ಚಿತ್ರದುರ್ಗ: ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮೂಲಕ ರಾಜ್ಯದಲ್ಲಿ181 ಮಾಂಸಾಹಾರಿ ಮೊಬೈಲ್ ಕ್ಯಾಂಟೀನ್ ತೆರೆಯಲು ಮುಂದಾಗಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿಮೊದಲ ಕ್ಯಾಂಟೀನ್ಗೆ ಮಂಗಳವಾರ ಚಾಲನೆ ಸಿಕ್ಕಿದೆ.
ಪ್ರತಿ ತಾಲ್ಲೂಕಿಗೆ ಒಂದರಂತೆ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅರ್ಹ ಫಲಾನುಭವಿಗೆ ಮಾಂಸಾಹಾರಿ ಮೊಬೈಲ್ ಕ್ಯಾಂಟೀನ್ ಸೌಲಭ್ಯ ದೊರೆಯಲಿದೆ.
ಪಶು ವೈದ್ಯಕೀಯ ಮತ್ತು ಪಶುಸಂಗೋಪನಾ ಇಲಾಖೆಯ ಮೂಲಕ ವಾಹನ ವಿತರಿಸಲಾಗುತ್ತಿದೆ.ಪಶುಸಂಗೋಪನೆಯಲ್ಲಿ ತೊಡಗಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿಗಳು ಇದರ ಪ್ರಯೋಜನ ಪಡೆಯಬಹುದಾಗಿದೆ.
ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕಿನಲ್ಲಿ ಪರಿಶಿಷ್ಟ ಪಂಗಡ ಹಾಗೂ ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಮಾಂಸಾಹಾರಿ ಮೊಬೈಲ್ ಕ್ಯಾಂಟೀನ್ ದೊರೆಯಲಿದೆ.
ನಿಗಮ ₹ 8.25 ಲಕ್ಷ ಸಬ್ಸಿಡಿ ಹಾಗೂ ₹ 2.75 ಲಕ್ಷ ಸಾಲ ಸೌಲಭ್ಯ ನೀಡಲಿದೆ. ಒಟ್ಟು ₹ 11 ಲಕ್ಷ ವೆಚ್ಚದ ಈ ವಾಹನದಲ್ಲಿ ಅಡುಗೆ ಅನಿಲ, ಪಾತ್ರೆ, ತಟ್ಟೆ ಸೇರಿ ಅಗತ್ಯ ಉಪಕರಣಗಳನ್ನು ಇಟ್ಟುಕೊಳ್ಳಲು ಸುಸಜ್ಜಿತವಾಗಿ ವ್ಯವಸ್ಥೆ ಮಾಡಲಾಗಿದೆ. ಮೇಕೆ, ಕುರಿ ಮಾಂಸ ಮಾರಾಟಕಷ್ಟೇ ಇದು ಸೀಮಿತವಾಗಿಲ್ಲ. ಮಟನ್, ಮಟನ್ ಫ್ರೈ, ಮಟನ್ ಕಬಾಬ್ ಸೇರಿ ತರಹೇವಾರಿ ಮಾಂಸಾಹಾರವೂ ಲಭ್ಯ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.