ADVERTISEMENT

ಸಿರಿಗೆರೆ | ಠಾಣೆ ಮೆಟ್ಟಿಲೇರಿದ ಯುವತಿ; ಹೆದರಿ ಮದುವೆಯಾದ ಶಿಕ್ಷಕ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 6:22 IST
Last Updated 1 ಮಾರ್ಚ್ 2026, 6:22 IST
<div class="paragraphs"><p>ಭರಮಸಾಗರದ ದೇವಾಲಯವೊಂದರಲ್ಲಿ ಹಾರ ಬದಲಿಸಿಕೊಂಡ ಕಾವ್ಯ ಮತ್ತು ಹರೀಶ್</p></div>

ಭರಮಸಾಗರದ ದೇವಾಲಯವೊಂದರಲ್ಲಿ ಹಾರ ಬದಲಿಸಿಕೊಂಡ ಕಾವ್ಯ ಮತ್ತು ಹರೀಶ್

   

ಸಿರಿಗೆರೆ: ಪ್ರೀತಿಸಿ, ಬಳಿಕ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದ ಶಿಕ್ಷಕ ಮದುವೆಯಾಗಲು ನಿರಾಕರಿಸಿದ ಕಾರಣ ಯುವತಿಯೊಬ್ಬರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ಈ ವಿಚಾರ ಗೊತ್ತಾದ ಕೂಡಲೇ ಶಿಕ್ಷಕ ವಿವಾಹವಾಗಲು ಮುಂದಾದ ಪ್ರಸಂಗ ಶುಕ್ರವಾರ ಭರಮಸಾಗರದಲ್ಲಿ ನಡೆದಿದೆ.  

ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಸರ್ಕಾರಿ ಶಾಲೆಯ ಶಿಕ್ಷಕ ಹರೀಶ್‌ ವಿರುದ್ಧ ಇಸಾಮುದ್ರ ಗೊಲ್ಲರಹಟ್ಟಿಯ ಕಾವ್ಯ ಅವರು ಭರಮಸಾಗರ ಪೊಲೀಸರಿಗೆ ದೂರು ನೀಡಿದ್ದರು. ಕಾವ್ಯ ಹಾಗೂ ತಣಿಗೇಹಳ್ಳಿಯ ಹರೀಶ್‌ ಸಂಬಂಧಿಕರಾಗಿದ್ದು, 8 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕುಟುಂಬಸ್ಥರ ಸಮ್ಮಖದಲ್ಲಿ ನಿಶ್ಚತಾರ್ಥ ಕೂಡ ನಡೆದಿತ್ತು.

ADVERTISEMENT

‘ವರದಕ್ಷಿಣೆಯ ಆಸೆಗೆ ಬಿದ್ದ ಹರೀಶ್‌, ಬೇರೊಬ್ಬ ಯುವತಿಯ ಜೊತೆ ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ’ ಎಂದು ಕಾವ್ಯ ಪೊಲೀಸರಿಗೆ ದೂರು ನೀಡಿದ್ದರು. 

ಹರೀಶ್‌ ಅವರನ್ನು ಠಾಣೆಗೆ ಕರೆಸಿದ್ದ ಪೊಲೀಸರು ಮಾತುಕತೆ ನಡೆಸಿ ಮದುವೆಗೆ ಒಪ್ಪಿಸಿದ್ದರು. ನಂತರ ಸ್ಥಳೀಯ ದೇವಾಲಯದಲ್ಲಿ ಇಬ್ಬರು ಹಾರ ಬದಲಿಸಿಕೊಂಡಿದ್ದರು. ಮದುವೆಯನ್ನು ನೋಂದಣಿ ಮಾಡಿಸುವಂತೆ ಕಾವ್ಯ ಒತ್ತಾಯಿಸಿದ ಕಾರಣ ಚಿತ್ರದುರ್ಗದ ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ಹೋದ ಹರೀಶ್‌, ಅಧಿಕಾರಿಗಳಿಗೆ ದಾಖಲೆಗಳನ್ನು ನೀಡಲು ಹಿಂದೇಟು ಹಾಕಿದ್ದರು. 

ಸಂಬಂಧಿಕರು ಸಿಟ್ಟಿಗೇಳುತ್ತಿದ್ದಂತೆ ಆಟೊದಲ್ಲಿ ಯುವತಿಯನ್ನು ಕೂರಿಸಿಕೊಂಡು, ನಾಳೆ ವಿವಾಹ ನೋಂದಣಿ ಮಾಡಿಸುವುದಾಗಿ ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.