ADVERTISEMENT

ಹಿರಿಯೂರು | ವಾಣಿವಿಲಾಸ ನಾಲೆಗಳ ನೀರಿಗೆ ಕನ್ನ; ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 6:51 IST
Last Updated 20 ಜುಲೈ 2025, 6:51 IST
<div class="paragraphs"><p>ಹಿರಿಯೂರು ತಾಲ್ಲೂಕಿನಲ್ಲಿ ಹಾದು ಹೋಗಿರುವ ವಾಣಿವಿಲಾಸ ಬಲನಾಲೆಗೆ ನಾಲೆಯ ಪಕ್ಕದಲ್ಲಿ ಜಮೀನು ಹೊಂದಿರುವವರು ದೊಡ್ಡ ಗಾತ್ರದ ಪೈಪ್ ಮೂಲಕ ನೀರು ಪಡೆಯುತ್ತಿರುವುದು&nbsp;</p></div>

ಹಿರಿಯೂರು ತಾಲ್ಲೂಕಿನಲ್ಲಿ ಹಾದು ಹೋಗಿರುವ ವಾಣಿವಿಲಾಸ ಬಲನಾಲೆಗೆ ನಾಲೆಯ ಪಕ್ಕದಲ್ಲಿ ಜಮೀನು ಹೊಂದಿರುವವರು ದೊಡ್ಡ ಗಾತ್ರದ ಪೈಪ್ ಮೂಲಕ ನೀರು ಪಡೆಯುತ್ತಿರುವುದು 

   

ಹಿರಿಯೂರು: ‘ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಎಡ ಮತ್ತು ಬಲನಾಲೆಗಳ ಆಸುಪಾಸಿನಲ್ಲಿ ಜಮೀನು, ತೋಟ ಹೊಂದಿರುವ ಕೆಲವರು ನಾಲೆಯ ನೀರಿಗೆ ಕನ್ನ ಹಾಕುತ್ತಿದ್ದು, ಅಂತಹವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ಘಟಕದ ಅಧ್ಯಕ್ಷ ಆಲೂರು ಸಿದ್ದರಾಮಣ್ಣ ಒತ್ತಾಯಿಸಿದ್ದಾರೆ.

‘ಕೆಲವು ಬಲಾಢ್ಯರು ತಮ್ಮ ಹಣ ಮತ್ತು ರಾಜಕೀಯ ಪ್ರಭಾವ ಬಳಸಿ ಯಾವುದೇ ತೆರಿಗೆ ಪಾವತಿಸದೆ 6ರಿಂದ 10 ಇಂಚು ಗಾತ್ರದ ಪೈಪ್ ಅಳವಡಿಸಿ ನಾಲೆಯಿಂದ ನೇರವಾಗಿ ನೀರನ್ನು ಎತ್ತಿಕೊಳ್ಳುತ್ತಿದ್ದಾರೆ. ಇದರಿಂದ ಅಚ್ಚುಕಟ್ಟು ಪ್ರದೇಶದ ಕೊನೆ  ಭಾಗದ ರೈತರಿಗೆ ನೀರು ಸಿಗದಂತಾಗಿದೆ’ ಎಂದು ದೂರಿದರು.

ADVERTISEMENT

‘ಸಾಮಾನ್ಯವಾಗಿ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ 30 ದಿನ ನೀರು ಹರಿಸುವುದು ವಾಡಿಕೆ. ಆದರೆ, ಫೆಬ್ರುವರಿಯಲ್ಲಿ 42 ದಿನ ನೀರು ಹರಿಸಲಾಗಿದೆ. ಇದಕ್ಕೆ ಕಾರಣ ನಾಲೆಗಳಲ್ಲಿ ಹೂಳು, ಗಿಡಗಂಟಿ ಬೆಳೆದಿರುವುದು. ಪ್ರಮುಖವಾಗಿ ನೀರನ್ನು ಅಕ್ರಮವಾಗಿ ಬಳಸುತ್ತಿರುವುದು’ ಎಂದು ಅವರು ಆರೋಪಿಸಿದ್ದಾರೆ.

‘ಮುಂಚೆಯಂತೆ ಚೌಡಿಗಳು ಪ್ರತಿ ತೂಬಿನ ಹತ್ತಿರ ಕುಳಿತು ರೈತರಿಗೆ ನೀರು ಹರಿಸುತ್ತಿಲ್ಲ. ನಾಲೆಗಳಿಂದ ನೀರು ಕನ್ನಾ ಹಾಕುತ್ತಿರುವ ಫೋಟೊ, ವಿಡಿಯೊ ಕೊಟ್ಟಿದ್ದರೂ ವಿಶ್ವೇಶ್ವರಯ್ಯ ನೀರಾವರಿ ನಿಗಮದ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ನೀರಿನ ನಿರ್ವಹಣೆ ಸರಿ ಇಲ್ಲದ ಕಾರಣಕ್ಕೆ ಬಹಳಷ್ಟು ಪ್ರಮಾಣದ ನೀರು ವೇದಾವತಿ ನದಿಯನ್ನು ಸೇರುತ್ತಿದೆ. 2017ರಲ್ಲಿ ಜಲಾಶಯ ಡೆಡ್ ಸ್ಟೋರೇಜ್ ತಲುಪಿದ್ದನ್ನು ಎಲ್ಲರೂ ಮರೆತಂತಿದೆ. ಮತ್ತೊಮ್ಮೆ ಅಂತಹ ಪರಿಸ್ಥಿತಿ ಬರಬಾರದು ಎಂದಾದರೆ ನೀರಿನ ಕನ್ನ ತಪ್ಪಿಸಬೇಕು. ನಾಲೆಗಳನ್ನು ದುರಸ್ತಿ ಮಾಡಿಸಬೇಕು’ ಎಂದು ಸಿದ್ದರಾಮಣ್ಣ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.