ADVERTISEMENT

ಗುರುತಿಪ್ಪೇರುದ್ರಸ್ವಾಮಿಗೆ ಕಂಕಣಧಾರಣೆ ಕೈಂಕರ್ಯ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 5:31 IST
Last Updated 28 ಫೆಬ್ರುವರಿ 2026, 5:31 IST
ನಾಯಕನಹಟ್ಟಿ ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಒಳಮಠ ದೇಗುಲದಲ್ಲಿ ಶುಕ್ರವಾರ ಸ್ವಾಮಿಯ ಉತ್ಸವಮೂರ್ತಿಗೆ ಕಂಕಣಧಾರಣೆ ನಿಮಿತ್ತ ಪಂಚಕಳಸ ಸಹಿತ ಗಣಪತಿ ಆರಾಧನೆ ನೆರವೇರಿಸಲಾಯಿತು.
ನಾಯಕನಹಟ್ಟಿ ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಒಳಮಠ ದೇಗುಲದಲ್ಲಿ ಶುಕ್ರವಾರ ಸ್ವಾಮಿಯ ಉತ್ಸವಮೂರ್ತಿಗೆ ಕಂಕಣಧಾರಣೆ ನಿಮಿತ್ತ ಪಂಚಕಳಸ ಸಹಿತ ಗಣಪತಿ ಆರಾಧನೆ ನೆರವೇರಿಸಲಾಯಿತು.   


ನಾಯಕನಹಟ್ಟಿ :
ಮಾರ್ಚ್ 6ರ ಶುಕ್ರವಾರದಂದು ನಡೆಯಲಿರುವ ಗುರುತಿಪ್ಪೇರುದ್ರಸ್ವಾಮಿ ವಾರ್ಷಿಕ ಮಹಾಜಾತ್ರೆಯ ಪ್ರಯುಕ್ತ ಶುಕ್ರವಾರ ರಾತ್ರಿ ಸ್ವಾಮಿಯ ಉತ್ಸವ ಮೂರ್ತಿಗೆ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಕಂಕಣಧಾರಣೆ ಕಾರ್ಯ ನೆರವೇರಿಸಲಾಯಿತು.

ವಾರ್ಷಿಕ ಮಹಾಜಾತ್ರೆಯ ಓಕಳಿಯ 9 ದಿನಗಳ ಮೊದಲು ಗುರುತಿಪ್ಪೇರುದ್ರಸ್ವಾಮಿ ಉತ್ಸವಮೂರ್ತಿಗೆ ಕಂಕಣಧಾರಣೆ ಕಾರ್ಯ ನೆರವೇರಿಸುವುದು ವಾಡಿಕೆಯಾಗಿದೆ. ಅದರಂತೆ ಶುಕ್ರವಾರ ಬೆಳಗಿನಿಂದಲೇ ಒಳಮಠದ ದೇವಾಲಯವನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಉತ್ಸವಮೂರ್ತಿಯನ್ನು ಅಲಂಕರಿಸಿದ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಪಕ್ಕದಲ್ಲೇ ಕಂಕಣಧಾರಣೆ ನಿಮಿತ್ತ ಪಂಚಕಳಸ ಪ್ರತಿಷ್ಠಾಪನೆ, ಗಣಪತಿ ಆರಾಧನೆ, ಅಷ್ಟದಿಗ್ಪಾಲಕರ ಶಾಂತಿ ಸಹಿತ ಹಲವು ಪೂಜಾವಿಧಿ ವಿಧಾನಗಳನ್ನು ನೆರವೇರಿಸಲಾಯಿತು.

ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿದ ದೇವರ ಉತ್ಸವಮೂರ್ತಿಗೆ ಪುರ ಪುರೋಹಿತ ಮುರಳಿಕೃಷ್ಣಶಾಸ್ತ್ರಿಯವರು ಕಂಕಣಧಾರಣೆ ನೆರವೇರಿಸಿದರು. ನಂತರ ಜಾತ್ರೆಯು ಸುಗಮವಾಗಿ ನಡೆಯಲು ಅರ್ಚಕರು, ಬಾಬುದಾರರು, ಸೇವಾಕರ್ತರು, ಅಧಿಕಾರಿಗಳು, ಜನಪ್ರತಿನಿಧಿಗಳು, ಮುಖಂಡರು, ಗ್ರಾಮಸ್ಥರು ಕಂಕಣಬದ್ಧರಾಗಿ ಜಾತ್ರೆಯ ಕೆಲಸ ಕಾರ್ಯಗಳಲ್ಲಿ ತೊಡಗುತ್ತೇವೆ ಎಂದು ದೃಢ ಸಂಕಲ್ಪದಿಂದ ಕಾರ್ಯನಿರ್ವಹಿಸಲು ಕಂಕಣವನ್ನು ಕಟ್ಟಿಸಿಕೊಂಡರು.

