ADVERTISEMENT

ನಾಯಕನಹಟ್ಟಿ | ಅನಧಿಕೃತ ಸಾಗುವಳಿ; ಮೇಲಾಧಿಕಾರಿಗಳಿಗೆ ವರದಿ

1501.05ಎಕರೆಯ ಅಮೃತ ಮಹಲ್ ಕಾವಲಿಗೆ ಅಧಿಕಾರಿಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 5:40 IST
Last Updated 5 ಫೆಬ್ರುವರಿ 2026, 5:40 IST
ನಾಯಕನಹಟ್ಟಿ ಹೋಬಳಿಯ ರೇಖಲಗೆರೆ ಅಮೃತ್‌ಮಹಲ್ ಕಾವಲು ಪ್ರದೇಶಕ್ಕೆ ಬುಧವಾರ ಗಜೇಂದ್ರಕುಮಾರ್ ಮತ್ತು ಅಧಿಕಾರಿಗಳ ತಂಡ ಭೇಟಿನೀಡಿ ಪರಿಶೀಲಿಸಿದರು
ನಾಯಕನಹಟ್ಟಿ ಹೋಬಳಿಯ ರೇಖಲಗೆರೆ ಅಮೃತ್‌ಮಹಲ್ ಕಾವಲು ಪ್ರದೇಶಕ್ಕೆ ಬುಧವಾರ ಗಜೇಂದ್ರಕುಮಾರ್ ಮತ್ತು ಅಧಿಕಾರಿಗಳ ತಂಡ ಭೇಟಿನೀಡಿ ಪರಿಶೀಲಿಸಿದರು   

ನಾಯಕನಹಟ್ಟಿ: ರೇಖಲಗೆರೆ ಅಮೃತ್ ಮಹಲ್ ಕಾವಲಿನಲ್ಲಿ ಕೆಲ ವರ್ಷಗಳಿಂದ ಅನಧಿಕೃತವಾಗಿ ಸಾಗುವಳಿಯಾಗಿರುವ ಬಗ್ಗೆ ಮೇಲಾಧಿಕಾರಿಗಳಿಗೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ಚಳ್ಳಕೆರೆ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ  ಶ್ರೀನಿವಾಸ್ ಬಾಬು ಹೇಳಿದರು.

ಹೋಬಳಿಯ ರೇಖಲಗೆರೆ ಅಮೃತ ಮಹಲ್ ಕಾವಲು ಪ್ರದೇಶಕ್ಕೆ ಬುಧವಾರ ಚಿಕ್ಕೆಮ್ಮಿಗನೂರು ಅಮೃತ್ ಮಹಲ್ ಸಂವರ್ಧನಾ ಕೇಂದ್ರದ ಆಡಳಿತಾಧಿಕಾರಿ ಗಜೇಂದ್ರಕುಮಾರ್ ಮತ್ತು ಅಧಿಕಾರಿಗಳ ತಂಡ ಭೇಟಿ ನೀಡಿ ಮಾತನಾಡಿದರು.

ರೇಖಲಗೆರೆ ರಿ.ಸ.ನಂ 1ರಲ್ಲಿರುವ ಅಂದಾಜು 1501.05 ಎಕರೆ ಪ್ರದೇಶವು ಅಮೃತ್ ಮಹಲ್ ಕಾವಲು ಎಂದು ಕಾಯ್ದಿರಿಸಲಾಗಿದೆ. ಈ ಪ್ರದೇಶವನ್ನು ಯಾರೂ ಪರಭಾರೆ ಅಥವಾ ಗುತ್ತಿಗೆ ನೀಡುವಂತಿಲ್ಲ ಎಂದು  ಹೈಕೋರ್ಟ್ ಆದೇಶವಿದೆ. ಆದರೆ, 2021ರ ಜೂನ್ 17ರಲ್ಲಿ ಪಶುಸಂಗೋಪನಾ ಮತ್ತು ಮೀನುಗಾರಿಕಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಈ ಪ್ರದೇಶದ ಹಕ್ಕು ಮತ್ತು ಮಾಲಿಕತ್ವವನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸುಪರ್ದಿಯಲ್ಲಿ ಉಳಿಸಿಕೊಂಡಿವೆ.

