ADVERTISEMENT

ಚಿತ್ರದುರ್ಗ: ಮೋದಿ ಭಾರತದ ಘನತೆ ಹೆಚ್ಚಿಸಿದ್ದಾರೆ: ಶಾಸಕ ತಿಪ್ಪಾರೆಡ್ಡಿ

‘ನರೇಂದ್ರ ಮೋದಿಯವರ ಬದುಕಿನ ಮಹಾಯಾನ’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 6:51 IST
Last Updated 22 ನವೆಂಬರ್ 2022, 6:51 IST
ಚಿತ್ರದುರ್ಗದ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಪ್ರೊ.ಲಿಂಗಪ್ಪ ಅವರ ‘ನರೇಂದ್ರ ಮೋದಿಯವರ ಬದುಕಿನ ಮಹಾಯಾನ’ ಹಾಗೂ ‘ಅರಿವಿನ ಬುತ್ತಿ’ ಪುಸ್ತಕಗಳನ್ನು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಬಿಡುಗಡೆ ಮಾಡಿದರು.
ಚಿತ್ರದುರ್ಗದ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಪ್ರೊ.ಲಿಂಗಪ್ಪ ಅವರ ‘ನರೇಂದ್ರ ಮೋದಿಯವರ ಬದುಕಿನ ಮಹಾಯಾನ’ ಹಾಗೂ ‘ಅರಿವಿನ ಬುತ್ತಿ’ ಪುಸ್ತಕಗಳನ್ನು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಬಿಡುಗಡೆ ಮಾಡಿದರು.   

ಚಿತ್ರದುರ್ಗ: ಜಗತ್ತಿನಲ್ಲಿ ಭಾರತದ ಘನತೆ ಹೆಚ್ಚಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಆದರೆ ಸಿದ್ಧಾಂತಗಳ ಬಗ್ಗೆ ಮಾತನಾಡುವ ಕೆಲವರು ನಿಜ ಸಂಗತಿಗಳನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ತಿಳಿಸಿದರು.

ನಗರದ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಪ್ರೊ.ಲಿಂಗಪ್ಪ ಅವರ ‘ನರೇಂದ್ರ ಮೋದಿಯವರ ಬದುಕಿನ ಮಹಾಯಾನ’ ಹಾಗೂ ‘ಅರಿವಿನ ಬುತ್ತಿ’ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಒಂದು ಕಾಲದಲ್ಲಿ ಭಾರತವನ್ನು ಕಡೆಗಣಿಸುತ್ತಿದ್ದ ದೇಶಗಳು, ಇದೀಗ ನಮ್ಮ ಪ್ರಧಾನಿಯನ್ನು ವಿಮಾನ ನಿಲ್ದಾಣಕ್ಕೆ ಬಂದು ಸ್ವಾಗತಿಸುತ್ತಿ
ದ್ದಾರೆ. ಮೋದಿ ಪ್ರಧಾನಿಯಾದ ಬಳಿಕ ಭಾರತದ ಕೀರ್ತಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿದೆ’ ಎಂದರು.

ADVERTISEMENT

‘ರಾಷ್ಟ್ರೀಯ ಸ್ವಯಂ ಸೇವಾ ಸಂಘದಿಂದ ಬೆಳೆದು ಬಂದ ಮೋದಿ ಗುಜರಾತ್‌ ಮುಖ್ಯಮಂತ್ರಿಯಾದರು. ಬಳಿಕ ದೇಶದ ಪ್ರಧಾನಿಯಾದರು. ಇದೀಗ ಜಗತ್ತಿಗೆ ಯುದ್ಧ ಮಾಡದಂತೆ ತಿಳಿವಳಿಕೆ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇದು ಯುದ್ಧದ ಕಾಲವಲ್ಲ ಎಂಬ ಗಟ್ಟಿ ಸಂದೇಶವನ್ನು ನೀಡಿದ್ದಾರೆ’ ಎಂದು ತಿಳಿಸಿದರು.

‘ದೇಶದ ಸ್ವಾತಂತ್ರ್ಯಕ್ಕಾಗಿ ಹುಟ್ಟಿಕೊಂಡ ಕಾಂಗ್ರೆಸ್‌ ಅನ್ನು ಸ್ವಾತಂತ್ರ್ಯ ನಂತರ ವಿಸರ್ಜಿಸುವಂತೆ ಅನೇಕ ಹಿರಿಯರು ಹೇಳಿದ್ದರು. ಆದರೆ ನೆಹರೂ ತನ್ನ ಸ್ವಾರ್ಥಕ್ಕಾಗಿ ರಾಜಕೀಯ ಪಕ್ಷವನ್ನಾಗಿಸಿದರು. ಈ ಮೂಲಕ ದೇಶಕ್ಕೆ ಸಂವಿಧಾನ ನೀಡಿದಂತಹ ಅಂಬೇಡ್ಕರ್‌ ಅವರನ್ನು ಸೋಲಿಸಿದರು’ ಎಂದು ಬೇಸರಿಸಿದರು.

