ADVERTISEMENT

‘ಬದುಕಿನ ಮೌಲ್ಯ ಸಾರುವ ವಚನ ಸಾಹಿತ್ಯ’

​ಪ್ರಜಾವಾಣಿ ವಾರ್ತೆ
Published 22 ಮೇ 2022, 2:33 IST
Last Updated 22 ಮೇ 2022, 2:33 IST
ಚಿತ್ರದುರ್ಗದ ತರಳಬಾಳು ಶಾಲಾ ಸಂಕೀರ್ಣದಲ್ಲಿ ಬೃಹನ್ಮಠದ ಅಣ್ಣನ ಬಳಗದ ವತಿಯಿಂದ ಏರ್ಪಡಿಸಿದ್ದ ವಿಚಾರಗೋಷ್ಠಿಯಲ್ಲಿ ಡಾ. ಬಿ.ರಾಜಶೇಖರಪ್ಪ ಮಾತನಾಡಿದರು. ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್‍.ಬಿ. ರಂಗನಾಥ್, ಮರುಳಸಿದ್ದಯ್ಯ, ರಂಗಣ್ಣ ಇದ್ದರು.
ಚಿತ್ರದುರ್ಗದ ತರಳಬಾಳು ಶಾಲಾ ಸಂಕೀರ್ಣದಲ್ಲಿ ಬೃಹನ್ಮಠದ ಅಣ್ಣನ ಬಳಗದ ವತಿಯಿಂದ ಏರ್ಪಡಿಸಿದ್ದ ವಿಚಾರಗೋಷ್ಠಿಯಲ್ಲಿ ಡಾ. ಬಿ.ರಾಜಶೇಖರಪ್ಪ ಮಾತನಾಡಿದರು. ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್‍.ಬಿ. ರಂಗನಾಥ್, ಮರುಳಸಿದ್ದಯ್ಯ, ರಂಗಣ್ಣ ಇದ್ದರು.   

ಸಿರಿಗೆರೆ: 12ನೇಶತಮಾನದಲ್ಲಿ ಸಾಮಾಜಿಕ ಸಮಾನತೆ, ಶಿಕ್ಷಣ, ಧಾರ್ಮಿಕ ನಂಬಿಕೆ ಹಾಗೂ ಇತರ ವಿಚಾರಗಳ ಕುರಿತು ಶರಣರ ಅವಧಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳಾದವು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತ ಚರ್ಚೆಗೆ ಅವಕಾಶ ಕಲ್ಪಿಸಿದ ಕೀರ್ತಿ ಬಸವಣ್ಣ ಹಾಗೂ ಅಲ್ಲಮಪ್ರಭು ಅವರಿಗೆ ಸಲ್ಲುತ್ತದೆ ಎಂದು ಸಂಶೋಧಕ ಡಾ. ರಾಜಶೇಖರಪ್ಪ ಅಭಿಪ್ರಾಯಪಟ್ಟರು.

ಚಿತ್ರದುರ್ಗದ ತರಳಬಾಳು ಶಾಲಾ ಸಂಕೀರ್ಣದಲ್ಲಿ ಬೃಹನ್ಮಠದ ಅಣ್ಣನ ಬಳಗದ ವತಿಯಿಂದ ಶನಿವಾರ ಏರ್ಪಡಿಸಿದ್ದ ವಿಚಾರಗೋಷ್ಠಿಯಲ್ಲಿ ವಚನ ಸಾಹಿತ್ಯದ ಕುರಿತು ಅವರು ಉಪನ್ಯಾಸ ನೀಡಿದರು.

‘ಭಾರತೀಯ ಸಂಸ್ಕೃತಿಯ ಹಾಗೂ ಮಾನವೀಯ ಮೌಲ್ಯಗಳನ್ನು ಸಾಹಿತ್ಯದ ಮೂಲಕ ಜಗತ್ತಿಗೆ ಪರಿಚಯಿಸಬೇಕಿದೆ. ಈ ನಿಟ್ಟಿನಲ್ಲಿ ಬದುಕಿನ ಮೌಲ್ಯವನ್ನು ಉನ್ನತೀಕರಿಸುವ ವಚನ ಸಾಹಿತ್ಯವನ್ನು ಅಂಗೈಯಲ್ಲಿ ದೊರಕುವಂತೆ ಮಾಡಿದ ಕೀರ್ತಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಸಲ್ಲುತ್ತದೆ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್‍.ಬಿ. ರಂಗನಾಥ್, ‘ಇಂದಿನ ರಾಜಕೀಯ, ಸಾಮಾಜಿಕ, ಧಾರ್ಮಿಕ ವಲಯದ ಪ್ರಕ್ಷುಬ್ಧ ವಾತಾವರಣದಲ್ಲಿ ವಚನ ಸಾಹಿತ್ಯವು ಸಂಜೀವಿನಿಯಾಗಿದೆ. ಬದುಕಿನ ಎಲ್ಲಾ ರಂಗಗಳ ಸಮಸ್ಯೆಗಳಿಗೆ ವಚನಸಾಹಿತ್ಯದಲ್ಲಿ ಪರಿಹಾರವಿದೆ’ ಎಂದು ಹೇಳಿದರು.

ಅಧ್ಯಾಪಕ ನಾಗರಾಜ ಸಿರಿಗೆರೆ ಮಾತನಾಡಿದರು.

ವಿಜ್ಞಾನ ಶಿಕ್ಷಕ ಎಂ.ರಂಗಣ್ಣ ಶಿವಶರಣ ವಚನ ಸಂಪುಟ ತಂತ್ರಜ್ಞಾನದ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಶಶಿಕಲಾ ಸಂಗಡಿಗರು ವಚನಗೀತೆಗಳನ್ನು ಹಾಡಿದರು. ಮುಖ್ಯಶಿಕ್ಷಕ ಎಂ.ಆರ್.ರಾಥೋಡ್ ಸ್ವಾಗತಿಸಿದರು. ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.ಮರುಳಸಿದ್ಧಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯಶಿಕ್ಷಕಿ ವಿಜಯಲಕ್ಷ್ಮಿ ವಂದಿಸಿದರು. ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.