ADVERTISEMENT

ಹೊಸದುರ್ಗ: ಕಾಯಕಲ್ಪಕ್ಕೆ ಕಾದಿರುವ ಮೂಡಲಮುತ್ತಿನಕೆರೆ

ಶ್ವೇತಾ ಜಿ.
Published 10 ಆಗಸ್ಟ್ 2022, 4:04 IST
Last Updated 10 ಆಗಸ್ಟ್ 2022, 4:04 IST
ಹೊಸದುರ್ಗ ತಾಲ್ಲೂಕಿನ ಬಾಗೂರಿನ ಮೂಡಲ ಮುತ್ತಿನಕೆರೆಯ ಏರಿ ಮೇಲೆ ಬೆಳೆದಿರುವ ಗಿಡಗಂಟಿಗಳು (ಎಡಚಿತ್ರ). ಕೆರೆಯೊಳಗಿನ ಗಿಡಗಳು
ಹೊಸದುರ್ಗ ತಾಲ್ಲೂಕಿನ ಬಾಗೂರಿನ ಮೂಡಲ ಮುತ್ತಿನಕೆರೆಯ ಏರಿ ಮೇಲೆ ಬೆಳೆದಿರುವ ಗಿಡಗಂಟಿಗಳು (ಎಡಚಿತ್ರ). ಕೆರೆಯೊಳಗಿನ ಗಿಡಗಳು   

ಹೊಸದುರ್ಗ: ಕೆರೆ ಏರಿಯ ಮೇಲೆ ಸುತ್ತಲೂ ದಟ್ಟವಾಗಿ ಬೆಳೆದಿರುವ ಜಾಲಿಗಿಡಗಳು ಏರಿಯೂ ಕಾಣದಂತೆ ಮಾಡಿವೆ. ಕೆರೆ ಒಳಗೆ ನೋಡಿದರೆ ನೀರಿನಲ್ಲಿ ಅಲ್ಲಲ್ಲಿ ಒಣಗಿ ನಿಂತಿರುವ ಗಿಡಗಳು ಗೋಚರಿಸುತ್ತವೆ. ಇದು ತಾಲ್ಲೂಕಿನ ಬಾಗೂರಿನ ಮೂಡಲಮುತ್ತಿನಕೆರೆಯ ಇಂದಿನ ಸ್ಥಿತಿ.

ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ 900 ಎಕರೆ ಇರುವ ಈ ಮೂಡಲಮುತ್ತಿನಕೆರೆ ಕೋಡಿ ಬಿದ್ದಿದೆ. ಸುತ್ತಮುತ್ತಲಿನ ಬಾಗೂರು, ದೊಡ್ಡರಂಗಯ್ಯನಹಟ್ಟಿ, ನಾಗೇನಹಳ್ಳಿ, ಹೊನ್ನೇಕೆರೆ, ಗೊಲ್ಲರಹಟ್ಟಿ, ಮಧುರೆ ಸೇರಿದಂತೆ ಹಲವು ಗ್ರಾಮಗಳ ಭೂಮಿಗೆ ನಿರೊದಗಿಸುತ್ತದೆ ಈ ನದಿ. ಇಲ್ಲಿಂದ 1000ಕ್ಕೂ ಹೆಚ್ಚು ಎಕರೆ ಭೂಮಿಗೆ ನೀರು ಲಭ್ಯವಾಗುತ್ತಿತ್ತು.

12 ಅಡಿಗೆ ಬಂದ ನಂತರ ಕೋಡಿ ಬಿದ್ದ ನೀರು ನೀರಗುಂದ ಕೆರೆ ಸೇರುತ್ತದೆ. 10 ವರ್ಷಗಳ ಹಿಂದೆ ಇದೇ ನೀರಿನ ಆಶ್ರಯದಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಆದ ಕಾರಣ ಬಾಗೂರಿಗೆ ಸಣ್ಣಕ್ಕಿ ಬಾಗೂರು ಎಂದೇ ಪ್ರಖ್ಯಾತಿ ಇತ್ತು. ನಂತರ ಬರಗಾಲ ಆವರಿಸಿದ್ದರಿಂದ ಕೆರೆ ನೀರು ಯಾರಿಗೂ ಲಭ್ಯವಿಲ್ಲದಂತಾಗಿತ್ತು. ಜನರು ನೀರಾವರಿ ಮಾಡಿಕೊಂಡು ಇತರ ಬೆಳೆ ಬೆಳೆಯುತ್ತಿದ್ದಾರೆ.

