
ನಾಯಕನಹಟ್ಟಿ: ತಳಕು ಗ್ರಾಮದ ಬಸ್ ನಿಲ್ದಾಣದಲ್ಲಿ ಐದು ದಿನಗಳ ಹಿಂದೆ ನಡೆದಿದ್ದ ಸರಣಿ ಕಳವು ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಗುರುವಾರ ಆರೋಪಿಯನ್ನು ಬಂಧಿಸಿದ್ದಾರೆ. ಆತನಿಂದ ನಗದು ಮತ್ತು ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಪಂಡರಹಳ್ಳಿಯ ಕೂಲಿ ಕಾರ್ಮಿಕ ಎಚ್.ಬಾಲರಾಜ (39) ಬಂಧಿತ.
ಘಟನೆ ವಿವರ: ಬಾಲರಾಜ ಜ. 9ರ ರಾತ್ರಿ ಬಸ್ ನಿಲ್ದಾಣದಲ್ಲಿರುವ 7 ಮಳಿಗೆಗಳಿಗೆ ನುಗ್ಗಿ ಸಾಮಗ್ರಿ ಹಾಗೂ ಹಣ ಕಳವು ಮಾಡಿದ್ದ. ಈ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದವು.
ಜ. 10ರಂದು ಈ ಸಂಬಂಧ ತಳಕು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖಾ ತಂಡ ರಚಿಸಿಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತನಿಂದ ₹13,000 ನಗದು, ₹6,300 ಬೆಲೆಬಾಳುವ ಸಾಮಗ್ರಿಗಳನ್ನು ಮತ್ತು ಕಳವಿಗೆ ಬಳಸಿದ್ದ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ.
ಎಸ್ಪಿ ರಂಜಿತ್ಕುಮಾರ್ ಬಂಡಾರು, ಹೆಚ್ಚುವರಿ ಎಸ್ಪಿ ಆರ್.ಶಿವಕುಮಾರ್ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಸತ್ಯನಾರಾಯಣರಾವ್ ನಿರ್ದೇಶನದಲ್ಲಿ ಸಿಪಿಐ ಹನುಮಂತಪ್ಪ ಎಂ.ಶಿರೀಹಳ್ಳಿ, ಪಿಎಸ್ಐ ಕೆ.ಶಿಕುಮಾರ್, ಎಎಸ್ಐ ಮಂಜಣ್ಣ, ಸಿಬ್ಬಂದಿ ಧನಂಜಯ, ನಿತಿನ್ಕುಮಾರ್, ಜಾಕೀರ್ ಹುಸೇನ್, ಮಂಜುನಾಥ, ವೀರಭದ್ರಪ್ಪ, ಜಗದೀಶ್, ವೀರೇಶ್, ಮಾರೇಶ್, ನಾರಾಯಣ ಅವರು ಪ್ರಕರಣ ಬೇಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.