ್ದು, ಇನ್ನಾದರೂ ಹೋರಾಟಕ್ಕೆ ಚುರುಕು ನೀಡದಿದ್ದಲ್ಲಿ ಮುಂದಿನ ಪೀಳಿಗೆಯು ನಮಗೆ ಹಿಡಿಶಾಪ ಹಾಕುವುದು ಖಚಿತ’ ಎಂದು ರೈತ ಸಂಘ ಮತ್ತು ಹಸಿರುಸೇನೆ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಹೇಳಿದರು.

ನುಂಕಿಮಲೆ ಸಿದ್ದೇಶ್ವರ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲ್ಲೂಕು ನೀರಾವರಿ ಹೋರಾಟ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘30 ವರ್ಷಗಳ ಹಿಂದೆ ಮೊಳಕಾಲ್ಮುರಿನ ರಾಂಪುರದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಹೋರಾಟಕ್ಕೆ ಚಾಲನೆ ನೀಡಲಾಗಿತ್ತು. ಆದರೆ ಯೋಜನೆ ಪ್ರಗತಿಯಲ್ಲಿ ನಮ್ಮ ತಾಲ್ಲೂಕು ಕೊನೆ ಸ್ಥಾನದಲ್ಲಿದೆ. ಇದಕ್ಕೆ ಇದು ನಮ್ಮ ಬದ್ಧತೆ, ಹೋರಾಟ ಮನೋಭಾವ, ಪ್ರಶ್ನೆ ಮಾಡುವ ಗುಣ ಇಲ್ಲದಿರುವುದನ್ನು ಎತ್ತಿ ತೋರಿಸುತ್ತಿದೆ. ಪ್ರಶ್ನೆ ಮಾಡಿ ಹಕ್ಕು ಕಿತ್ತುಕೊಂಡಲ್ಲಿ ಮಾತ್ರ ಸರ್ಕಾರದ ಸೌಲಭ್ಯಗಳು ಸಿಗಲು ಸಾಧ್ಯವಿದೆ’ ಎಂದು ಹೇಳಿದರು.

ADVERTISEMENT

‘ನೀರಾವರಿ ಹೋರಾಟ ಸಮಿತಿಯನ್ನು ಕ್ರಿಯಾಶೀಲಗೊಳಿಸಲು ಹೊಸ ಆಯ್ಕೆ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಿ ಜನರನ್ನು ಜಾಗೃತಿ ಮಾಡಬೇಕಿದೆ. ಹೊಸ ಸಮಿತಿ ಸಭೆ ನಂತರ ಮೊದಲು ತಾಲ್ಲೂಕು ಕಚೇರಿ ಎದುರು ಒಂದು ವಾರ ಕಾಲ ಧರಣಿ, ನಂತರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ, ವಿಧಾನಸೌಧ ಚಲೋ ಕಾರ್ಯಕ್ರಮ ರೂಪಿಸಬೇಕಿದೆ. ಇದಕ್ಕೆ ಪಕ್ಷಾತೀತ ಬೆಂಬಲ ನೀಡಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ. ಜಗಳೂರಯ್ಯ ಮಾತನಾಡಿ, ‘ಮೊಳಕಾಲ್ಮುರು ಪೂರ್ಣ ಮಳೆಯಾಶ್ರಿತವಾಗಿದ್ದು, ಕೆರೆ ತುಂಬಿಸುವ ಯೋಜನೆಯಿಂದ ಮಾತ್ರ ಭವಿಷ್ಯ ಕಾಣಲು ಸಾಧ್ಯ. ಮುಂದಿನ ದಿನಗಳಲ್ಲಿ ನಡೆಯುವ ಎಲ್ಲ ರೀತಿ ಹೋರಾಟಕ್ಕೆ ಜನರು ಸಹಕಾರ ನೀಡಬೇಕು. ಬರೀ ಸಮಿತಿ, ಕೆಲ ಸಂಘಟನೆಗಳಿಗೆ ಮಾತ್ರ ಹೋರಾಟ ಸೀಮಿತ ಮಾಡುವುದು ಸರಿಯಲ್ಲ’ ಎಂದರು.