ADVERTISEMENT

ಸುತ್ತಲಿನ ಜನರ ಜೀವನಾಡಿಯಾಗಿರುವ ಈ ಕೆರೆ ದುರಸ್ತಿ ಕಾರ್ಯದಿಂದ ವಂಚಿತವಾಗಿದೆ. ಕೆರೆಯ ಮಧ್ಯಭಾಗದಲ್ಲಿಯ ಗಿಡದ ಕಸ ಹಾಗೆಯೇ ಇದೆ. ಅಂಚಿನಲ್ಲಿ ಪ್ಲಾಸ್ಟಿಕ್‌ ಬಾಟಲ್‌, ಚೀಲ ಇತ್ಯಾದಿ ಕಸದ ರಾಶಿ ಇವೆ. ಇದರ ಹೊಣೆ ಹೊರುವವರು ಯಾರೂ ಇಲ್ಲದಂತಾಗಿದೆ.

‘ಕೆರೆ ಹೂಳೆತ್ತದೇ ಎಷ್ಟೋ ವರ್ಷಗಳು ಆಗಿವೆ. ಈ ಕೆರೆಗೆ ಕೋಡಿಕಲ್ಲೇಶ್ವರ ಹಾಗೂ ಮಾಸ್ತಮ್ಮ ದೇವಾಲಯದ ಸಮೀಪ ಎರಡು ತೂಬುಗಳಿವೆ. ಅವು ಮುಚ್ಚಿದ್ದು, ಅದರ ಸ್ವಚ್ಛತೆಗೆ ಯಾರೂ ಮುಂದಾಗಿಲ್ಲ. ಕೆರೆ ಏರಿ ಕೂಡ ದಟ್ಟ ಜಾಲಿಗಿಡಗಳ ನಡುವೆ ಚಿಕ್ಕದಾಗಿ ಕಾಣುತ್ತಿದೆ. ಇದನ್ನು ತೆಗೆಸಿದರೆ ಕೆರೆಯ ಸೌಂದರ್ಯ ಸವಿಯಬಹುದು. ಕೆರೆಯ ಸುತ್ತಮುತ್ತ ಸ್ವಚ್ಛತೆಯ ಕೊರತೆಯಿದೆ. ಏರಿ ಸುತ್ತಲೂ ಗಿಡಗಂಟಿಗಳ ರಾಶಿ ತುಂಬಿದೆ. ಇಲ್ಲಿಯ ಗಿಡಗಳನ್ನು ತೆಗೆದು ಏರಿಯನ್ನು ಇನ್ನಷ್ಟು ಅಗಲ ಮತ್ತು ಎತ್ತರ ಮಾಡಬೇಕು. ಕೆರೆ ನೀರು ಏರಿ ಬಿಟ್ಟು ಸಣ್ಣದಾಗಿ ಹೊರಹೋಗುತ್ತಿದೆ. ಊರುಗಳಿಗೆ ಸಮೀಪವಿರುವ ಜಾಗದಲ್ಲಿ ಚಿಕ್ಕದಾಗಿ ಮೆಟ್ಟಿಲುಗಳನ್ನು ಮಾಡಿದರೆ, ಬಟ್ಟೆ ತೊಳೆಯುವವರಿಗೆ, ದನಕರುಗಳಿಗೆ ನೀರು ಕುಡಿಸುವವರಿಗೆ ಅನುಕೂಲವಾದೀತು’ ಎನ್ನುತ್ತಾರೆ ವೆಂಕಟೇಶ್‌ ಆರ್‌.

........

ಕೆರೆ ನೀರನ್ನು ಕೃಷಿ ಬಳಕೆಗೆ ಅವಕಾಶ ಮಾಡಿಕೊಟ್ಟರೇ ಗದ್ದೆ ಮಾಡಿ, ಭತ್ತ ಬೆಳೆಯುವ ಕನಸಿದೆ. ನೀರು ಉತ್ತವಾಗಿ ದೊರೆತರೆ ಹಲವು ಬೆಳೆ ಬೆಳೆದು ಹೆಚ್ಚು ಲಾಭ ಗಳಿಸಬಹುದು.‌
– ಉಲ್ಲಾಸ್‌ ಬಾಗೂರು, ಗ್ರಾಮಸ್ಥ

.......

ಕೆರೆಯಲ್ಲಿಯ ನೀರು ಖಾಲಿಯಾದ ನಂತರದ ಹೂಳೆತ್ತಿಸಿ, ಅಲ್ಲಿಯ ಗಿಡಗಳನ್ನು ತೆಗೆಯಿಸುವ ಕಾರ್ಯ ನಡೆಯಲಿದೆ. ಪ್ರಸ್ತುತ ಏರಿ ಮೇಲಿನ ಜಾಲಿ ಗಿಡ ತೆಗೆಯಿಸುವ ಕಾರ್ಯ ಮುಂದಿನ ದಿನಗಳಲ್ಲಿ ಮಾಡಲಾಗುತ್ತದೆ.
-ಮಹೇಶ್‌, ಸಣ್ಣ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.