ADVERTISEMENT

ಗ್ರಾಮೀಣ ಸೊಗಡಿನ ಚಿತ್ರ ನಿರ್ಮಾಣಕ್ಕೆ ಆದ್ಯತೆ

‘ಕಾಸಿನಸರ’ ಚಲನಚಿತ್ರದ ನಿರ್ಮಾಪಕ ಈ. ದೊಡ್ಡನಾಗಯ್ಯ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 6:44 IST
Last Updated 20 ಮಾರ್ಚ್ 2023, 6:44 IST
ನಾಯಕನಹಟ್ಟಿ ಹೋಬಳಿಯ ಓಬಯ್ಯನಹಟ್ಟಿ ಗ್ರಾಮದಲ್ಲಿ ಭಾನುವಾರ ‘ಕಾಸಿನಸರ’ ಚಲನಚಿತ್ರದ ನಿರ್ಮಾಪಕ ಈ. ದೊಡ್ಡನಾಗಯ್ಯ ಗ್ರಾಮದ ಜನರಿಗೆ ಆಹಾರ ಸಾಮಗ್ರಿಯ ಕಿಟ್ ವಿತರಿಸಿದರು.
ನಾಯಕನಹಟ್ಟಿ ಹೋಬಳಿಯ ಓಬಯ್ಯನಹಟ್ಟಿ ಗ್ರಾಮದಲ್ಲಿ ಭಾನುವಾರ ‘ಕಾಸಿನಸರ’ ಚಲನಚಿತ್ರದ ನಿರ್ಮಾಪಕ ಈ. ದೊಡ್ಡನಾಗಯ್ಯ ಗ್ರಾಮದ ಜನರಿಗೆ ಆಹಾರ ಸಾಮಗ್ರಿಯ ಕಿಟ್ ವಿತರಿಸಿದರು.   

ನಾಯಕನಹಟ್ಟಿ: ಆಧುನಿಕ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಸೊಗಡುವುಳ್ಳ ಕಥಾವಸ್ತುವನ್ನು ಆಧಾರಿಸಿದ ಚಿತ್ರಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ‘ಕಾಸಿನಸರ’ ಚಲನಚಿತ್ರದ ನಿರ್ಮಾಪಕ ಈ. ದೊಡ್ಡನಾಗಯ್ಯ ಹೇಳಿದರು.

ಹೋಬಳಿಯ ಓಬಯ್ಯನಹಟ್ಟಿ ಗ್ರಾಮದಲ್ಲಿ ಭಾನುವಾರ ಚಿತ್ರವು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದ ಜನತೆಗೆ ಯುಗಾದಿ ಹಬ್ಬದ ಪ್ರಯುಕ್ತ ಆಹಾರ ಸಾಮಗ್ರಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂದು ಗ್ರಾಮೀಣ ಪ್ರದೇಶದಲ್ಲಿ ಕೃಷಿ ಪದ್ಧತಿ, ಆಹಾರ, ಉಡುಪು, ಕಲೆ ಸಂಸ್ಕೃತಿ ಹಾಗೂ ಜನರ ಬದುಕಿನ ಮೇಲೆ ಜಾಗತಿಕರಣದ ಪ್ರಭಾವ ಹೆಚ್ಚಾಗಿದ್ದು, ಆರೋಗ್ಯಕರ ವಾತಾವರಣ ಕ್ಷೀಣಿಸಿದೆ. ಬಹುರಾಷ್ಟ್ರೀಯ ಕಂಪನಿಗಳ ಮಾರುಕಟ್ಟೆ ಕೇಂದ್ರಿತ ವ್ಯವಸ್ಥೆಯಿಂದ ದೇಸಿ ಆಹಾರ ಪದ್ಧತಿ ಬದಲಾಗಿದೆ’ ಎಂದರು.

ADVERTISEMENT

‘ಆಧುನಿಕ ಕೃಷಿ ಪದ್ಧತಿಯ ಹೆಸರಲ್ಲಿ ಸಾಂಪ್ರದಾಯಿಕ ಕೃಷಿ ನಶಿಸಿದೆ. ನಿತ್ಯ ನೂರಾರು ರೋಗಗಳಿಗೆ
ತುತ್ತಾಗುತ್ತಿದ್ದೇವೆ. ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ಕಡಿಮೆ ಮಾಡಬೇಕು. ಸಾವಯವ ಪದ್ಧತಿಯ ಮಹತ್ವವನ್ನು ಎಲ್ಲರೂ ಅರಿಯಬೇಕಿದೆ. ಇದೇ ವಿಷಯವನ್ನು ಕಥಾವಸ್ತುವಾಗಿಸಿ ‘ಕಾಸಿನಸರ’ ಚಿತ್ರವನ್ನು ನಿರ್ಮಿಸಲಾಗಿದೆ. ಯುಗಾದಿ ಪ್ರಯುಕ್ತ ಸಂಭ್ರಮಾಚರಣೆ ಮಾಡಲು ಪ್ರತಿಯೊಂದು ಕುಟುಂಬಕ್ಕೂ 850ಕ್ಕೂ ಹೆಚ್ಚು ಆಹಾರ ಸಾಮಗ್ರಿ ಕಿಟ್ ವಿತರಿಸಲಾಗಿದೆ’ ಎಂದರು.

‘ಎತ್ತಪ್ಪ ಜುಂಜಪ್ಪ ಸೇರಿದಂತೆ ಬುಡಕಟ್ಟು ದೈವಗಳ ಬಗ್ಗೆ ಸಿನಿಮಾಗಳ ಬಗ್ಗೆ ಯೋಜನೆ ಸಿದ್ಧವಾಗುತ್ತಿದೆ’ ಎಂದು ಹೇಳಿದರು.

ಗ್ರಾಮಸ್ಥರಾದ ದೊಡ್ಡಜ್ಜಯ್ಯ, ಕಾಕಸೂರಯ್ಯ, ಗ್ರಾ.ಪಂ.ಸದಸ್ಯ ಒ. ಓಬಯ್ಯ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಟೇಲ್ ಜಿ.ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮಿ, ಗೀತಮ್ಮ, ಮುಖಂಡರಾದ ಜಿ.ಎಸ್.ಪ್ರಭುಸ್ವಾಮಿ, ಪಿ.ಯು. ಸುನೀಲ್‌ಕುಮಾರ್, ವಿರೂಪಾಕ್ಷಪ್ಪ, ಮಹಾದೇವಣ್ಣ, ಬಸವರಾಜ್, ಹುಚ್ಚಮಲ್ಲಯ್ಯ, ಬಿ.ಗಿರೀಶ್, ಸೋಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.