
ಹಿರಿಯೂರು: ಸ್ವಚ್ಛತೆ ನಿರ್ವಹಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು ನಗರಸಭೆ ಜೊತೆ ಕೈಜೋಡಿಸಬೇಕು ಎಂದು ಪೌರಾಯುಕ್ತ ಎ. ವಾಸೀಂ ಮನವಿ ಮಾಡಿದರು.
ನಗರದ ಸಾರ್ವಜನಿಕ ಆಸ್ಪತ್ರೆ ಹಾಗೂ ನೀರು ಸರಬರಾಜು ಘಟಕದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ‘ನಮ್ಮ ಚಿತ್ತ ಸ್ವಚ್ಛತೆಯತ್ತ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ಶನಿವಾರ ನಗರದ ಒಂದೊಂದು ವಾರ್ಡ್ ಆಯ್ಕೆ ಮಾಡಿಕೊಂಡು ಚರಂಡಿ, ಉದ್ಯಾನವನಗಳನ್ನು ಸ್ವಚ್ಛ ಮಾಡಿಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಮನೆಗಳ ಕಸವನ್ನು ಖಾಲಿ ನಿವೇಶನಗಳಿಗೆ, ಉದ್ಯಾನಗಳಿಗೆ ತಂದು ಸುರಿಯಬಾರದು. ಕಸ ವಿಂಗಡಿಸಿ ಕಸದ ವಾಹನಕ್ಕೆ ಕೊಟ್ಟಲ್ಲಿ ಕಸದ ವಿಲೇವಾರಿಯನ್ನು ಸುಲಭವಾಗಿ ಮಾಡಬಹುದು. ವರ್ತಕರು ಪ್ಲಾಸ್ಟಿಕ್ ಮಾರಾಟ ಮಾಡಬಾರದು. ಗ್ರಾಹಕರು ಅಂಗಡಿಗಳಿಗೆ ಹೋಗುವಾಗ ಮನೆಯಿಂದ ಬಟ್ಟೆಯ ಚೀಲ ಒಯ್ದರೆ ಉತ್ತಮ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಕರಾದ ಸುನಿಲ್ ಕುಮಾರ್, ವೈ.ಎಸ್. ಸಂಧ್ಯಾ, ಅಶೋಕ್ ಕುಮಾರ್, ಮಹಲಿಂಗರಾಜು, ನಯಾಜ್ ಷರೀಫ್, ಪೌರನೌಕರರ ಸಂಘದ ಅಧ್ಯಕ್ಷ ಬಿ. ಹನುಮಂತರಾಜು ಹಾಗೂ ಪೌರಕಾರ್ಮಿಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.