ಮೊಳಕಾಲ್ಮುರು: ಈರುಳ್ಳಿ ಬೀಜೋತ್ಪಾದನೆಯಲ್ಲಿ ಜಿಲ್ಲೆಯ ಗಮನ ಸೆಳೆದಿರುವ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಈ ಬಾರಿ ಹಿಂಗಾರು ಹಂಗಾಮಿನಲ್ಲಿ 150 ಎಕರೆ ಪ್ರದೇಶದಲ್ಲಿ ಬೀಜೋತ್ಪಾದನೆ ಕಾರ್ಯ ನಡೆಯುತ್ತಿದೆ.
ಕಸಬಾ ಹೋಬಳಿಯು ಬೀಜೋತ್ಪಾದನೆಗೆ ಹೆಸರು ವಾಸಿಯಾಗಿದೆ. ಹೋಬಳಿ ವ್ಯಾಪ್ತಿಯ ಹಾನಗಲ್, ಕಾಟನಾಯಕನಹಳ್ಳಿ, ಕೋನಸಾಗರ, ದೇವರಗುಡ್ಡ, ಪೂಜಾರಿಹಟ್ಟಿ, ರಾಯಾಪುರ, ಸೂಲೇನ ಹಳ್ಳಿಯ ಸುತ್ತಮುತ್ತ ಬೀಜೋತ್ಪಾದನೆ ಮಾಡಲಾಗುತ್ತಿದೆ. ಮುಂಗಾರು ಹಂಗಾಮಿನ ಈರುಳ್ಳಿ ಕಟಾವು ನಂತರ ಈ ಬೀಜೋತ್ಪಾದನೆ ಕಾರ್ಯವನ್ನು ಈ ಪ್ರದೇಶದಲ್ಲಿ ಮಾಡಲಾಗುತ್ತಿದೆ ಎಂದು ತೋಟಗಾರಿಕಾ ಅಧಿಕಾರಿಗಳು ತಿಳಿಸಿದ್ದಾರೆ.
‘ಕಳೆದ 2–3 ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಬೀಜೋತ್ಪಾದನೆ ಮಾಡಲಾಗುತ್ತಿದೆ. ಪ್ರತಿ ಎಕರೆಗೆ ಆರೋಗ್ಯ ಪೂರ್ಣವಾಗಿ 4ರಿಂದ 4.5 ಕ್ವಿಂಟಲ್ ಬೀಜ ಉತ್ಪತ್ತಿಯಾಗುತ್ತದೆ. ಪ್ರಸ್ತುತ ಪ್ರತಿ ಕೆ.ಜಿ ಬೀಜಕ್ಕೆ ₹ 600ರಿಂದ ₹ 700 ಇದೆ’ ಎಂದು ತಾಲ್ಲೂಕು ತೋಟಗಾರಿಕಾ ಅಧಿಕಾರಿ ಆರ್.ವಿರೂಪಾಕ್ಷಪ್ಪ ಮಾಹಿತಿ ನೀಡಿದರು.
‘ಗುಡ್ಡದ ತಪ್ಪಲು ಪ್ರದೇಶಗಳಲ್ಲಿ ಜೇನುಹುಳುಗಳ ಮೂಲಕ ಪ್ರಕೃತಿದತ್ತವಾಗಿ ಬೀಜೋತ್ಪಾದನೆ ನಡೆಯುತ್ತದೆ. ಆದ್ದರಿಂದ ತೋಟಗಳಲ್ಲಿ ಜೇನುಸಾಕಣೆ ಮಾಡಿದರೆ ಇನ್ನೂ ಹೆಚ್ಚಿನ ಪರಾಗಸ್ಪರ್ಶ ಮಾಡಿ ಗುಣಮಟ್ಟದ ಬೀಜವನ್ನು ಪಡೆಯಬಹುದು. ಇದಕ್ಕೆ ಇಲಾಖೆಯಲ್ಲಿ ₹ 3,200 ಸಹಾಯಧನ ಹಾಗೂ ಜೇನುಹುಳು ನೀಡುವ ಯೋಜನೆ ಸಹ ಲಭ್ಯವಿದ್ದು, ಅದನ್ನು ಬಳಸಿಕೊಳ್ಳಲು ಮುಂದಾಗಬೇಕು’ ಎಂದು ಹೇಳಿದರು.
‘ಇಲ್ಲಿಂದ ಬೀಜವನ್ನು ಪ್ರಮುಖವಾಗಿ ಚಿಕ್ಕಮಗಳೂರು, ಬಳ್ಳಾರಿ, ದಾವಣಗೆರೆ, ತುಮಕೂರು ಭಾಗಕ್ಕೆ ಕಳುಹಿಸಲಾಗುತ್ತದೆ. ಜಿಲ್ಲೆಯ ವಿವಿಧ ಕಡೆಯಿಂದ ಇಲ್ಲಿಗೆ ಬಂದು ಬೀಜವನ್ನು ಕೊಂಡುಕೊಳ್ಳುತ್ತಾರೆ. ಬಳ್ಳಾರಿ ಮಾರುಕಟ್ಟೆಯಲ್ಲಿ ಮೊಳಕಾಲ್ಮುರು ತಾಲ್ಲೂಕಿನ ಈರುಳ್ಳಿ ಬೀಜಕ್ಕೆ ಹೆಚ್ಚಿನ ಬೇಡಿಕೆಯಿದೆ. ಗುಣಮಟ್ಟ ಮುಖ್ಯ ಕಾರಣವಾಗಿದೆ. ನೀರಾವರಿ ಕೃಷಿಯಲ್ಲಿ ಮುಂಗಾರು ಹಂಗಾಮಿನಲ್ಲಿ ತರಕಾರಿ ಬೆಳೆಗಳನ್ನು ಬೆಳೆಯುವ ಬದಲು ಸ್ವಲ್ಪ ಲಾಭದಾಯಕ ಕೃಷಿಯಾಗಿ ಬೀಜೋತ್ಪಾದನೆ ಹೊರಹೊಮ್ಮಿದೆ’ ಎಂದು ವಿರೂಪಾಕ್ಷಪ್ಪ ಹೇಳಿದರು.
ಪ್ರಸಕ್ತ ವರ್ಷ ನಾಟಿ ಮಾಡಿರುವ ಬೀಜೋತ್ಪಾದನೆ ಗಿಡಗಳು 45 ದಿನಗಳಲ್ಲಿ ಫಲ ನೀಡಲಿವೆ. ಆಗಿನ ಪರಿಸ್ಥಿತಿಗೆ ತಕ್ಕಂತೆ ಬೆಲೆಯಲ್ಲೂ ಏರಿಕೆಯಾಗುತ್ತದೆ. 5 ವರ್ಷದ ಹಿಂದೆ ₹ 1,700ರಿಂದ 2,000ದವರೆಗೆ ದಾಖಲೆ ದರಕ್ಕೆ ಮಾರಾಟವಾಗಿತ್ತು ಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.