ಹೊಸದುರ್ಗ: ಇಂದು ರಾಮನಿಗೆ ಮಂದಿರ ಕಟ್ಟಲಾಗಿದೆ. ಆದರೆ, ರಾಮನನ್ನೇ ಪರಿಚಯಿಸಿಕೊಟ್ಟ ವಾಲ್ಮೀಕಿ ಮಹರ್ಷಿಗಳನ್ನು ತಿರಸ್ಕಾರ ಮಾಡುವುದು ಸರಿಯಲ್ಲ. ಶೀಘ್ರವೇ ಅಯೋಧ್ಯೆಯಲ್ಲಿ ವಾಲ್ಮೀಕಿ ಮಂದಿರ ನಿರ್ಮಾಣವಾಗಬೇಕೆಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಒತ್ತಾಯಿಸಿದರು.
ತಾಲ್ಲೂಕು ವಾಲ್ಮೀಕಿ ನಾಯಕ ನೌಕರರ ಸಂಘ, ನಾಯಕ ಸಮಾಜ ಮತ್ತು ವಾಲ್ಮೀಕಿ ಯುವಸೇನಾ ಪಡೆ ವತಿಯಿಂದ ಭಾನುವಾರ ನಡೆದ ವಾಲ್ಮೀಕಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ರಾಜಕೀಯ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ನಮ್ಮಿಂದ ಮತ ಹಾಕಿಸಿಕೊಂಡು ಅಧಿಕಾರಕ್ಕೆ ಬಂದ ತಕ್ಷಣ ಮರೆತು ಬಿಡುತ್ತಾರೆ. ಹಾಗಾಗಿ ನಾವು ಜಾಗೃತರಾಗಿ, ರಾಜಕೀಯವಾಗಿ ಸಂಘಟನೆಗೊಳ್ಳುವ ಅನಿವಾರ್ಯತೆ ಇದೆ’ ಎಂದು ಸಲಹೆ ನೀಡಿದರು.
ಶಾಸಕ ಬಿ.ಜಿ. ಗೋವಿಂದಪ್ಪ ಮಾತನಾಡಿ, ಪೋಷಕರು ಮಕ್ಕಳಿಗೆ ಪ್ರೇರಕ ಶಕ್ತಿಯಾಗಿರಬೇಕು. ಶಿಕ್ಷಣಕ್ಕೆ ಅನುಕೂಲಕರವಾಗುವಂತಹ ವಾತಾವರಣವನ್ನು ನಿರ್ಮಾಣ ಮಾಡಿ. ಸಮುದಾಯಕ್ಕೆ ತನ್ನದೇ ಆದ ಇತಿಹಾಸವಿದ್ದು, ಆದರ್ಶ ಪುರುಷರನ್ನು ಪ್ರೇರಣೆಯಾಗಿ ತೆಗೆದುಕೊಂಡು ಸಾಧಕರಾಗಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಹಶೀಲ್ದಾರ್ ತಿರುಪತಿ ಪಾಟೀಲ್, ಸಹಾಯಕ ಪ್ರಾಧ್ಯಾಪಕ ಷಣ್ಮುಖಪ್ಪ ಉಪನ್ಯಾಸ ನೀಡಿದರು. ವಾಲ್ಮೀಕಿ ನಾಯಕ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಜಯಪ್ರಕಾಶ್, ಕಾರ್ಯದರ್ಶಿ ಮೈಲಾರಪ್ಪ, ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷ ಎನ್. ತಿಪ್ಪೇಸ್ವಾಮಿ, ಕಾರ್ಯದರ್ಶಿ ರಂಗನಾಥ, ಉಪಾಧ್ಯಕ್ಷ ಶೇಖರಪ್ಪ, ಗೌರವ್ಯಾಧ್ಯಕ್ಷ ನಾಗರಾಜ್, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀನಿವಾಸ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಶಾಂತಪ್ಪ, ಮುಖಂಡರಾದ ವಿನಯ್, ಆಂಜಿನಪ್ಪ, ನಾಗರಾಜ್, ತಿಪ್ಪೇಸ್ವಾಮಿ, ತುಂಬಿನಕೆರೆ ಬಸವರಾಜ್, ಅರುಣ್ ಗಂಗಾಧರಪ್ಪ , ಸಮಾಜದ ಮುಖಂಡರು, ವಿದ್ಯಾರ್ಥಿಗಳು ಸೇರಿದಂತೆ ಹಲವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.