ADVERTISEMENT

ವ್ಯಕ್ತಿಯ ತಲೆ ಕಡಿದು ಜಮೀನಿನಲ್ಲಿ ಹೂತಿಟ್ಟಿದ್ದ ಕಿರುತೆರೆ ಕಲಾವಿದ ಬಂಧನ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 4:50 IST
Last Updated 8 ಏಪ್ರಿಲ್ 2022, 4:50 IST
ಕೊಲೆ ಆರೋಪಿ, ಕಿರುತೆರೆ ಕಲಾವಿದ ಶ್ರೀನಿವಾಸ
ಕೊಲೆ ಆರೋಪಿ, ಕಿರುತೆರೆ ಕಲಾವಿದ ಶ್ರೀನಿವಾಸ   

ಧರ್ಮಪುರ (ಚಿತ್ರದುರ್ಗ): ಇಲ್ಲಿಗೆ ಸಮೀಪದ ಶ್ರಾವಣಗೆರೆಯಲ್ಲಿ ನೆರೆ ಮನೆಯ ನಿವಾಸಿಯ ತಲೆ ಕಡಿದು ಜಮೀನಿನಲ್ಲಿ ಹೂತಿಟ್ಟ ಆರೋಪದ ಮೇರೆಗೆ ಕಿರುತೆರೆಯ ಸಹಕಲಾವಿದನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಿರಿಯೂರು ತಾಲ್ಲೂಕಿನ ಶ್ರಾವಣಗೆರೆಯ ನಿವಾಸಿ ರಮೇಶ (45) ಕೊಲೆಯಾದ ವ್ಯಕ್ತಿ. ಕೊಲೆ ಆರೋಪದ ಮೇರೆಗೆ ಶ್ರೀನಿವಾಸ (40) ಎಂಬಾತನನ್ನು ಅಬ್ಬಿನಹೊಳೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ ಹಲವು ಧಾರಾವಾಹಿಗಳಲ್ಲಿ ಸಹಕಲಾವಿದನಾಗಿ ನಟಿಸಿದ್ದಾರೆಎಂದು ಪೊಲೀಸರು ತಿಳಿಸಿದ್ದಾರೆ.

ರಮೇಶ ಮತ್ತು ಶ್ರೀನಿವಾಸ ನೆರೆ ಮನೆಯ ನಿವಾಸಿಗಳು. ಹಲವು ವರ್ಷಗಳಿಂದ ಇಬ್ಬರೂ ಬೆಂಗಳೂರಿನಲ್ಲಿ ವಾಸವಾಗಿದ್ದರು. ಯುಗಾದಿ ಹಬ್ಬಕ್ಕೆ ಹಳ್ಳಿಗೆ ಮರಳಿದ್ದರು. ಕೊಲೆಗೆ ಹಳೆ ವೈಷಮ್ಯ, ವಾಮಾಚಾರ ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಬೇಸಿಗೆ ಸೆಕೆಯ ಕಾರಣಕ್ಕೆ ರಮೇಶ ಮನೆ ಬಾಗಿಲು ತೆರೆದು ಮಲಗಿದ್ದರು. ಮನೆ ಹೊರಗೆ ರಮೇಶ ಅವರ ತಂದೆಯೂ ನಿದ್ದೆಗೆ ಜಾರಿದ್ದರು. ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಮನೆಗೆ ನುಗ್ಗಿದ ಆರೋಪಿಯು ರಮೇಶ ಅವರ ತಲೆಯನ್ನು ಮಚ್ಚಿನಿಂದ ಕಡಿದಿದ್ದಾನೆ. ಯಾರಿಗೂ ಗೊತ್ತಾಗದಂತೆ ಜಮೀನಿಗೆ ಕೊಂಡೊದ್ದು ಹೂತು ಹಾಕಿದ್ದಾನೆ. ರಮೇಶ ಅವರ ತಂದೆಗೆ ನಸುಕಿನಲ್ಲಿ ಎಚ್ಚರವಾದಾಗ ಪ್ರಕರಣ ಬೆಳಕಿಗೆ ಬಂದಿದೆ.

ಡಿವೈಎಸ್ ಪಿ ರೋಷನ್ ಜಮೀರ್, ಸಿಪಿಐ ರಾಘವೇಂದ್ರ, ಪಿಎಸ್ಐ.ಪರಶುರಾಮ್ ಎಸ್.ಲಮಾಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.