ADVERTISEMENT

ಇದೇವೇಳೆ ಪ.ಪಂ.ಅಧ್ಯಕ್ಷೆ ಟಿ.ಮಂಜುಳಾಶ್ರೀಕಾಂತ್, ಉಪಾಧ್ಯಕ್ಷೆ ಪಿ.ಬೋಸಮ್ಮ, ಸದಸ್ಯರಾದ ಜೆ.ಆರ್.ರವಿಕುಮಾರ್, ಬಿ.ವಿನುತ, ಎನ್.ಮಹಾಂತಣ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ದೇಗುಲ ಕಾರ್ಯನಿರ್ವಹಣಾಧಿಕಾರಿ ಹೆಚ್.ಗಂಗಾಧರಪ್ಪ, ಎಸ್.ಸತೀಶ್, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಜೆಪಿ.ರವಿಶಂಕರ್, ಎಂ.ವೈ.ಟಿ.ಸ್ವಾಮಿ, ನಿವೃತ್ತ ತಹಶೀಲ್ದಾರ್ ಎನ್.ರಘುಮೂರ್ತಿ, ದೈವಸ್ಥರು, ಬಾಬುದಾರರು, ಗ್ರಾಮಸ್ಥರು ಉಪಸ್ಥಿತರಿದ್ದರು.


ಜಾತ್ರೆ ಕಾರ್ಯಕ್ರಮದ ವಿವರ:
ಮಾರ್ಚ್ 28ರಂದು ಶನಿವಾರ ರಾತ್ರಿ ವಾರೋತ್ಸವ ಮತ್ತು ದೇವರನ್ನು ಸರ್ಪವಾಹನೋತ್ಸವದಲ್ಲಿ ಮೆರವಣಿಗೆ.
ಮಾರ್ಚ್ 01ರಂದು ಭಾನುವಾರ ರಾತ್ರಿ ಮಯೂರ ವಾಹನೋತ್ಸವ.
ಮಾರ್ಚ್ 02ರಂದು ಸೋಮವಾರ ದೊಡ್ಡರಥಕ್ಕೆ ಕಳಸ ಸ್ಥಾಪನೆ ಮತ್ತು ಅಂದು ರಾತ್ರಿ ಗಜವಾಹನೋತ್ಸವದಲ್ಲಿ ಮೆರವಣಿಗೆ.
ಮಾರ್ಚ್ 03ರಂದು ಮಂಗಳವಾರ ಸಿಂಹವಾನೋತ್ಸವದಲ್ಲಿ ಮೆರವಣಿಗೆ.
ಮಾರ್ಚ್ 04ರಂದು ಬುಧವಾರ ಅಶ್ವವಾಹನೋತ್ಸವದಲ್ಲಿ ಮೆರವಣಿಗೆ.
ಮಾರ್ಚ್ 05ರಂದು ಗುರುವಾರ ರಥಕ್ಕೆ ತೈಲಾಭಿಷೇಕ.
ಮಾರ್ಚ್ 06ರಂದು ಶುಕ್ರವಾರ ಮದ್ಯಾಹ್ನ 3ಗಂಟೆಗೆ ಮುಕ್ತಿಬಾವುಟ ಹರಾಜು ನಂತರ ಚಿತ್ತಾನಕ್ಷತ್ರದಲ್ಲಿ

ಮಹಾರಥೋತ್ಸವಕ್ಕೆ ಚಾಲನೆ


ಮಾರ್ಚ್ 07ರಂದು ಶನಿವಾರ ರಾತ್ರಿ ದೇವರನ್ನು ಪಾದಗಟ್ಟೆಯ ಬಳಿತಂದು ವಸಂತೋತ್ಸವ ಓಕಳಿ ಕಾರ್ಯ ನೆರವೇರಿಸುವುದು.
ಮಾರ್ಚ್ 09ರಂದು ಸೋಮವಾರ ಮರಿಪರಿಷೆ ಮತ್ತು ವಾರೋತ್ಸವ ನಡೆಸಿ ಜಾತ್ರೆಯನ್ನು ಸಂಪನ್ನಗೊಳಿಸಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.