‘ನೆರೆಯ ಕೂಡ್ಲಿಗಿ ತಾಲ್ಲೂಕಿನಲ್ಲಿ 5 ವರ್ಷ ಅವಧಿಯಲ್ಲಿ ಕೆರೆ ತುಂಬಿಸುವ ಯೋಜನೆ ಸಾಕಾರವಾಗಿದೆ. ನಮ್ಮ ತಾಲ್ಲೂಕಿನಲ್ಲಿ ಹೋರಾಟ ನೀರಸವಾಗಿರುವುದು ವಿಳಂಬಕ್ಕೆ ಒಂದು ಕಾರಣವಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ ಹೋರಾಟ ಸಮಿತಿಗಳನ್ನು ಸಕ್ರಿಯಗೊಳಿಸಿ ಭದ್ರಾ ಮೇಲ್ದಂಡೆ ಯೋಜನೆಗೆ ಚುರುಕು ನೀಡಲಾಗುವುದು ಎಂದು ಜಿಲ್ಲಾ ಸಮಿತಿ ಹೇಳಿದ್ದು ಇದಕ್ಕೆ ಎಲ್ಲ ಸಂಘಟನೆಗಳು, ಪಕ್ಷಗಳು ಕೈಜೋಡಿಸಬೇಕು’ ಎಂದು ಸಿಪಿಐ ಸಂಚಾಲಕ ಡಿ. ಪೆನ್ನೆಯ್ಯ ಹೇಳಿದರು.

ಮುಖಂಡರಾದ ಐಯಣ್ಣ, ಒ.ಕರಿಬಸಪ್ಪ‌, ಆನಂದ್ ಐಹೊಳೆ, ಜಾಫರ್‌ ಷರೀಫ್‌, ಟಿ.ರೇವಣ್ಣ, ಎಂ.ಎಸ್.‌ಮಾರ್ಕಾಂಡೇಯ, ವಿನಯ್‌ ಕುಮಾರ್‌, ಗುರುರಾಜಣ್ಣ, ಬಿ.ವಿಜಯ್‌, ದಡಗೂರು ಮಂಜುನಾಥ್‌, ಟಿ.ಟಿ.ರವಿಕುಮಾರ್‌, ಸಣ್ಣಯಲ್ಲಪ್ಪ, ಕೆ.ಬಿ. ಪಾಪನಾಯಕ, ಡಿ.ಬಿ. ಬಸವರಾಜ್‌, ಲಕ್ಷ್ಮಣ್‌ ಇದ್ದರು.

ಹೊಸ ಸಮಿತಿ ರಚನೆ  ಸಭೆಯಲ್ಲಿ ಹೊಸ ಸಮಿತಿ ರಚಿಸಿದ್ದು ಪದಾಧಿಕಾರಿಗಳು ಇಂತಿದ್ದಾರೆ. ಡಿ.ಸಿ. ನಾಗರಾಜ್‌‌ ರಾಂಪುರ (ಅಧ್ಯಕ್ಷ) ಕೆ. ಜಗಳೂರಯ್ಯ (ಗೌರವಾಧ್ಯಕ್ಷ) ಜಿ.ಪ್ರಕಾಶ್‌ ಕಾರ್ಯಾಧ್ಯಕ್ಷ ಕೊಂಡಾಪುರ ಪರಮೇಶ್ವರಪ್ಪ (ಉಪಾಧ್ಯಕ್ಷ) ಮರ್ಲಹಳ್ಳಿ ರವಿಕುಮಾರ್‌ (ಪ್ರಧಾನ ಕಾರ್ಯದರ್ಶಿ) ಹಾನಗಲ್‌ ತಿಪ್ಪೇಸ್ವಾಮಿ (ಖಜಾಂಚಿ) ರಾಜಶೇಖರ ನಾಯಕ (ಕಾನೂನು ಸಲಹೆಗಾರ) ಮಹಾಂತೇಶ್‌ ಈರಣ್ಣ ಲೋಕೇಶ್‌ ಪಲ್ಲವಿ ವೆಂಕಟೇಶ್‌ ಸದಸ್ಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.