ADVERTISEMENT

ಆಮ್ಲಜನಕ ಘಟಕ ಉದ್ಘಾಟನೆ 24ಕ್ಕೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 13:27 IST
Last Updated 22 ಜುಲೈ 2021, 13:27 IST
ಜಿ.ಎಸ್‌.ಅನಿತ್‌
ಜಿ.ಎಸ್‌.ಅನಿತ್‌   

ಚಿತ್ರದುರ್ಗ: ಇಲ್ಲಿನ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಹಾಲಮ್ಮ ಮಲ್ಲಿಕಾರ್ಜುನಪ್ಪ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ನಿರ್ಮಿಸಿದ ಆಮ್ಲಜನಕ ಉತ್ಪಾದನಾ ಘಟಕ ಜುಲೈ 24ರಂದು ಉದ್ಘಾಟನೆ ಆಗಲಿದೆ ಎಂದು ಟ್ರಸ್ಟಿಯೂ ಆಗಿರುವ ಬಿಜೆಪಿ ಮುಖಂಡ ಜಿ.ಎಸ್‌.ಅನಿತ್‌ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘₹ 60 ಲಕ್ಷ ವೆಚ್ಚದ ಈ ಘಟಕವನ್ನು ಜಿಲ್ಲಾ ಆಸ್ಪತ್ರೆಗೆ ಹಸ್ತಾಂತರ ಮಾಡಲಾಗುತ್ತದೆ. ಪ್ರತಿ ನಿಮಿಷಕ್ಕೆ 330 ಲೀಟರ್‌ ಆಮ್ಲಜನಕ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ. ಐದು ಸಾವಿರ ಲೀಟರ್ ಆಮ್ಲಜನಕ ಸಂಗ್ರಹ ಟ್ಯಾಂಕರ್‌ ಕೂಡ ಇರಲಿದೆ. 56 ರೋಗಿಗಳಿಗೆ ಏಕಕಾಲಕ್ಕೆ ಆಮ್ಲಜನಕ ಪೂರೈಕೆ ಮಾಡಬಹುದು’ ಎಂದು ಹೇಳಿದರು.

‘ಕೋವಿಡ್‌ ಎರಡನೇ ಅಲೆ ಉತ್ತುಂಗದಲ್ಲಿದ್ದಾಗ ಆಮ್ಲಜನಕಕ್ಕೆ ಕೊರತೆ ಉಂಟಾಯಿತು. ಜಿಲ್ಲೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಇಲ್ಲ ಎಂಬುದು ಗೊತ್ತಾಯಿತು. ಅನೇಕ ರೋಗಿಗಳು ಪರದಾಡುತ್ತಿರುವುದು ಅರಿವಿಗೆ ಬಂದಿತು. ಜನರ ಸಂಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ಘಟಕ ಸ್ಥಾಪನೆಗೆ ತೀರ್ಮಾನ ಕೈಗೊಂಡೆವು. ಇದು ಜಿಲ್ಲೆಯ ಮೊದಲ ಆಮ್ಲಜನಕ ಉತ್ಪಾದನಾ ಘಟಕ’ ಎಂದರು.

ADVERTISEMENT

ಟ್ರಸ್ಟಿ ಜಿ.ಎಂ.ಪ್ರಸನ್ನಕುಮಾರ್‌ ಮಾತನಾಡಿ, ‘ಆಮ್ಲಜನಕಕ್ಕೆ ಉಂಟಾದ ಸಮಸ್ಯೆಯನ್ನು ಗಮನಿಸಿ ಹರಿಹರ, ಹರಪನಹಳ್ಳಿ ಹಾಗೂ ಚಿತ್ರದುರ್ಗದಲ್ಲಿ ಘಟಕ ಸ್ಥಾಪಿಸಲಾಗಿದೆ. ಚಿತ್ರದುರ್ಗದ ಘಟಕವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ಸಂಸದ ಜಿ.ಎಂ.ಸಿದ್ದೇಶ್ವರ್‌, ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಟಿ.ಜಿ.ನರೇಂದ್ರನಾಥ್‌, ಭೀಮಸಮುದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶರತ್ ಪಾಟೀಲ, ಬಿಜೆಪಿ ಮುಖಂಡ ಶಿವಣ್ಣಾಚಾರ್‌, ನಾಗರಾಜ್‌ ಬೇದ್ರೆ, ದಗ್ಗೆ ಶಿವಪ್ರಕಾಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.