ಚಿತ್ರದುರ್ಗ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್)ದಿಂದ ಭಾನುವಾರ ನಗರದಲ್ಲಿ ವಿಜಯದಶಮಿ ಸಂಘ ಶತಾಬ್ಧಿ ಪಥಸಂಚಲನ ಸಾಗಿತು.
ರಂಗಯ್ಯನ ಬಾಗಿಲು ಸಮೀಪದ ಸುರಕ್ಷಾ ಕಾಲೇಜು ಆವರಣದಿಂದ ಗಣ ವೇಷಧಾರಿಗಳು ಪಥ ಸಂಚಲನ ಆರಂಭಿಸಿದರು. ಮಾರ್ಗದುದ್ದಕ್ಕೂ ಜನರು ರಂಗೋಲಿ ಹಾಕಿ ಹೂವಿನ ಮಳೆಗೈದರು. ಖಾಕಿ ಬಣ್ಣದ ಪ್ಯಾಂಟ್, ಶುಭ್ರ ಬಿಳಿ ವರ್ಣದ ಅಂಗಿ, ತಲೆಗೆ ಕರಿ ಟೋಪಿ ಹಾಕಿ ಕೈಯಲ್ಲಿ ದಂಡವನ್ನು ಹಿಡಿದಿದ್ದ ಸ್ವಯಂಸೇವಕರು ಗಮನ ಸೆಳೆದರು. ಭಾರತ ಮಾತಾಕಿ ಜೈ , ಜೈ ಶ್ರೀರಾಮ್ ಎನ್ನುವ ಜಯಘೋಷ ಮೊಳಗಿದವು.
ಭಾರತಾಂಬೆ, ಒನಕೆ ಓಬವ್ವ, ಅಂಬೇಡ್ಕರ್ ಹಾಗೂ ಸೈನಿಕರ ವೇಷಭೂಷಣದಲ್ಲಿ ಮಕ್ಕಳು ಕಂಗೊಳಿಸಿದರು. ರಂಗಯ್ಯನ ಬಾಗಿಲು, ದೊಡ್ಡಪೇಟೆ, ಉಚ್ಚಂಗಿಯಲ್ಲಮ್ಮ ದೇವಾಲಯ, ತರಾಸು ಬೀದಿ ಮಾರ್ಗವಾಗಿ ಏಕನಾಥೇಶ್ವರಿ ಪಾದಗುಡಿ, ಕೋಟೆ ರಸ್ತೆ, ಕಾಮನಬಾವಿ ಬಡಾವಣೆ, ಕರುವಿನಕಟ್ಟೆ ವೃತ್ತ, ಜೋಗಿಮಟ್ಟಿ ರಸ್ತೆ ಮೂಲಕ ಪಥಸಂಚಲನ ಸಾಗಿ ಕಾಲೇಜು ಆವರಣದಲ್ಲಿ ಸಮಾಪ್ತಿಗೊಂಡಿತು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಸ್ವಯಂಸೇವಕರಾದ ಜಿತೇಂದ್ರ ಹುಲಿಕುಂಟೆ, ರುದ್ರೇಶ್, ನಾಗೇಶ್, ರಾಜಕುಮಾರ್, ರಾಮಕಿರಣ್, ಪ್ರಭಾಕರ್, ಶ್ರೀನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.