ADVERTISEMENT

ಹೊಸದುರ್ಗ: ಆಧಾರ್‌ ನೋಂದಣಿಗೆ ನೂಕುನುಗ್ಗಲು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 4:13 IST
Last Updated 13 ಆಗಸ್ಟ್ 2021, 4:13 IST
ಹೊಸದುರ್ಗ ತಾಲ್ಲೂಕು ಕಚೇರಿ ಕೇಂದ್ರದಲ್ಲಿ ಆಧಾರ್‌ ನೋಂದಣಿ ಹಾಗೂ ತಿದ್ದುಪಡಿಗೆ ಗುರುವಾರ ಸರತಿಯಲ್ಲಿ ನಿಂತಿರುವ ಜನರು
ಹೊಸದುರ್ಗ ತಾಲ್ಲೂಕು ಕಚೇರಿ ಕೇಂದ್ರದಲ್ಲಿ ಆಧಾರ್‌ ನೋಂದಣಿ ಹಾಗೂ ತಿದ್ದುಪಡಿಗೆ ಗುರುವಾರ ಸರತಿಯಲ್ಲಿ ನಿಂತಿರುವ ಜನರು   

ಹೊಸದುರ್ಗ: ಇಲ್ಲಿನ ತಾಲ್ಲೂಕು ಕಚೇರಿ ಆಧಾರ್‌ ನೋಂದಣಿ ಕೇಂದ್ರದಲ್ಲಿ ಗುರುವಾರ ನೂಕುನುಗ್ಗಲು ಉಂಟಾಗಿದ್ದು,ತಾಲ್ಲೂಕು ಆಡಳಿತದ ಅವ್ಯವಸ್ಥೆಗೆ ಜನರು ಆಕ್ರೋಶ ವ್ಯಕ್ತಪಡಿಸಿದರು.

ಪಡಿತರ ದಾಸ್ತಾನು ಪಡೆಯಲು, ಶಾಲೆಗೆ ಮಕ್ಕಳನ್ನು ಸೇರಿಸಲು, ಸರ್ಕಾರದ ಇನ್ನಿತರ ಯಾವುದೇ ಯೋಜನೆ ಸೌಲಭ್ಯ ಪಡೆಯಬೇಕಾದರೆ ಆಧಾರ್‌ ಕಾರ್ಡ್‌ ಕಡ್ಡಾಯ ಮಾಡಲಾಗಿದೆ. ಆಧಾರ್‌ ಸಂಖ್ಯೆಗೆ ಮೊಬೈಲ್‌ ಸಂಖ್ಯೆಯನ್ನು ಜೋಡಣೆ ತಪ್ಪದೇ ಮಾಡಿಸಬೇಕಿದೆ. ಆಧಾರ್‌ನಲ್ಲಿ ಏನಾದರೂ ತಪ್ಪಗಳಿದ್ದರೆ ಸರಿಪಡಿಸಿಕೊಳ್ಳಬೇಕಿದೆ. ಇದರಿಂದಾಗಿ ಆಧಾರ್‌ ನೋಂದಣಿ ಹಾಗೂ ತಿದ್ದುಪಡಿಗಾಗಿ ಕಸಬಾ, ಮಾಡದಕೆರೆ ಹೋಬಳಿಯ ನೂರಾರು ಜನರು ಪ್ರತಿನಿತ್ಯವೂ ಬೆಳಿಗ್ಗೆಯೇ ತಾಲ್ಲೂಕು ಕಚೇರಿಗೆ ಬರುತ್ತಾರೆ. ಒಂದೇ ಕಂಪ್ಯೂಟರ್‌ನಲ್ಲಿ ಆಧಾರ್‌ ಅರ್ಜಿ, ತಿದ್ದುಪಡಿ ಮಾಡಲಾಗುತ್ತಿದೆ. ಇದರಿಂದ ಆಧಾರ್‌ಗಾಗಿ ಇಡೀ ದಿನ ಕಾದು ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಕರಿಯಪ್ಪ ದೂರಿದರು.

ಈ ನಡುವೆ ವಿದ್ಯುತ್‌ ಅಭಾವ ಹಾಗೂ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಸಮಸ್ಯೆಯಿಂದ ಆಧಾರ್‌ ನೋಂದಣಿ ಮಾಡಿಸಲು ಸಾಧ್ಯವಾಗುತ್ತಿಲ್ಲ. ಬೆಳಿಗ್ಗೆಯಿಂದ ಕಾದು ಮನೆಗೆ ಹೋಗಬೇಕಾಗುತ್ತದೆ. ಬೆಳಿಗ್ಗೆ ಊಟ ಬಿಟ್ಟು ಆಧಾರ್‌ ತಿದ್ದುಪಡಿಗೆ ಕಾದರೂ ಸಂಜೆ 5.30ಕ್ಕೆ ಕಚೇರಿ ಸಿಬ್ಬಂದಿ ಬಾಗಿಲು ಬಂದ್‌ ಮಾಡುತ್ತಾರೆ. ದಿನವಿಡೀ ಕಾಯುವುದೇ ಆಗಿದೆ ಎಂದು ಗೃಹಿಣಿ ಸರೋಜಮ್ಮ ಬೇಸರಿಸಿದರು.

ADVERTISEMENT

ತಾಲ್ಲೂಕಿನ 33 ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಆಧಾರ್‌ ತಿದ್ದುಪಡಿ ಹಾಗೂ ನೋಂದಣಿ ಮಾಡಬೇಕು. ತಾಲ್ಲೂಕು ಕಚೇರಿಯಲ್ಲಿಯೂ ಕನಿಷ್ಠ 3 ಕೌಂಟರ್‌ ತೆರೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.