‘ಶ್ಯಾಂಪ್ರಸಾದ್‌ ಮುಖರ್ಜಿ ಘೋಷಿಸಿದ್ದ ಪ್ರಣಾಳಿಕೆಯಂತೆ ಪ್ರಧಾನಿ ಮೋದಿ ಎಲ್ಲವನ್ನು ಈಡೇರಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೆದ್ದು ಮತ್ತೆ ಮತ್ತೆ ಪ್ರಧಾನಿಯಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮಿರವನ್ನು ವಶಕ್ಕೆ ತೆಗದುಕೊಳ್ಳಲಿದ್ದಾರೆ. ಈ ಸಂದೇಶವನ್ನು ಈಗಾಗಲೇ ರಾಜನಾಥ್‌ ಸಿಂಗ್‌ ನೀಡಿದ್ದಾರೆ’ ಎಂದರು.

‘ಕೋವಿಡ್‌ ಸಂಕಷ್ಟವನ್ನು ಯಶಸ್ವಿಯಾಗಿ ನಿಭಾಯಿಸಿದ ಮೋದಿ ಜನರನ್ನು ರಕ್ಷಿಸಿದರು. ರಷ್ಯಾ-ಉಕ್ರೇನ್ ಯುದ್ಧದಲ್ಲಿ ಸಿಲುಕಿದ್ದ ದೇಶದ ವಿದ್ಯಾರ್ಥಿ
ಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತಂದರು. ಈ ಎಲ್ಲ ಕಾರ್ಯವನ್ನು ಕಂಡು ವಿದೇಶಿಗರು ಮೋದಿ ಒಬ್ಬ ಅಪ್ರತಿಮ ದೇಶ ಭಕ್ತ ಎಂದು
ಹೊಗಳುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ನಿವೃತ್ತ ಮುಖ್ಯ ಶಿಕ್ಷಕ ಹುರುಳಿ ಬಸವರಾಜ್‌ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಬಾಲಕನಿದ್ದಾಗಲೆ ಹಿಮಾಲಯದಲ್ಲಿ ಯೋಗಿಯಂತೆ ಕೆಲವು ದಿನಗಳನ್ನು ಕಳೆಯುತ್ತಾರೆ. ಸಂಘಟನೆ ಚಾತುರ್ಯ ಮಾತುಗಾರಿಕೆ ಅವರಲ್ಲಿದೆ. ಹೃದಯವಂತಿಕೆ ಸಂಘಟನೆಯಲ್ಲಿ ಪ್ರಬುದ್ಧರು’ ಎಂದು ತಿಳಿಸಿದರು.

‘ಆರ್ಥಿಕ ನೀತಿ, ಕೋವಿಡ್‌ನಂತಹ ಸಂಕಷ್ಠ ಪರಿಸ್ಥಿತಿ, ನೋಟುಗಳ ಅಮಾನ್ಯೀಕರಣ ಸಂದರ್ಭದಲ್ಲಿ ಅನೇಕ ಟೀಕೆ ಟಿಪ್ಪಣಿಗಳು ಎದುರಾದರೂ ಯಾವುದಕ್ಕೂ ಜಗ್ಗಲಿಲ್ಲ. ಮೋದಿಯಲ್ಲಿ ಕಥೆಗಾರ, ಕಾದಂಬರಿಗಾರ ಇದ್ದಾನೆ. ಬುದ್ಧ, ಬಸವ, ಅಂಬೇಡ್ಕರ್‌ ಅವರಲ್ಲಿದ್ದ ಪ್ರಜ್ಞೆಯನ್ನು ಲಿಂಗಪ್ಪ ಅವರು ಪುಸ್ತಕದಲ್ಲಿ ಕಾಣಿಸಿದ್ದಾರೆ’ ಎಂದರು.

ಜಾನಪದ ವಿದ್ವಾಂಸ ಪಿ.ಬಿ.ಮೀರಾಸಾಬಿಹಳ್ಳಿ ಶಿವಣ್ಣ, ಪ್ರೊ.ಟಿ.ವಿ.ಸುರೇಶ್‌ ಗುಪ್ತ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಕಲ್ಲೇಶಯ್ಯ, ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎಂ.ವೀರೇಶ್‌, ನಿವೃತ್ತ ಉಪನ್ಯಾಸಕ ಪರಮೇಶ್ವರಪ್ಪ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಇದ್ದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಭವನ ನಿರ್ಮಾಣಕ್ಕೆ ಪರಿಷತ್‌ ಆಸಕ್ತಿವಹಿಸಬೇಕು. ಈಗಾಗಲೇ ಬಹಳಷ್ಟು ವಿಳಂಬವಾಗಿದೆ. ಸಿದ್ಧತೆ ಪೂರ್ಣಗೊಳಿಸಿ ಮುಖ್ಯಮಂತ್ರಿಗಳಿಂದ ಭೂಮಿ ಪೂಜೆಗೆ ವ್ಯವಸ್ಥೆ ಮಾಡುತ್ತೇನೆ.

- ಜಿ.ಎಚ್‌.ತಿಪ್ಪಾರೆಡ್ಡಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.