ADVERTISEMENT

ಸೇವಾ ಇಲಾಖೆ, ಮೈಸೂರು, ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಅಜ್ಜಂಪುರ, ಅಮೃತ್‌ಮಹಲ್ ತಳಿ ಸಂವರ್ಧನಾ ಉಪಕೇಂದ್ರ ರಾಮಗಿರಿ ಇವರ ಉಸ್ತುವಾರಿಯಲ್ಲಿ ಕೋಟಿವೃಕ್ಷ ಸಂವರ್ಧನಾ ಅಭಿಯಾನದ ಹೆಸರಲ್ಲಿ ವೃಕ್ಷ ಕೋಟಿ ಸಸಿಗಳನ್ನು ನೆಟ್ಟು ಅವುಗಳ ಸಂರಕ್ಷಣೆಗೆ ಸ್ಥಳೀಯ ಟ್ರಸ್ಟ್ ಹೆಸರಿಗೆ 30 ವರ್ಷಗಳ ಅವಧಿಗೆ 6 ಷರತ್ತುಗಳನ್ನು ವಿಧಿಸಿ ನೀಡಿದೆ ಎಂದು ಮಾಹಿತಿ ನೀಡಿದರು

ಟ್ರಸ್ಟ್ ಈಗಾಗಲೇ ಅಮೃತ್‌ಮಹಲ್ ಕಾವಲಿನಲ್ಲಿ ಬೆಳೆದಿರುವ ಕುರುಚಲು ಗಿಡಗಳನ್ನು ತೆರವುಗೊಳಿಸಿ ಷರತ್ತನ್ನು ಉಲ್ಲಂಘಿಸಿದೆ. ಜೊತೆಗೆ ಜೈವಿಕ ಇಂಧನ ಹಾಗೂ ಕೆಲವು ಔಷದೀಯ ಗುಣಗಳುಳ್ಳ ಸಸ್ಯಗಳನ್ನು ನಾಟಿಮಾಡಿದ್ದಾರೆ. ಟ್ರಸ್ಟ್‌ನ ಪದಾಧಿಕಾರಿಗಳು ಅಡಿಕೆ ಮರಗಳು, ಗೋಶಾಲೆ ನಿರ್ಮಿಸಿಕೊಂಡಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಸಮಗ್ರ ವರದಿ ನೀಡಲಾಗುವುದು ಎಂದರು.

‘ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಲಾಗಿದೆ ಎಂದು ಚಿಕ್ಕೆಮ್ಮಿಗನೂರು ಅಮೃತ್ ಮಹಲ್ ಸಂವರ್ಧನಾ ಕೇಂದ್ರದ ಆಡಳಿತಾಧಿಕಾರಿ ಗಜೇಂದ್ರಕುಮಾರ್ ತಿಳಿಸಿದರು.

ಹಿರಿಯ ಪಶುವೈದ್ಯ ಪರೀಕ್ಷಕರಾದ ತಿಪ್ಪೇಶಪ್ಪ, ಮುಖ್ಯ ಪಶುವೈದ್ಯಾಧಿಕಾರಿ ವಿಜಯಕುಮಾರ್, ಗ್ರಾಮ ಆಡಳಿತಾಧಿಕಾರಿ ಜಗದೀಶ್, ಕಾವಲುಗಾರ ಮಲ್ಲಯ್ಯ, ಗ್ರಾಮಸ್ಥರಾದ ಚಿನಯ್ಯ, ಅಶೋಕ, ಜಿ.ಎಂ. ತಿಪ್ಪೇಸ್ವಾಮಿ, ಲೋಕೇಶ್, ತಿಪ್ಪಯ್ಯ, ಗುಂಡಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.