ADVERTISEMENT

ಹೊಳಲ್ಕೆರೆ: ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ತಮ್ಮನನ್ನು ಕೊಲೆ ಮಾಡಿದ ಅಕ್ಕ ಬಂಧನ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 18:44 IST
Last Updated 27 ಜುಲೈ 2025, 18:44 IST
ನಿಶಾ
ನಿಶಾ   

ಹೊಳಲ್ಕೆರೆ (ಚಿತ್ರದುರ್ಗ): ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ತಮ್ಮನನ್ನು ಆಸ್ತಿ ಕಾರಣಕ್ಕೆ ಅಕ್ಕನೇ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. 

ತಾಲ್ಲೂಕಿನ ದುಮ್ಮಿ ಗ್ರಾಮದ ಜಿ.ಎನ್.ಮಲ್ಲಿಕಾರ್ಜುನ (23) ಮೃತ ಯುವಕ. ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ನಿಶಾಳನ್ನು ಪೊಲೀಸರು ಬಂಧಿಸಿದ್ದಾರೆ. ಈಕೆಯ ಪತಿ ಮಂಜುನಾಥ್ ತಲೆಮರೆಸಿಕೊಂಡಿದ್ದಾನೆ.  

ಈಚೆಗೆ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಮಲ್ಲಿಕಾರ್ಜುನ್‌ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ. ಈ ವೇಳೆ ರಕ್ತ ಪರೀಕ್ಷೆ ನಡೆಸಿದ್ದಾಗ ತೀವ್ರ ಸ್ವರೂಪದ ಕಾಯಿಲೆ ಇರುವುದು ಗೊತ್ತಾಗಿತ್ತು. ಈತನ ಕಾಲಿಗೆ ರಾಡ್ ಅಳವಡಿಸಿದ್ದರೂ ರಕ್ತಸ್ರಾವ ನಿಂತಿರಲಿಲ್ಲ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಸೂಚಿಸಿದ್ದರು. 

ADVERTISEMENT

‘ಓಮ್ನಿಯಲ್ಲಿ ಮಗನನ್ನು ಮಣಿಪಾಲ್‌ ಆಸ್ಪತ್ರೆಗೆ ಕರೆದೊಯ್ಯುವುದಾಗಿ ತಿಳಿಸಿದ್ದ ಮಗಳು ಹಾಗೂ ಅಳಿಯ ಮಂಜುನಾಥ್, ಮಾರ್ಗಮಧ್ಯೆಯೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಜುಲೈ 26ರಂದು ಊರಿಗೆ ಮೃತದೇಹ ತಂದು ಅನಾರೋಗ್ಯದಿಂದ ಮೃತಪಟ್ಟಿರುವುದಾಗಿ ಹೇಳಿದ್ದಾರೆ’ ಎಂದು ಯುವಕನ ತಂದೆ ಜಿ.ಬಿ.ನಾಗರಾಜ ದೂರಿನಲ್ಲಿ ತಿಳಿಸಿದ್ದಾರೆ. 

‘ಮಗನ ಕುತ್ತಿಗೆ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಈ ಬಗ್ಗೆ ಅನುಮಾನಗೊಂಡು ಮಗಳು ಹಾಗೂ ಅಳಿಯನನ್ನು ವಿಚಾರಿಸಿದ್ದೆ. ನನಗೆ ಗಂಭೀರ ಕಾಯಿಲೆ ಇರುವ ವಿಷಯ ಬಹಿರಂಗವಾದರೆ ಗ್ರಾಮದಲ್ಲಿ ಕುಟುಂಬದ ಮರ್ಯಾದೆ ಹೋಗುತ್ತದೆ. ನನ್ನಿಂದ ಇತರರಿಗೂ ರೋಗ ಹರಡುತ್ತದೆ. ಹೀಗಾಗಿ ನನ್ನನ್ನು ಸಾಯಿಸಿಬಿಡಿ ಎಂದು ಆತ ಕಿರುಚುತ್ತಿದ್ದ. ಅವನ ನರಳಾಟ ನೋಡಲಾರದೆ ಓಮ್ನಿಯಲ್ಲೇ ಉಸಿರುಗಟ್ಟಿಸಿ ಸಾಯಿಸಿದ್ದಾಗಿ ಮಗಳು ಹೇಳಿದ್ದಾಳೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ. 

‘ನಿಶಾ ಹಾಗೂ ದಾವಣಗೆರೆಯ ಶಾಮನೂರಿನ ನಿವಾಸಿ ಮಂಜುನಾಥ್‌ ಪರಸ್ಪರ ಪ್ರೀತಿಸುತ್ತಿದ್ದರು. ವರ್ಷದ ಹಿಂದೆ ಅಂತರ್ಜಾತಿ ವಿವಾಹ ಆಗಿದ್ದರು. ಆಕೆಯ ತಂದೆ ಆಟೊ ಮೊಬೈಲ್ ಅಂಗಡಿ ನಡೆಸುತ್ತಿದ್ದು, ಊರಿನಲ್ಲಿ ಸಾಕಷ್ಟು ಜಮೀನೂ ಇದೆ. ತಮ್ಮನನ್ನು ಸಾಯಿಸಿದರೆ ಎಲ್ಲಾ ಆಸ್ತಿ ತನಗೇ ಸಿಗುತ್ತದೆ ಎಂಬ ದುರಾಸೆಯಿಂದ ಆಕೆ ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.