ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನಲ್ಲಿ ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದ ಉತ್ತರಪ್ರದೇಶದ 20 ವಲಸೆ ಕಾರ್ಮಿಕರಿಗೆ ಕೋವಿಡ್–19 ಇರುವುದು ಮಂಗಳವಾರ ದೃಢಪಟ್ಟಿದೆ. ಇವರು ಪಿ-1630 ರೋಗಿಯ ಪ್ರಾಥಮಿಕ ಸಂಪರ್ಕಿತರು.
ಉತ್ತರಪ್ರದೇಶದ ಗೋರಕ್ಪುರ ಜಿಲ್ಲೆಯ 58 ಕಾರ್ಮಿಕರು ತಮಿಳುನಾಡಿನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಮೇ 14ರಂದು ಚೆನ್ನೈನಿಂದ ಸರಕು ಸಾಗಣೆ ವಾಹನದಲ್ಲಿ ಉತ್ತರಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಹೊಸೂರು, ಚಿಕ್ಕಬಳ್ಳಾಪುರ, ಪಾವಗಡ ಮೂಲಕ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಗಡಿ ತಲುಪಿದ್ದರು. ಅನುಮತಿ ಪಡೆಯದೇ ಪ್ರಯಾಣ ಬೆಳೆಸುತ್ತಿದ್ದ ಇವರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದು ಕ್ವಾರಂಟೈನ್ಗೆ ಒಳಪಡಿಸಿದ್ದರು.
ಹೀಗೆ ಕ್ವಾರಂಟೈನ್ನಲ್ಲಿದ್ದ 25 ವರ್ಷದ ವಾಹನ ಚಾಲಕನಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಇವರ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಇವರಿಗೆ ಸೋಂಕು ತಗುಲಿದ್ದು ಮೇ 22ರಂದು ಖಚಿತವಾಗಿತ್ತು. ಈ ರೋಗಿಯ ಪ್ರಾಥಮಿಕ ಸಂಪರ್ಕಿದಲ್ಲಿದ್ದ 58 ಕಾರ್ಮಿಕರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 20 ಜನರಿಗೆ ಕೋವಿಡ್ ಇರುವುದು ದೃಢಪಟ್ಟಿದೆ.
‘ಕ್ವಾರಂಟೈನ್ನಲ್ಲಿದ್ದ ವಲಸೆ ಕಾರ್ಮಿಕರಿಗೆ ಕೋವಿಡ್–19 ಅಂಟಿರುವುದು ಖಚಿತವಾಗಿದೆ. ಇವರು ಚಿತ್ರದುರ್ಗ ಜಿಲ್ಲೆಯವರಲ್ಲ. ಅನುಮತಿ ಪಡೆಯದೇ ಪ್ರಯಾಣ ಮಾಡುತ್ತಿದ್ದವರನ್ನು ವಶಕ್ಕೆ ಪಡೆದು ಕ್ವಾರಂಟೈನ್ ಮಾಡಲಾಗಿತ್ತು. ಇದರಿಂದ ಜಿಲ್ಲೆಯ ಜನರು ಆತಂಕಪಡುವ ಅಗತ್ಯವಿಲ್ಲ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಫಾಲಾಕ್ಷ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.