ಚಿತ್ರದುರ್ಗ: ಕಾದಂಬರಿಕಾರ ಬಿ.ಎಲ್.ವೇಣು ಅವರಿಗೆ ಮೂರನೇ ಅನಾಮಧೇಯ ಪತ್ರ ಬಂದಿದ್ದು, ಸಾವರ್ಕರ್ ಬಗ್ಗೆ ನೀಡಿದ ಹೇಳಿಕೆಗೆ ಇನ್ನೂ ಕ್ಷಮೆ ಕೇಳಿಲ್ಲ ಎಂದು ಬೆದರಿಕೆ ಹಾಕಲಾಗಿದೆ.
ಕೈಬರಹದ ಪತ್ರದಲ್ಲಿ ‘ಸಹಿಷ್ಣು ಹಿಂದೂ’ ಎಂದಷ್ಟೇ ಉಲ್ಲೇಖಿಸಲಾಗಿದೆ. ‘ಹಿಂದೂಗಳಿಗೆ ನೀತಿಪಾಠ ಹೇಳುವ ಅಗತ್ಯವಿಲ್ಲ. ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಲು ಹೊರಟಿರುವ ಎಸ್ಡಿಪಿಐ, ಪಿಎಫ್ಐನಂತಹ ಸಂಘಟನೆಗಳಿಗೆ ಬುದ್ಧಿ ಹೇಳಿ’ ಎಂದು ಪತ್ರದಲ್ಲಿ ಸೂಚಿಸಲಾಗಿದೆ.
‘ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರಿಸದಂತೆ ಸರ್ಕಾರಕ್ಕೆ ಪತ್ರ ಬರೆದ 61 ಕಿಡಿಗೇಡಿ ಸಾಹಿತಿಗಳು ನೀವು. ಸಂವಿಧಾನ ರಕ್ಷಣೆ ಹಾಗೂ ಬಹುತ್ವದ ಹೆಸರಿನಲ್ಲಿ ನಕಲಿ ಹೋರಾಟ ನಡೆಸುತ್ತಿದ್ದೀರಿ. ಸಂವಿಧಾನ, ರಾಷ್ಟ್ರಧ್ವಜ ಹಾಗೂ ಅಂಬೇಡ್ಕರ್ ಅವರನ್ನು ಗುರಾಣಿಯಂತೆ ಬಳಸಿಕೊಳ್ಳುವ ಇಸ್ಲಾಂಮಿಕ್ ಭಯೋತ್ಪಾದಕರ ಸಂಚನ್ನು ಬಿಹಾರದ ಪೊಲೀಸರು ಬಯಲುಗೊಳಿಸಿದ್ದಾರೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
***
ಇಂತಹ ಪತ್ರ, ಪ್ರಸಂಗಗಳಿಗೆ ನಾನೇನು ವಿಚಲಿತನಾಗಿಲ್ಲ. ಅಂಗರಕ್ಷರನ್ನು ನೇಮಿಸಲು ಮುಂದಾದ ಪೊಲೀಸರ ಪ್ರಸ್ತಾವವನ್ನು ತಿರಸ್ಕರಿಸಿದ್ದೇನೆ. ಪತ್ರದ ಬಗ್ಗೆ ಪೊಲೀಸರ ಗಮನಕ್ಕೆ ತಂದಿದ್ದೇನೆ.
– ಬಿ.ಎಲ್.ವೇಣು,ಕಾದಂಬರಿಕಾರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.