
ಹಿರಿಯೂರು: ‘ಸರ್ವಜ್ಞ ಕವಿ ತನ್ನ ವಚನಗಳ ಮೂಲಕ ಸಮಾಜದ ವ್ಯಾಧಿಗಳಿಗೆ ಚಿಕಿತ್ಸೆಯನ್ನು ನೀಡಿದ್ದಾನೆ’ ಎಂದು ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಆರ್. ಮಹೇಶ್ ತಿಳಿಸಿದರು.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ನಡೆದ ಸರ್ವಜ್ಞ ಜಯಂತ್ಯುತ್ಸವದಲ್ಲಿ ಮಾತನಾಡಿದರು.
‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎನ್ನುವ ಮೂಲಕ ಕೃಷಿಯ ಮಹತ್ವ ಸಾರಿದವನು ಸರ್ವಜ್ಞ. ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ ಎಂದು ಪ್ರಶ್ನಿಸುವ ಮೂಲಕ ಸಮಾಜದಲ್ಲಿರುವ ಜಾತಿ ಪದ್ಧತಿಯನ್ನು ವಿರೋಧಿಸಿದ್ದನು’ ಎಂದು ತಿಳಿಸಿದರು.
ಮುಟ್ಟಿನ ಕುರಿತು ಇಂದಿಗೂ ಸಮಾಜದಲ್ಲಿ ಹಲವಾರು ಮೂಢನಂಬಿಕೆಗಳು ಆಚರಣೆಯಲ್ಲಿವೆ. ಇಂತಹ ಮುಟ್ಟನ್ನು ಕುರಿತು ಸರ್ವಜ್ಞ ಆ ಕಾಲಕ್ಕೆ ‘ಇದು ಜೀವವನ್ನು ಸೃಷ್ಟಿಸುವ ಮೂಲ ಶಕ್ತಿ’ ಎಂದು ಹೇಳಿದ್ದ ಎಂದರು.
ತಹಶೀಲ್ದಾರ್ ಎಂ. ಸಿದ್ದೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧಿಕಾರಿ ನಯಾಜ್, ನಗರಠಾಣೆ ಎಎಸ್ಐ ಚಂದ್ರಪ್ಪ, ಜಲಮಂಡಳಿ ಇಲಾಖೆಯ ಚಂದ್ರಶೇಖರ್, ಪಶುಪಾಲನಾ ಇಲಾಖೆಯ ಸುರೇಶ್, ಕಂದಾಯ ಇಲಾಖೆಯ ಶ್ರೀನಿವಾಸರೆಡ್ಡಿ, ಕುಂಬಾರ ಜನಾಂಗದ ಮುಖಂಡರಾದ ಸಣ್ಣಭೀಮಣ್ಣ, ಎಚ್.ಎಂ. ರಂಗಸ್ವಾಮಿ, ಮಹೇಶ್ವರಪ್ಪ, ಮಂಜುನಾಥ್, ರಂಗಸ್ವಾಮಿ, ಕೃಷ್ಣ, ಚಂದ್ರಶೇಖರ್, ಕೆಂಚಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.